ಕೃಷಿ ಕೂಲಿಕಾರರು ನಿತ್ಯದ ದುಡಿಮೆಯನ್ನೇ ಅವಲಂಬಿಸಿ ಜೀವನ ಸಾಗಿಸಬೇಕು. ಇವರಿಗೆ ಈ ಹಿಂದೆ ಕೃಷಿ ರಂಗದಲ್ಲಿ ಕೆಲಸ ಸಿಗುತ್ತಿತ್ತು. ಇದೀಗ ರೈತರು ಹೆಚ್ಚಾಗಿ ಯಂತ್ರಗಳನ್ನು ಬಳಸುತ್ತಿರುವುದರಿಂದ ಕೃಷಿ ಕೂಲಿಕಾರರಿಗೆ ಮೊದಲಿನಂತೆ ರೈತರ ಹೊಲ ಗದ್ದೆಗಳಲ್ಲಿ ಕೆಲಸ ಸಿಗದಂತಾಗಿದೆ. ಪರಿಣಾಮ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಗಣನೀಯವಾಗಿ ಹೆಚ್ಚಾಗಿದೆ ಎಂದು ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ. ಪುಟ್ಟಮಾರು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಯಾದಗಿರಿ ಜಿಲ್ಲಾ ಸಮಿತಿ ಕಾರ್ಯಕರ್ತರು ʼಕೂಲಿಕಾರರ ಕೂಲಿಯ ಪ್ರಶ್ನೆ- ಸಮಾವೇಶʼ ಹಮ್ಮಿಕೊಂಡಿದ್ದು, ನಗರದ ಚರಬಸವೇಶ್ವರ ಹನುಮಾನ ದೇವಸ್ಥಾನದ ಬಳಿಯಿಂದ ಮೆರವಣಿಗೆ ಮಾಡುವುದರ ಮೂಲಕ ಆರಂಭಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಕೃಷಿ ಕೂಲಿಕಾರರು ಅಸಂಘಟಿತರಾಗಿದ್ದಾರೆ. ಅವರಿಗೆ ಸಾಮೂಹಿಕ ಚೌಕಾಸಿಯ ಮೂಲಕ ತಮ್ಮ ವೇತನ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇತರ ಅಸಂಘಟಿತ ಕೈಗಾರಿಕೆಗಳ ಕಾರ್ಮಿಕರಂತೆ ಕೃಷಿ ಕೂಲಿಕಾರರ ಕನಿಷ್ಠ ವೇತನವನ್ನು ಸರ್ಕಾರವೇ 5 ವರ್ಷಕ್ಕೊಮ್ಮೆ ಪರಿಷ್ಕರಿಸಿ ಪ್ರಕಟಿಸುತ್ತದೆ. ಆದರೆ, ಹೋರಾಟ ಮಾಡಿ ಒತ್ತಾಯ ಮಾಡಿದರೆ ಮಾತ್ರ ಸರ್ಕಾರ ಕೃಷಿ ಕೂಲಿಕಾರರ ಮೂಲ ವೇತನವನ್ನು ಪರಿಷ್ಕರಿಸುತ್ತದೆ. ಇಲ್ಲದೆ ಇದ್ದರೆ ಗಮನಹರಿಸುವುದೇ ಇಲ್ಲ” ಎಂದು ಆರೋಪಿಸಿದರು.
“ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿರುತ್ತವೆ. ಬೆಲೆ ಏರಿಕೆಗೆ ತಕ್ಕಂತೆ ಕೃಷಿ ಕೂಲಿಕಾರರ ಕೂಲಿ ಹೆಚ್ಚಳ ಆಗುವುದೇ ಇಲ್ಲ. ಪರಿಷ್ಕರಿಸಿದ ಕೂಲಿ ಜಾರಿಯಾಗುವುದಿಲ್ಲ. ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜಾರಿಮಾಡುವ ವ್ಯವಸ್ಥೆ ಇಲ್ಲ. ಇಂದಿಗೂ ಮಹಿಳಾ ಕೃಷಿ ಕೂಲಿಕಾರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿಲ್ಲ. ಮಹಿಳೆಯರಿಗೆ ಹಾಗಾಗಿ ಒಂದು ಮಾನವ ದಿನಕ್ಕೆ ಕನಿಷ್ಠ ಕೂಲಿ ₹600 ನೀಡಬೇಕು” ಎಂದು ಒತ್ತಾಯಿಸಿದರು.
