ಪರ್ವತದಷ್ಟು ದೊಡ್ಡದಾದ ಕಲ್ಲೊಂದನ್ನು ನನ್ನ ಎದೆಯ ಮೇಲಿನಿಂದ ಎತ್ತಿ ಪಕ್ಕಕ್ಕೆ ಇರಿಸಿದಂತೆ, ನಾನು ಮತ್ತೆ ಉಸಿರಾಡಬಹುದು ಎಂಬಂತೆ ಅನಿಸುತ್ತಿದೆ. ನ್ಯಾಯವು ಈ ಬಗೆಯಲ್ಲಿ ನನ್ನ ಅನುಭವಕ್ಕೆ ಬರುತ್ತಿದೆ ಎಂದು ಬಿಲ್ಕಿಸ್ ಬಾನೋ ತಿಳಿಸಿದ್ದಾರೆ.
ತಮ್ಮ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಮಾತನಾಡಿದ ಬಿಲ್ಕಿಸ್ ಬಾನೋ, ನನಗೆ ಇಂದು ನಿಜವಾಗಿಯೂ ಹೊಸ ವರ್ಷ ಎಂದು ಹೇಳಿದರು.
”ನಾನು ಸಮಾಧಾನದಿಂದ ಕಣ್ಣೀರು ಹಾಕಿದೆ. ಒಂದೂವರೆ ವರ್ಷದ ನಂತರ ಮೊದಲ ಬಾರಿಗೆ ನಾನು ಖುಷಿಪಟ್ಟೆ. ನನ್ನ ಮಕ್ಕಳನ್ನು ತಬ್ಬಿಕೊಂಡೆ. ನನಗೆ, ನನ್ನ ಮಕ್ಕಳಿಗೆ ಹಾಗೂ ಶೋಷಣೆಗೊಳಗಾದ ಎಲ್ಲ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರಿಗೂ ಈ ತೀರ್ಪು ಸಮಾನ ನ್ಯಾಯದ ಮೂಲಕ ಭರವಸೆ ನೀಡಿದೆ. ಇದಕ್ಕಾಗಿ ನಾನು ಗೌರವಾನ್ವಿತ ಸುಪ್ರೀಂ ಕೋರ್ಟಿಗೆ ಧನ್ಯವಾನ ಹೇಳುತ್ತೇನೆ” ಎಂದು ಹರ್ಷ ವ್ಯಕ್ತಪಡಿಸಿದರು.
”ನಾನು ಮೊದಲೇ ಹೇಳಿದ್ದೆ ಈಗಲೂ ಹೇಳುತ್ತೇನೆ. ನನ್ನ ಇಂತಹ ಪ್ರಯಾಣವನ್ನು ನನ್ನೊಬ್ಬಳಿಂದಲೇ ಮಾಡಲು ಸಾಧ್ಯವಿಲ್ಲ. ನನ್ನ ಜೊತೆ ನನ್ನ ಪತಿ, ನನ್ನ ಮಕ್ಕಳಿದ್ದರು. ಪ್ರತಿ ಸಂಕಷ್ಟದ ಸಂದರ್ಭದಲ್ಲಿಯೂ ನನ್ನ ಕೈಹಿಡಿದು ಮುನ್ನಡೆಸಿ ಪ್ರೀತಿ ತೋರಿದ ಸ್ನೇಹಿತರನ್ನು ನಾನು ಹೊಂದಿದ್ದೆ. ಶೋಭಾ ಗುಪ್ತ ಅವರಂಥ ಅಸಾಧಾರಣ ವಕೀಲೆ ಹಾಗೂ ನ್ಯಾಯವಾದಿ ನನ್ನ ಬೆನ್ನಿಗಿದ್ದರು. ನನ್ನ ಜೊತೆ ಅವರು 20 ವರ್ಷಗಳ ಕಾಲ ಅಚಲವಾಗಿ ನಿಂತರು. ನ್ಯಾಯವನ್ನು ಪಡೆಯುವ ಭರವಸೆಯನ್ನು ಕಳೆದುಕೊಳ್ಳಲು ಅವರು ಬಿಡಲಿಲ್ಲ” ಎಂದು ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದ ಅರ್ಪಿಸಿದರು.
