ಬುಧವಾರ ನಡೆದ ಸಂಸತ್ ಭವನದ ಮೇಲಿನ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಯು ಖಂಡನೀಯ ಮಾತ್ರವಲ್ಲ, ಅತ್ಯಂತ ಆಘಾತಕಾರಿಯಾದುದು ಎಂದು ಕಾಂಗ್ರೆಸ್ನ ವಿದ್ಯಾರ್ಥಿ ಘಟಕ ಎನ್ಎಸ್ಯುಐ ಹೇಳಿದೆ.
ಸಂಸತ್ ಭವನಕ್ಕೆ ಇಬ್ಬರು ನುಗ್ಗಿದ್ದ ಘಟನೆಯನ್ನು ಖಂಡಿಸಿ ವಿಜಯಪುರದ ಎನ್ಎಸ್ಯುಐ ಮುಖಂಡ ಅಮೀತ ಚವ್ಹಾಣ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಅತ್ಯಂತ ಬಿಗಿಭದ್ರತೆಯ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇದು ಸಂಪೂರ್ಣವಾಗಿ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದು ಸ್ಪಷ್ಟವಾಗಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನು ದೇಶದ ಮುಂದಿಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.
“ಇಪ್ಪತ್ತೆರಡು ವರ್ಷಗಳ ಹಿಂದೆ (13-12-2001) ಸಂಸತ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಅದೇ ದಿನವನ್ನೇ ಆರಿಸಿಕೊಂಡು ಈ ದಾಳಿ ನಡೆದಿರುವುದನ್ನು ಗಮನಿಸಿದರೆ ಇದರ ಹಿಂದೆ ಬೇರೆ ಹುನ್ನಾರಗಳಿವೆ ಎಂಬ ಸಂಶಯವೂ ಮೂಡುತ್ತಿದೆ. 2001ರ ದಾಳಿಯ ಸಮಯದಲ್ಲಿಯೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವೇ ಅಧಿಕಾರದಲ್ಲಿತ್ತು ಎಂಬುದನ್ನು ಗಮನಿಸಬೇಕಾಗುತ್ತದೆ. ಇದು ದೇಶದ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ” ಎಂದಿದ್ದಾರೆ.
“ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರೇ ಪಾಸ್ ನೀಡಿರುವ ವರದಿಗಳು ಬರುತ್ತಿವೆ. ಈ ಸುದ್ದಿ ನಿಜವಾಗಿದ್ದಲ್ಲಿ ಸಂಸದರನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕು. ಪಾಸ್ ನೀಡಿರಬೇಕಾಗಿದ್ದರೆ ಯುವಕರು ಸಂಸದರ ಪರಿಚಯಸ್ಥರಾಗಿರಬಹುದು. ಪರಿಚಯಸ್ಥರಲ್ಲದೆ ಇದ್ದರೆ ಅಪರಿಚಿತರಿಗೆ ಪಾಸುಗಳನ್ನು ಹೇಗೆ ನೀಡಲಾಯಿತು ಎನ್ನುವ ಪ್ರಶ್ನೆ ಕೂಡಾ ಹುಟ್ಟುತ್ತದೆ. ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆಯುವ ಅನಾಹುತ ಕೂಡಾ ಶಿಕ್ಷಾರ್ಹ ಎನ್ನುವುದನ್ನು ತಿಳಿದುಕೊಳ್ಳಬೇಕು” ಎಂದು ಹೇಳಿದ್ದಾರೆ.
“ದೇಶದ ಹೃದಯದಂತಿರುವ ಸಂಸತ್ ಭವನಕ್ಕೆ ಬೇರೆ ಯಾವುದೇ ಪ್ರದೇಶ ಇಲ್ಲವೆ ಕಟ್ಟಡವನ್ನು ಮೀರಿದ ಬಿಗಿ ಭದ್ರತೆಯನ್ನು ನೀಡಲಾಗಿದೆ. ಹೀಗಿದ್ದರೂ ಈ ಯುವಕರು ಸ್ಮೋಕ್ ಬಾಂಬು ಹಿಡಿದುಕೊಂಡು ಸಂಸತ್ ಒಳಗೆ ಹೇಗೆ ಪ್ರವೇಶಿಸಿದರು? ಈ ಕೃತ್ಯದಲ್ಲಿ ಒಳಗಿನವರೇ ಯಾರಾದರೂ ಭಾಗಿಯಾಗಿದ್ದಾರೆಯೇ? ಈ ಯುವಕರ ಕೃತ್ಯದ ಹಿಂದೆ ಬೇರೆ ಯಾವುದಾದರೂ ಬಾಹ್ಯ ಶಕ್ತಿಗಳ ಕೈವಾಡ ಇದೆಯೇ? ದೇಶದ ಸಂಸತ್ ಭವನವೇ ಸುರಕ್ಷಿತವಾಗಿಲ್ಲದಿರುವಾಗ ದೇಶದ ಗಡಿ ಸುರಕ್ಷಿತವಾಗಿರುತ್ತದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿರುವ ಹೊಣೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ” ಎಂದು ತಿಳಿಸಿದ್ದಾರೆ.
ಪಾಸ್ ನೀಡಿದ ವ್ಯಕ್ತಿ ಕಾಂಗ್ರೆಸ್ ಪಕ್ಷದವನಾಗಿರುತ್ತಿದ್ದರೆ ಮೋದಿ – ಶಾ – ನಡ್ಡಾ ಸಹಿತ ಬಿಜೆಪಿಯ ಎಲ್ಲಾ ಘಟಾನುಘಟಿ ನಾಯಕರುಗಳು ಮಾಧ್ಯಮದ ಮುಂದೆ ಬಂದು ಕಾಂಗ್ರೆಸ್ ಪಕ್ಷವನ್ನು ಹಿಗ್ಗಾ ಮುಗ್ಗಾ ಬೈದು , ಕಾಂಗ್ರೆಸ್ ಪಕ್ಷ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿರುವುದಕ್ಕೆ ಇದೊಂದೇ ಸಾಕ್ಷಿ ಸಾಕು ಎಂದು , ಸತ್ಯಾಸತ್ಯತೆ ಹೊರ ಬರುವುದಕ್ಕೆ ಮೊದಲೇ ಆರೋಪಿಸುತ್ತಿದ್ದರು.
ಪಾಸ್ ನೀಡಿದ ವ್ಯಕ್ತಿ ಬಿಜೆಪಿಗನಾದ್ದರಿಂದ ಮೆರವಣಿಗೆ ಪ್ರತಿಭಟನೆ ನಡೆಯದೆ ದೇಶ ಮೌನವಾಗಿ ಪ್ರತಿಭಟಿಸಿತು. ಶಾಂತಿ ಪ್ರಿಯ ಕಾಂಗ್ರೆಸ್ ಪಕ್ಷ ಕಲುಷಿತ ಬಿಜೆಪಿಗರಿಗೆ ತುತ್ತಾಗದೆ ಬಚಾವಾಯಿತು.