ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಯಿಂದ ಕಳೆದ ಎಂಟು ದಿನಗಳಿಂದ ತಾಲೂಕಿನಲ್ಲಿರುವ ಎಲ್ಲ ಕೆರೆ ಮತ್ತು ಹಳ್ಳಗಳಲ್ಲಿ ನೀರು ಹರಿಸಲಾಗುತ್ತಿದೆ.
ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಅದಲ್ಲದೆ ಅಂತರ್ಜಲ ಮಟ್ಟ ಹೆಚ್ಚಾಗಿ ಬಾವಿಗಳಲ್ಲಿ, ಬೋರವೆಲ್ಗಳಲ್ಲಿ ನೀರು ಹೆಚ್ಚಾಗಲಿದೆ. ತಾಲೂಕಿನ ಸಂಗೋಗಿ, ಹಂಜಗಿ, ಲೋಣ ಕೆಡಿ ಮತ್ತು ಅರ್ಜನಾಳ ಕೆರೆಗಳನ್ನು ತುಂಬಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದಲ್ಲದೆ ನಾದಕೆಡಿ, ಭೈರುಣಗಿ, ಹಲಸಂಗಿ ಸೇರಿದಂತೆ ಇಂಡಿಯ ಹಳ್ಳ, ಇಂಗಳಗಿ, ನೆಹರು ನಗರ, ಹಿರೇಬೇವನೂರ, ಭೂಯ್ಯಾರ ಹಳ್ಳಗಳನ್ನು ತುಂಬಿಸಲಾಗಿದ್ದು ಅಲ್ಲಿಂದ ನೀರು ಭೀಮಾ ನದಿ ಸೇರುತ್ತಿದೆ.
ಬರದಿಂದ ಕಂಗೆಟ್ಟಿರುವ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ಕುರಿತು ಕೃಷ್ಣಾ ಮುಖ್ಯ ಕಾಲುವೆಯಿಂದ ನೀರು ಆಸರೆ ಯಾಗುತ್ತಿದೆ. ಸಕಾಲದಲ್ಲಿ ಮಳೆ ಯಾಗದೆ ಇರುವದರಿಂದ ತಾಲೂಕಿನ ಕೆರೆ ಹಳ್ಳ ಬಾವಿ, ಬೋರು ಗಳು ಬತ್ತಿದ್ದರಿಂದ ಕುಡಿಯುವ ನೀರಿನ ಉಂಟಾಗಬಾರದೆoದು ಕೃಷ್ಣಾ ಕಾಲುವೆಯಿಂದ ನೀರು ತುಂಬಿಸಲಾಗುತ್ತಿದೆ.
ಇಂಡಿಯ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಕಾರ್ಯ ಪಾಲಕ ಅಭಿಯಂತರ ಶಾಂತವೀರ ಮಠ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅರವಿಂದ ಪೋಳ, ಶ್ರೀಮಂತ ಅಂಗಡಿ, ಕಿರಿಯ ಅಭಿಯಂತರ ಮಹಮ್ಮದ ಸಾಧಿಕ ಹೊನ್ನುಟಗಿ ಈ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಕಾಲುವೆ ನೀರು ಕೆರೆ ಹಳ್ಳಗಳಿಗೆ ಬಂದಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಕೆಬಿಜೆಎನ್ಎಲ್ ರಾಂಪೂರದ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ, ಕುಡಿಯುವ ನೀರಿಗೆ ಮೊದಲ ಪ್ರಾಶಸ್ತವ್ಯ ನೀಡಲು ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆದೇಶ ಮಾಡಿದ್ದರಿಂದ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಕೆರೆಗಳನ್ನು ತುಂಬಿಸುವದಕ್ಕೆ ಮೊದಲ ಆದ್ಯತೆ ನೀಡಿ ಕಾಲುವೆ ಮೂಲಕ ನೀರು ಹರಿಸಲಾಗಿದೆ. ನಾದ ಹಳ್ಳಕ್ಕೆ ನೀರು ಹರಿಸಿದರೆ ಹಳ್ಳದ ಸುತ್ತಮುತ್ತಲಿನ 8 ರಿಂದ 9 ಹಳ್ಳಿಗಳಲ್ಲಿನ ಜನರಿಗೆ ನೀರಿನ ಅನುಕೂಲವಾಗಲಿದೆ. ಸಾರ್ವಜನಿಕರು ಕುಡಿಯುವ ನೀರಿಗಾಗಿ ಮಾತ್ರ ನೀರು ಬಳಕೆ ಮಾಡಿಕೊಳ್ಳಬೇಕು. ಕೃಷಿಗೆ ಬಳಕೆ ಮಾಡಿಕೊಳ್ಳಬಾರದು ಎಂಬುದು ನನ್ನ ಮನವಿ ಎಂದರು.
ಕೆಬಿಜೆಎನ್ಎಲ್ ಸಾಲೋಟಗಿ ಕಿರಿಯ ಅಭಿಯಂತರ ಮಹಮ್ಮದ ಸಾಧಿಕ ಹೊನ್ನುಟಗಿ ಮಾತನಾಡಿ, ಸಧ್ಯ ಕೆರೆ ಮತ್ತು ಹಳ್ಳಗಳಿಗೆ ನೀರು ತುಂಬಿರುವದು ಮುಂದಿನ ಒಂದು ತಿಂಗಳು ಗ್ರಾಮದ ಜನರಿಗೆ ನೀರಿನ ತೊಂದರೆ ಯಾಗುವದಿಲ್ಲ ಎಂದರು.