”ಒಂದೂವರೆ ವರ್ಷದ ಮೊದಲು ಆಗಸ್ಟ್ 15, 2022ರಂದು ನನ್ನ ಕುಟುಂಬವನ್ನು ನಾಶ ಮಾಡಿ, ನನ್ನ ಬದುಕನ್ನು ಹಾಳು ಮಾಡಿದ ಅಪಾರಾಧಿಗಳನ್ನು ಪೂರ್ಣಾವಧಿ ಶಿಕ್ಷೆಯ ಮುನ್ನವೇ ಬಿಡುಗಡೆ ಮಾಡಿದಾಗ ನಾನು ಸಂಪೂರ್ಣ ಕುಗ್ಗಿ ಹೋಗಿದ್ದೆ. ಆಗ ನನಗೆ ಲಕ್ಷಾಂತರ ಮಂದಿ ನನ್ನ ಬೆಂಬಲಕ್ಕೆ ಬರುವವರೆಗೂ ಧೈರ್ಯ ಕಳೆದುಕೊಂಡ ಹಾಗೆ ಅನಿಸಿತ್ತು. ದೇಶದ ಸಾವಿರಾರು ಸಾಮಾನ್ಯ ಜನರು ಹಾಗೂ ಮಹಿಳೆಯರು ಮುಂದೆ ಬಂದು ನನ್ನ ಸಹಾಯಕ್ಕೆ ನಿಂತರು. ನನ್ನೊಂದಿಗೆ ಮಾತನಾಡಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದರು” ಎಂದು ಬಿಲ್ಕಿಸ್ ಹೇಳಿದರು.
ವಿಚಾರಣೆಗೆ ಕರ್ನಾಟಕದಿಂದ ಕೋರ್ಟಿಗೆ 40 ಸಾವಿರ ಮನವಿ ಪತ್ರ
”ಮುಂಬೈನಿಂದ 8,500 ಹಾಗೂ ದೇಶದ ಇತರ ಭಾಗಗಳಿಂದ 6 ಸಾವಿರ ಮಂದಿ ಕೋರ್ಟಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕದ 29 ಜಿಲ್ಲೆಗಳಿಂದ 40 ಸಾವಿರ ಮಂದಿ ಸೇರಿದಂತೆ 10 ಸಾವಿರ ಮಂದಿ ಬಹಿರಂಗವಾಗಿ ಪತ್ರ ಬರೆದರು. ಅಮೂಲ್ಯವಾದ ಒಗ್ಗಟ್ಟು ಹಾಗೂ ಬಲ ನೀಡಿದ ಪ್ರತಿಯೊಬ್ಬರಿಗೂ ನಾನು ಆಭಾರಿ. ನನಗೆ ಮಾತ್ರವಲ್ಲ, ಭಾರತದ ಪ್ರತಿಯೊಬ್ಬ ಮಹಿಳೆಗೆ ನ್ಯಾಯದ ಕಲ್ಪನೆಯನ್ನು ರಕ್ಷಿಸಲು ನೀವು ಹೋರಾಟ ಮಾಡುವ ಇಚ್ಛಾಶಕ್ತಿಯನ್ನು ನನಗೆ ನೀಡಿರುವುದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ತೀರ್ಪು ನನಗೆ ಮತ್ತು ನನ್ನ ಮಕ್ಕಳಿಗೆ ನ್ಯಾಯ ದೊರಕಿಸದೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತೋರಿಸಿಕೊಟ್ಟಿದೆ. ಇದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಬಿಲ್ಕಿಸ್ ಬಾನೋ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಬಿಲ್ಕಿಸ್ ಬಾನೋ ಅವರ ಪತಿ ಯಾಕೂಬ್ ರಸೂಲ್ ಮಾತನಾಡಿ, ”ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂತೋಷವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಾಂಗದ ವ್ಯವಸ್ಥೆಯಲ್ಲಿ ಹೊಸ ಭರವಸೆ ಮೂಡಿಸಿದೆ. ದೇಶದಲ್ಲಿ ನ್ಯಾಯ ಜೀವಂತವಾಗಿದೆ ಎಂದು ತೋರಿಸಿಕೊಟ್ಟಿದೆ. ಅಪರಾಧಿಗಳು ಇತರ ರಾಜ್ಯದಿಂದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಸಿದ್ಧರಾಗುತ್ತಾರೆ ಎಂದು ನಮಗೆ ತಿಳಿದಿದೆ. ಸದ್ಯಕ್ಕೆ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗುವುದು” ಎಂದು ಹೇಳಿದರು.
