ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ತಲೆಗೆ ಹೊಡೆದಿದ್ದು, ತಲೆಗೆ ಬಲವಾಗಿ ಪೆಟ್ಟು ಬಿದಿರುವ ಘಟನೆ ಯಾದಗಿರಿ ನಗರದ ವಿದ್ಯಾರಣ್ಯ ಶಾಲೆಯಲ್ಲಿ ನಡೆದಿದ್ದು, ಈ ಘಟನೆಯನ್ನು ಖಂಡಿಸಿ ಯಾದಗಿರಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಜೂನ್ 13ರಂದು ಪ್ರತಿಭಟನೆ ಹಮ್ಮಿಕೊಳ್ಞಲಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದ್ದಾರೆ.
ʼವಿದ್ಯಾರಣ್ಯ ಶಾಲೆಯಲ್ಲಿ 6ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮನೀಷ್ ಎನ್ನುವ ವಿದ್ಯಾರ್ಥಿಗೆ ಶಾಲಾ ಶಿಕ್ಷಕಿಯೊಬ್ಬರು ತಲೆಗೆ ಕಟ್ಟಿಗೆ ರೂಲ್ನಿಂದ ಹೊಡೆದಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ವಿದ್ಯಾರ್ಥಿಯನ್ನು ಸೋಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹಾಗೂ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆʼ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ʼವಿದ್ಯಾರ್ಥಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಅದಕ್ಕೆ ಸುಮಾರು 8 ರಿಂದ 10 ಲಕ್ಷ ರೂಪಾಯಿ ಖರ್ಚಾಗಲಿದ್ದು, ಹಣ ಹೊಂದಿಸಿಕೊಂಡು ಬಂದರೆ ಶಸ್ತ್ರ ಚಿಕಿತ್ಸೆ ನೀಡುವುದಾಗಿ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ವಿದ್ಯಾರಣ್ಯ ಶಾಲೆಗೆ ಸಂಬಂಧಪಟ್ಟವರನ್ನು ಭೇಟಿ ಮಾಡಲಾಗಿದ್ದು, ಯಾದಗಿರಿ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲʼ ಎಂದು ದೂರಿದರು.
ʼವಿದ್ಯಾರ್ಥಿಯ ಚಿಕಿತ್ಸೆಗೆ ತಗಲುವ ಖರ್ಚುವೆಚ್ಚ ಸಂಪೂರ್ಣ ಶಾಲಾ ಮಂಡಳಿ ಭರಿಸಬೇಕು. ಒಂದು ವೇಳೆ ಚಿಕಿತ್ಸೆ ವೆಚ್ಚ ಭರಿಸದೇ ಹೋದಲ್ಲಿ ಇದೆ ತಿಂಗಳು ಜೂ. 13ರಂದು ಶಾಲೆ ಗೇಟ್ಗೆ ಮುಳ್ಳು ಬಡೆದು ಪ್ರತಿಭಟನೆ ನಡೆಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಜೀಜ್ ಸಾಬ್ ಐಕೂರು, ಮಲ್ಲಿಕಾರ್ಜುನ ಕುರಕುಂದಿ, ಮಹಾದೇವಪ್ಪ ಬಿಜಾಸಪೂರಕರ್, ಮಾನಪ್ಪ ಬಿಜಾಸಪೂರಕರ್ ಇದ್ದರು.