ಕಟ್ಟಡ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು. ಅವರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಎಐಯುಟಿಯುಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದೆ. ಸಂಘಟನೆಯ ಕಾರ್ಯಕರ್ತರು ಯಾದಗಿರಿಯಲ್ಲಿಯೂ ಪ್ರತಿಭಟನೆ ನಡೆಸಿದ್ದು, ಯಾದಗಿರಿ ವೃತ್ತ ನಿರೀಕ್ಷಕ ಶಿವರಾಜ್ ಪಾಟೀಲ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಕಟ್ಟಡ ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳನ್ನು ಒದಗಿಸುವ ಆಶಯದೊಂದಿಗೆ ಕಲ್ಯಾಣ ಮಂಡಳಿಯು ಅಸ್ತಿತ್ವಕ್ಕೆ ಬಂದಿದೆ. ಮಂಡಳಿಯು ಕಟ್ಟಡ ಕಾರ್ಮಿಕರಿಗೆ ಎಲ್ಲ ಘೋಷಿತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಆದರೆ, ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಕಾರ್ಮಿಕರನ್ನು ಹಕ್ಕುಗಳಿಂದ ವಂಚಿತರನ್ನಾಗಿಸುತ್ತಿದೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
“ನೊಂದಾಯಿತ ಕಾರ್ಮಿಕನ ಇಡೀ ಕುಟುಂಬಕ್ಕೆ ಸಿಗಬೇಕಾದ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ. ಕಳೆದ 2 ವರ್ಷಗಳಿಂದ ಬರಬೇಕಾದ ಶೈಕ್ಷಣಿಕ ಸಹಾಯಧನ ಇನ್ನೂ ಬಂದಿಲ್ಲ. ಎಲ್ಲರಿಗೂ ಸೂರು ಕಟ್ಟುವ ಈ ಕಟ್ಟಡ ಕಾರ್ಮಿಕರು ತಮಗೊಂದು ಗೂಡು ಕಟ್ಟಿಕೊಳ್ಳಲು ಆಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇಂದಿಗೂ ಬಹುತೇಕ ಕಟ್ಟಡ ಕಾರ್ಮಿಕರು ನೊಂದಾವಣೆಯಾಗದೆ ಹೊರಗುಳಿದ್ದಾರೆ. ಆದರೆ, ಕೆಲವೆಡೆ ಕಟ್ಟಡ ಕಾರ್ಮಿಕರಲ್ಲದವರು ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ವಂಚಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಬೇಡಿಕೆಗಳು:
1) ಕಳೆದ 2 ವರ್ಷಗಳಿಂದ ಬಾಕಿಯಿರುವ ಶೈಕ್ಷಣಿಕ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಿ. ಪ್ರಸಕ್ತ 2023-24ನೇ ವರ್ಷದ ಶೈಕ್ಷಣಿಕ ಸಹಾಯಧನದ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಿ.
2) ಅರ್ಹ ಕಾರ್ಮಿಕನಿಗೆ ಪಿಂಚಣಿಗಾಗಿ 6 ತಿಂಗಳೂಳಗೆ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ತೆಗೆದುಹಾಕಿ ಹಾಗೂ ಮೊದಲ ಬಾರಿಗೆ ಕಂದಾಯ ಅಧಿಕಾರಿಗಳು ‘ಜೀವಿತ ಪ್ರಮಾಣ’ ಪತ್ರವನ್ನು ನೀಡಿದ ನಂತರ, ಮುಂದಿನ ವರ್ಷಗಳಲ್ಲಿ ಕಾರ್ಮಿಕ ಇಲಾಖೆಯಿಂದಲೇ ಜೀವಿತ ಪ್ರಮಾಣ ಪತ್ರ ನೀಡಬೇಕು. ಮತ್ತು ಬೇರೆ ಯಾವುದೇ ಪಿಂಚಣಿ ಪಡೆದರೂ ಈ ಪಿಂಚಣಿಯನ್ನು ನಿಲ್ಲಿಸಬಾರದು.
3) ರೂ.5 ಲಕ್ಷ ರೂಪಾಯಿಗಳ ‘ನಗದು ರಹಿತ ಆರೋಗ್ಯ ಸೇವೆ’ಯನ್ನು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಕೂಡಲೇ ಜಾರಿಗೊಳಿಸಿ.
4) ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಮಂಡಳಿಯು ರೂ. 5 ಲಕ್ಷ ಸಹಾಯಧನ ಒದಗಿಸಬೇಕು.
