ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ನೀರು ಶುದ್ಧಿಕರಣ ಘಟಕದ ಕಂಪೌಂಡ್ ಕುಸಿದು ಬಿದ್ದ ಪರಿಣಾಮ ಮೂರು ಕಾರುಗಳು ಜಖಂಗೊಂಡಿರುವ ಘಟನೆ ನಡೆದಿದ್ದು, ಪರಿಹಾರ ನೀಡುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದ್ದಾರೆ.
ಯಾದಗಿರಿ ನಗರದಲ್ಲಿ ಸೋಮವಾರ ಮದ್ಯಾಹ್ನ ಸುರಿದ ಭಾರೀ ಮಳೆಯಿಂದ ಅನಾಹುತ ಉಂಟಾಗಿದ್ದು, ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ನೀರು ಶುದ್ಧೀಕರಣ ಘಟಕದ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ನ್ಯೂ ಬಾಂಬೆ ಗ್ಯಾರೇಜ್ ಮುಂಭಾಗದಲ್ಲಿ ನಿಲ್ಲಿಸಿದ್ದ ಮೂರು ಕಾರುಗಳು ಜಖಂಗೊಂಡಿವೆ. ಇದಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ಕಂಪೌಂಡ್ ಮೊದಲೇ ಶಿಥಿಲಗೊಂಡಿತ್ತು. ಇದೀಗ ಮಳೆಗೆ ಕಾಂಪೌಂಡ್ ಬಿದ್ದ ಪರಿಣಾಮ ಕಾರುಗಳು
ಜಖಂಗೊಂಡು ಭಾರೀ ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗೃತಾ ಕ್ರಮವಹಿಸಿ ದುರಸ್ತಿ ಮಾಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಕಾರುಗಳು ಜಖಂಗೊಂಡಿವೆ” ಎಂದು ಆರೋಪಿಸಿದರು.
“ಮದ್ಯಾಹ್ನ ಊಟದ ಸಮಯಕ್ಕೆ ಮೆಕ್ಯಾನಿಕ್ಗಳು ಊಟಕ್ಕೆ ತೆರಳಿದ್ದರಿಂದ ಯಾವುದೇ ಸಾವು ನೋವು ಆಗಿಲ್ಲ. ವಾಹನಗಳಿಗೆ ಮಾತ್ರ ಭಾರೀ ನಷ್ಟವಾಗಿದ್ದು, ಇದನ್ನು ನಗರಸಭೆಯವರೇ ಭರಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮನರೇಗಾ ಕಾರ್ಮಿಕರಿಗೆ ವೇತನ ನೀಡುವಂತೆ ಆಗ್ರಹ
“ನೀರು ಶುದ್ಧೀಕರಣ ಘಟಕದ ಆವರಣಗೋಡೆ ಪೂರ್ತಿ ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕು ವಿದ್ಯುತ್ ಕಂಬಗಳು ಪಕ್ಕದಲ್ಲೇ ಇದ್ದು, ಅವುಗಳ ಮೇಲೆ ಗೋಡೆ ಬಿದ್ದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಇದೆಲ್ಲವನ್ನು ಮನಗಂಡು ನಗರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದಲ್ಲಿ ನೀರು ಶುದ್ಧೀಕರಣ ಘಟಕದ ಎದುರಿಗೆ ಇರುವ ರಸ್ತೆ ತಡೆದು ತೀವ್ರ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮೆಕ್ಯಾನಿಕ್ ಸಂಘದ ಅಧ್ಯಕ್ಷ ಶರಣಪ್ಪ ಕೌಳೂರು, ಬಾಂಬೆ ಗ್ಯಾರೇಜ್ ಮಾಲಿಕ ರಸೂಲ್ ಸಾಬ, ಮಹಮ್ಮದ್ ಗೌಸ್, ಆಂಜಿನೇಯ ನಾಯ್ಕೊಡಿ ಬೆಳಗೇರಾ, ಆನಂದ, ಭೀಮಣ್ಣ ವಾಡಿ, ಬನ್ನಪ್ಪ, ಮಹಮ್ಮದ್ ಷಬ್ಬೀರ್, ಖದೀರ್, ಕರೀಮ್ ಸೇರಿದಂತೆ ಇತರರು ಇದ್ದರು.