ನಾರಾಯಣಪುರ ಜಲಾಶಯದಿಂದ ವಿಜಯಪುರ ಜಿಲ್ಲೆಯ ಇಂಡಿ ಶಾಖಾ ಕಾಲುವೆ ಹಾಗೂ ಇಂಡಿ ಏತ ನೀರಾವರಿ ಕಾಲುವೆಗಳ ಮೂಲಕ ಕೆರೆ ಅವಲಂಬಿತ ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ 0.50 ಟಿಎಂಸಿ ನೀರನ್ನು ಬಿಡುಗಡೆಗೊಳಿಸಲಾಗಿದ್ದು, ನೀರು ನಿಗದಿತ ಅಂತರವನ್ನು ತಲುಪುವಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ನಾರಾಯಣಪುರ ಜಲಾಶಯದಿಂದ ಪ್ರಸ್ತುತ ಹರಿಬಿಟ್ಟಿರುವ 1.50 ಟಿಎಂಸಿ ನೀರಿನೊಂದಿಗೆ ಹೆಚ್ಚುವರಿಯಾಗಿ 0.50 ಟಿಎಂಸಿ ನೀರನ್ನು ಬಿಡುಗಡೆಗೊಳಿಸಲಾಗಿದ್ದು, ನೀರು ಪೋಲಾಗದಂತೆ ಮಿತವಾಗಿ ಬಳಸುವ ಕುರಿತು ಮತ್ತು ನೀರು ನಿಗದಿತ ಅಂತರವನ್ನು ತಲುಪುವಂತೆ ನಿಗಾ ವಹಿಸುವಂತೆ ಕಂದಾಯ, ಪೊಲೀಸ್, ನೀರಾವರಿ ಸ್ಥಳೀಯ ಸಂಸ್ಥೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಿದ್ದಾರೆ.
ವಾಚ್ ಅಂಡ್ ವಾರ್ಡ್ ಕೈಗೊಳ್ಳಲು ನಿಯೋಜಿತ ಅಧಿಕಾರಿ-ಸಿಬ್ಬಂದಿ ಕುಡಿಯುವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾದ ನೀರನ್ನು ಬೇರೆ ಉದ್ದೇಶಕ್ಕೆ ಬಳಸದಂತೆ ನಿಗಾ ವಹಿಸಬೇಕು. ಅನಧಿಕೃತ ಪಂಪ್ಸೆಟ್ ಕಂಡುಬಂದಲ್ಲಿ ಕರ್ನಾಟಕ ನೀರಾವರಿ ಕಾಯ್ದೆ-1965ರಂತೆ ಕ್ರಮಕೈಗೊಳ್ಳಬೇಕು. ಉಪವಿಭಾಗಾಧಿಕಾರಿಗಳು ದೈನಂದಿನ ವರದಿ ಪಡೆದು, ನೀರಿನ ಸದ್ಬಳಕೆ ಕುರಿತು ಸಾಕ್ಷ್ಯಚಿತ್ರಗಳನ್ನು ಸಲ್ಲಿಸುವಂತೆ ಡಿಸಿ ಸೂಚಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ತೊಗರಿ ಇಳುವರಿಯಿಲ್ಲದೆ ರೈತರು ಸಂಕಷ್ಟದಲ್ಲಿ; ಪರಿಹಾರ ಕೋರಿ ಸರ್ಕಾರಕ್ಕೆ ಮನವಿ
ನೀರು ಬಿಡುವ ದಿನಗಳಲ್ಲಿ ಕಾಲುವೆಗೆ ಎಡ-ಬಲ ಭಾಗಕ್ಕೆ ತಾಗಿದಂತೆ ಅಳವಡಿಸಿರುವ ರೈತರ ವಿದ್ಯುತ್ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಅಧಿಕಾರಿಗಳು ಕಡ್ಡಾಯವಾಗಿ ಕಡಿತಗೊಳಿಸಬೇಕು. ಸೋಲಾರ್ ಆಧಾರಿತ ಮೋಟಾರ್, ಜನರೇಟರ್ಗಳ ಸಂಪರ್ಕ ಸಹ ಕಡಿತಗೊಳಿಸಬೇಕು. ಕಾಲುವೆಗಳ ಮೇಲುಸ್ತುವಾರಿಗೆ ನೇಮಿಸಿದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಆದೇಶಿಸಿದ್ದಾರೆ.