6) ಮಂಡಳಿಯ ಸದಸ್ಯತ್ವದ ನವೀಕರಣ ಅವಧಿಯನ್ನು ಕೇವಲ 1 ವರ್ಷಕ್ಕೆ ಇಳಿಸಿರುವ ಮಂಡಳಿಯ ನಿರ್ಧಾರವನ್ನು ಕೈಬಿಡಿ ಹಾಗೂ ಈ ಬಗ್ಗೆ ಹಿಂದಿನ ವಿಧಾನವನ್ನು ಮುಂದುವರಿಸಿ.
6) ಸ್ಲಂ ಬೋರ್ಡ್ ಗೆ ನೀಡಿದ 518 ಕೋಟಿ ರೂಪಾಯಿ ಮಂಡಳಿಯ ಹಣವನ್ನು ಕೂಡಲೇ ವಾಪಸ್ ಪಡೆಯಿರಿ.
7) ಮಂಡಳಿಯ ಹಣ ಪೋಲು ಮಾಡುವ ಶಿಶುವಿಹಾರ, ಅಂಗನವಾಡಿ, ಮೊಬೈಲ್ ಕ್ಲಿನಿಕ್ ಇತ್ಯಾದಿ ಯೋಜನೆಗಳನ್ನು ನಿಲ್ಲಿಸಿ.
8) ಅವಶ್ಯಕತೆ ಇರುವ ಮಕ್ಕಳಿಗೆ ಮಾತ್ರ…ಲ್ಯಾಪ್ಟಾಪ್-ಟ್ಯಾಬ್ ಖರೀದಿಸಲು ಡಿಬಿಟಿ ಮೂಲಕ ಸಹಾಯಧನ ನೀಡಿ ಹಾಗೆ ಅವಶ್ಯಕತೆ ಇರುವ ಕಟ್ಟಡ ಕಾರ್ಮಿಕರಿಗೆ ಮಾತ್ರ ಟೂಲ್ ಕಿಟ್ ಖರೀದಿಸಲು ಡಿಬಿಟಿ ಮೂಲಕ ಸಹಾಯಧನ ನೀಡಿ.
9) ಮಂಡಳಿಯ ಆದಾಯ ಹೆಚ್ಚಿಸಲು ಬಾಕಿಯಿರುವ ಸೆಸ್ ಕೂಡಲೇ ವಸೂಲು ಮಾಡಲು ಕ್ರಮ ಕೈಗೊಳ್ಳಿ ಮತ್ತು ಸರ್ಕಾರಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ 2% ವರೆಗೆ ಸೆಸ್ ಹೆಚ್ಚಿಸಿ.
10) ಈವರೆಗೆ ವಿವಿಧ ಕಿಟ್ಗಳು, ಲ್ಯಾಪ್ ಟಾಪ್ ಖರೀದಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ.
11) ಬೋಗಸ್ ಕಾರ್ಡಗಳನ್ನು ಪತ್ತೆಹಚ್ಚಿ ರದ್ದು ಮಾಡಿ. ನೋಂದಾವಣೆಯನ್ನು ಈ ಹಿಂದೆ ಇದ್ದಂತೆ ಕಾರ್ಮಿಕ ಸಂಘಟನೆಯ ಮೂಲಕ ಮತ್ತು ಕಾರ್ಮಿಕ ಇಲಾಖೆಯ ಮೂಲಕ ಮಾತ್ರ ಮಾಡುವ ಕ್ರಮ ಜಾರಿಗೆ ತನ್ನಿ. ಏಜಂಟರ ಶೋಷಣೆ ತಪ್ಪಿಸಿ.
12) ಅಪಘಾತದಲ್ಲಿ ಜೀವ ಕಳೆದುಕೊಂಡ ಕಾರ್ಮಿಕರ ಕುಟುಂಬಗಳಿಗೆ 10ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿ. ಅಪಘಾತದಲ್ಲಿ ದುಡಿಯುವ ಸಾಮರ್ಥ್ಯವನ್ನು ಕಳೆದುಕೊಂಡ ಕಾರ್ಮಿಕರಿಗ 10 ಲಕ್ಷ ರೂಪಾಯಿಗಳ ಪರಿಹಾರ ಹಾಗೂ ಜೀವನ ಯೋಗ್ಯ ಪಿಂಚಣಿ ನೀಡಿ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ರಾಮಲಿಂಗಪ್ಪ ಬಿ.ಎನ್, ಸದಸ್ಯರಾದ ಭೀಮಪ್ಪ, ಶಂಕರ್ ಠಾಕೂರ್ ಚವ್ಹಾಣ್, ಮಲ್ಲಿಕಾರ್ಜುನ್, ಮಟಾಲ್ಲೇಶ್ ವಡ್ಡರ್, ಯಲ್ಲಾಲಿಂಗ, ಬಂದೆನವಾಜ್, ಅಂಬ್ರೇಶ್ ಸೇರಿದಂತೆ ಇತರರು ಇದ್ದರು.