ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಹಿನ್ನೆಲೆಯಲ್ಲಿ ʼಮಾದಿಗ ಸಮುದಾಯಕ್ಕೆ ಅನ್ಯಾಯʼವಾದರೆ ಸಹಿಸುವುದಿಲ್ಲ ಎಂದು ಮಾದಿಗ ದಂಡೋರ ಎಂಆರ್ಪಿಎಸ್ ಉತ್ತರ ಕರ್ನಾಟಕ ಅಧ್ಯಕ್ಷ ಶ್ರೀ ಮಂಜುನಾಥ ಕೊಂಡಪಲ್ಲಿ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯಕ್ಕೆ ಟಿಕೆಟ್ ತಪ್ಪಿಸಲು ನಡೆಯುತ್ತಿರುವ ಷಡ್ಯಂತ್ರಗಳನ್ನು ಇಡೀ ರಾಜ್ಯದ ಮಾದಿಗ ಸಮುದಾಯ ಎಚ್ಚರಿಕೆಯಿಂದ ಪಕ್ಷಾತೀತವಾಗಿ ಗಮನಿಸುತ್ತಿದೆ” ಎಂದರು.
“ಪರಿಶಿಷ್ಟ ಜಾತಿಗಳಲ್ಲಿಯೇ ಅತ್ಯಂತ ಬಹುಸಂಖ್ಯಾತರಾದ ಮಾದಿಗ ಸಮುದಾಯವನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ನಡೆಯುತ್ತಿರುವ ಪ್ರಯತ್ನಗಳು ಇದೇ ಮೊದಲೇನಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿನ ಮಾದಿಗ ವಿರೋಧಿ ಶಕ್ತಿಗಳು ತೀರ ಮುಸುಕಿನಿಂದ ಹೊರಬಂದು ಎಡಗೈ ಸಮುದಾಯಕ್ಕೆ ಟಿಕೆಟ್ ಕೊಡಲೇಬಾರದೆಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವುದು ನಮ್ಮನ್ನು ಕೆರಳಿಸಿದೆ. ಇದರ ಪರಿಣಾಮವನ್ನು ಪ್ರಸಕ್ತ ಚುನಾವಣೆಯಲ್ಲಿ ಖಂಡಿತ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ನಿರುಪದ್ರವಿಯಾಗಿರುವ ಮಾದಿಗ ಸಮುದಾಯ ಯಾವತ್ತಿಗೂ ಎಡಗೈ ಬಲಗೈ ಎಂಬ ಮನೋಭಾವನೆಯನ್ನು ಇಟ್ಟುಕೊಂಡು ಮಾತನಾಡಿದ ಉದಾಹರಣೆಗಳಿಲ್ಲ. 60ರ ದಶಕದ ಬಿ ಶಂಕರಾನಂದ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಇತ್ತೀಚಿನ ಎಚ್ ಸಿ ಮಹದೇವಪ್ಪನವರವರೆಗೆ ಎಲ್ಲ ಬಲಗೈ ನಾಯಕರನ್ನೂ ನಮ್ಮವರೆಂದು ಅಪ್ರತಿಮವಾಗಿ ಗೌರವಿಸಿದ ಇತಿಹಾಸ ಎಡಗೈ ಸಮುದಾಯದ್ದಾಗಿದೆ. ಆದರೆ ಕೋಲಾರದ ಬೆಳವಣಿಗೆಗಳು ಈ ಸೌಹಾರ್ದವನ್ನು ಹಾಳುಗೆಡವಲು ಮಾಡಿರುವ ಆತಂಕಕಾರಿ ಪಿತೂರಿಯಾಗಿದೆ. ಇದು ವಿರೋಧಿ ಬಣದ ವಾಸ್ತವ ಮನಸ್ಥಿತಿಯನ್ನು ತಿಳಿಸುವ ಒಂದು ಎಚ್ಚರಿಕೆಯ ಘಂಟೆಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನಾಲ್ಕೈದು ಮಂದಿ ಬಂದು ನನ್ನಿಂದ ಒತ್ತಾಯವಾಗಿ ಸಹಿ ಹಾಕಿಸಿಕೊಂಡರು: ಮಲ್ಲಿಕಾರ್ಜುನ ಸ್ವಾಮೀಜಿ
“ಸಮುದಾಯದ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಅವರ ನಾಯಕತ್ವದಲ್ಲಿ ನಾವು ಮಾದಿಗರ ವಿರುದ್ಧ ನಡೆಯುತ್ತಿರುವ ಈ ರೀತಿಯ ಕುತಂತ್ರಗಳನ್ನು ಬಯಲಿಗೆಳೆದು ವಿರೋಧಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸಲಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ.