“ಕೃಷಿ ಕೂಲಿಕಾರರಿಗಾಗಿ ಒಂದು ಸಮಗ್ರ ಕಾಯ್ದೆ ಜಾರಿಗೆ ತಂದು ಕನಿಷ್ಠ ವೇತನ ಹಾಗೂ ಇತರ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಬೇಕು. ಕೃಷಿ ಕೂಲಿಕಾರರ ದಿನದ ಕನಿಷ್ಠ ಕೂಲಿಯನ್ನು ₹600ಕ್ಕೆ ಏರಿಸಿ ಪರಿಷ್ಕರಿಸಬೇಕು. 57 ವರ್ಷ ತುಂಬಿದ ಪ್ರತಿಯೊಬ್ಬ ಕೃಷಿ ಕೂಲಿಕಾರನಿಗೆ ₹5000 ಪಿಂಚಣಿ ಸೌಲಭ್ಯ ನೀಡಬೇಕು. ಮಹಿಳೆಯರಿಗೆ ಪುರುಷರಷ್ಟೇ ಸಮಾನ ವೇತನ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹೂವಿನಹಡಗಲಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ರೈತ ಸಂಘ ಒತ್ತಾಯ
“ಕೂಲಿಕಾರರ ಅಪಘಾತ, ಅಕಾಲಿಕ ಮರಣ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ ಗರಿಷ್ಠ ಪರಿಹಾರ ನೀಡಬೇಕು. ಮಹಿಳಾ ಕೃಷಿ ಕೂಲಿಕಾರರಿಗೆ ಹೆರಿಗೆ ಭತ್ಯೆ ಹಾಗೂ ಹೆರಿಗೆ ರಜೆ ನೀಡಬೇಕು. ಕೃಷಿ ಕೂಲಿಕಾರರಿಗೆ ಸಂಬಳ ಸಹಿತ ವಾರದ ರಜೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ವರ್ಷದಲ್ಲಿ 200 ದಿನಗಳ ಕೆಲಸವನ್ನು ಕಡ್ಡಾಯವಾಗಿ ಒದಗಿಸಬೇಕು. ವಾಸಕ್ಕೆ ಸ್ವಂತ ಮನೆ ಇಲ್ಲದ ಕೂಲಿಕಾರರಿಗೆ ಮನೆಗಳನ್ನು ಒದಗಿಸಿ ದುಬಾರಿ ಮನೆ ಬಾಡಿಗೆ ನೀಡಬೇಕಾಗುವುದನ್ನು ತಪ್ಪಿಸಬೇಕು” ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ದಾವಲಸಾಬ ನದಾಫ್, ಜಿಲ್ಲಾ ಕಾರ್ಯದರ್ಶಿ ಅಯ್ಯಪ್ಪ ಅನ್ನೂರ, ಜಿಲ್ಲಾ ಸಮಿತಿ ಉಪಾಧ್ಯಕ್ಷರುಗಳಾದ ಶರಣಬಸವ ಜಂಬಲದಿನ್ನಿ, ಹಣಮಂತ ಗೋನಾಲ್, ಮಮತಾಜ್ ಬೇಗಂ, ರಂಗಮ್ಮ ಕಟ್ಟಿಮನಿ, ಬಾಬು ಗುಂಡಳ್ಳಿ, ಸಾಯಬಣ್ಣ ತಂಗಡಗಿ, ಜಿಲ್ಲಾ ಸಮಿತಿ ಸಹ ಕಾರ್ಯದರ್ಶಿಗಳಾದ ನಿಂಗಪ್ಪ ಕುರಕುಂದಿ, ಪ್ರಕಾಶ ಆಲ್ದಾಳ್, ಸಿದ್ದಯ್ಯ ಬೀರಗೊಂಡ, ಶಿವಪ್ಪ ಬಜಂತ್ರಿ ಜುಬೇರ ಪಾಷ, ಸಿದ್ದಮ್ಮ ಬಜಂತ್ರಿ, ಮಹಾದೇವಪ್ಪ ಇದ್ದರು.