ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಷ್ಟೆ ಮಹಿಳೆಯರೂ ಸರಿಸಮಾನವಾಗಿ ಬದುಕಬೇಕೆಂದು ಬಸವಣ್ಣನವರು 12ನೇ ಶತಮಾನ ದಲ್ಲಿಯೇ ಚಿಂತನೆ ನಡೆಸಿ ಮಹಿಳೆಗೆ ಸಮಾನವಾದ ಅವಕಾಶ ನೀಡಿದ್ದರು. ಸಾಮಾಜಿಕ ಅಭಿವೃದ್ಧಿಯಾಗಬೇಕಾದರೆ ಮಹಿಳಾ ಸಬಲೀಕರಣ ಬಹಳ ಮುಖ್ಯ ಎಂದು ವಿಜಯಪುರ ತಹಶೀಲ್ದಾರ್ ಎ.ಡಿ.ಅಮರವಾಡಗಿ ಹೇಳಿದರು.
ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಕೆಜಿಎಸ್ ಶಾಲೆ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ನಿಡಗುಂದಿ, ಕೆಜಿಎಸ್ ಶಾಲೆಯ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ತಾಯಂದಿರ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಆಟೋ ಚಾಲಕರಿಂದ ಹಿಡಿದು ಬಾಹ್ಯಾಕಾಶ, ತಂತ್ರ ಜ್ಞಾನ, ರಾಜಕೀಯ, ಸೇನೆ, ಖಗೋಳಶಾಸ್ತ್ರ, ವಿಜ್ಞಾನ ಸೇರಿದಂತೆ ಎಲ್ಲ ರಂಗಗಳಲ್ಲಿ ಮಹಿಳೆ ಗುರುತಿಸಿಕೊಂಡಿದ್ದಾರೆ. ಆದರೂ ಮಹಿಳೆಯನ್ನು ಅಬಲೆ ಎನ್ನುವ ಮನಸ್ಥಿತಿ ಅಲ್ಲಲ್ಲಿ ತಲೆದೋರುತ್ತಿದೆ. ಇದು ಸಂಪೂರ್ಣವಾಗಿ ಬದಲಾಗಬೇಕು. ಪುರುಷನಷ್ಟೇ ಸಮನಾಗಿ ಬೆಳೆಯುತ್ತಿರುವ ಮಹಿಳೆಗೆ ಅನುಭೂತಿಗಿಂದ ಸಹಕಾರ ನೀಡುವುದು ಮುಖ್ಯ” ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಿ.ಟಿ.ಗೌಡರ ಮಾತನಾಡಿ, “ಮಹಿಳೆ ಸಾಹಸ ಕ್ಷೇತ್ರ ಆಯ್ಕೆ ಮಾಡಿಕೊಂಡು ಮುನ್ನಡೆದಾಗ ಅವಮಾನಿಸುವುದು ಸಹಜ. ಅಂಥ ಸಂದರ್ಭದಲ್ಲಿಯೂ ಹಿಂಜರಿಯದೆ ಮುಂದೆ ಸಾಗಿದಾಗ ಸಾಧನೆ ಗರಿ ಮುಡಿ ಸೇರುತ್ತದೆ. ಅವರನ್ನು ಪ್ರೋತ್ಸಾಹಿಸಿ ಉದ್ಯೋಗಶೀಲರಾಗಿಸಿ ಮುಖ್ಯವಾಹಿನಿಗೆ ತರುವ ಕಾರ್ಯ ಹೆಚ್ಚಾಗಬೇಕು” ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ ಮಾತನಾಡಿ, “ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರಯುತ ಶಿಕ್ಷಣ ಸಿಗುತ್ತಿಲ್ಲ. ಪೋಷಕರು ಮತ್ತು ಕುಟುಂಬಗಳನ್ನು ಕಡೆಗಣಿಸುವಂಥ ವಾತಾವರಣ ಹೆಚ್ಚುತ್ತಿದೆ. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಅಧ್ಯಾತ್ಮಿಕತೆ ಬಗ್ಗೆ ತಿಳಿಸಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ. ಮಹಿಳೆಯರು ಟಿವಿ ಸೀರಿಯಲ್, ಸಿನಿಮಾ ನೋಡುವ ಬದಲು ಅಕ್ಕಮಹಾದೇವಿಯವರಂಥ ಶರಣೆಯರ ವಚನಗಳನ್ನು ಓದಿ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಸಮಗ್ರ ಬೇಸಾಯ ಪದ್ಧತಿ ಅನುಸರಿಸಿ ಸ್ವಾವಲಂಬಿಗಳಾಗಿ: ಡಾ. ರವೀಂದ್ರ ಬೆಳ್ಳಿ ಸಲಹೆ
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ, ಆರ್.ಎ. ನಧಾಪ್, ಎಚ್.ಎಚ್. ದೊಡಮನಿ, ಡಾ.ಮಲ್ಲಮ್ಮ ರೆಡ್ಡಿ, ಸಾಹೇಬ ಗೌಡ ಬಿರಾದರ, ಬಿ.ಸಿ.ನಧಾಪ್, ಬಿ.ಎಸ್.ಇಜೇರಿ, ಸಂಗಮೇಶ ಮಡಿಕೇಶ್ವರ, ಎಸ್.ಬಿ.ಬಜಂತ್ರಿ, ಪಿ.ಎಸ್.ರಾಠೋಡ, ಎಸ್ಡಿಎಂಸಿ ಅಧ್ಯಕ್ಷ ರೇವಣಸಿದ್ದಯ್ಯ ಹಿರೇಮಠ ಸೇರಿ ಹಲವರು ಇದ್ದರು.