ಆಗಸ್ಟ್ 2022 ರಲ್ಲಿ ಗುಜರಾತ್ ಸರ್ಕಾರವು ಅಪರಾಧಿಗಳಿಗೆ ಶಿಕ್ಷೆ ರದ್ದುಗೊಳಿಸಿದ ದಿನದಿಂದ ಬಿಲ್ಕಿಸ್, ಅವರ ಪತಿ ಮತ್ತು ಅವರ ಮಕ್ಕಳು ಅಜ್ಞಾತ ಸ್ಥಳದಲ್ಲಿ ವಾಸಿಸುತ್ತಿದ್ದಾರೆ.
ಅಪರಾಧಿಗಳು ಹೇಗೆ ಪೆರೋಲ್ಗಾಗಿ ಪದೇ ಪದೇ ಅರ್ಜಿಗಳನ್ನು ಸಲ್ಲಿಸಿದರು. ಅಲ್ಲದೆ ಒಂದೇ ವರ್ಷದಲ್ಲಿ 90 ದಿನಗಳವರೆಗೆ ಪೆರೋಲ್ನಲ್ಲಿ ಕಳೆದಿದ್ದರು.
11 ದಿನಗಳ ಕಾಲ ನಡೆದಿದ್ದ ಅರ್ಜಿಯ ವಿಚಾರಣೆ
ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಕನ್ನಡತಿ ಬಿ ವಿ ನಾಗರತ್ನ ಹಾಗೂ ನ್ಯಾ. ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಜ.8ರಂದು, ಗುಜರಾತ್ ಸರ್ಕಾರ ಅಪರಾಧಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸುವ ಹಕ್ಕು ಗುಜರಾತ್ ಸರ್ಕಾರಕ್ಕಿಲ್ಲ ಎಂದು ತೀರ್ಪು ನೀಡಿತ್ತು. ಅಲ್ಲದೆ ಎಲ್ಲ 11 ಅಪರಾಧಿಗಳು ಮತ್ತೆ ಸೆರೆಮನೆಗೆ ಹೋಗಬೇಕು ಎಂದು ಆದೇಶಿಸಿತ್ತು.
2022ರ ಸ್ವಾತಂತ್ರ್ಯ ದಿನದಂದು ಗುಜರಾತ್ ಸರ್ಕಾರವು ಅಪರಾಧಿಗಳನ್ನು ಬಿಡುಗಡೆ ಮಾಡಿದೆ. ಅಪರಾಧಿಗಳಾದ ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯ್ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇದು ಪ್ರತಿಪಕ್ಷಗಳು ಮತ್ತು ನಾಗರಿಕ ಸಮಾಜದಿಂದ ಖಂಡನೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.
ಜೈಲಿನಿಂದ ಬಿಡುಗಡೆಯಾದ ಅಪರಾಧಿಗಳಿಗೆ ಅದ್ದೂರಿ ಸ್ವಾಗತ ಮಾಡಲಾಗಿತ್ತು. ಆ ಬಳಿಕ ಅಪರಾಧಿಗಳು ಬಿಜೆಪಿ ಸಂಸದ ಮತ್ತು ಶಾಸಕರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಕೂಡ ಕಂಡುಬಂದಿದೆ. ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಶಾ ಅವರು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದರು. ಇದನ್ನು ಸುಪ್ರೀಂಕೋರ್ಟ್ನ ಗಮನಕ್ಕೆ ತರಲಾಗಿತ್ತು.
ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದ ಸದಸ್ಯರ ಹತ್ಯೆ ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್, ತೃಣಮೂಲ ಕಾಂಗ್ರೆಸ್ ಪಕ್ಷದ ಮಹುವಾ ಮೊಯಿತ್ರಾ, ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್ ಹಾಗೂ ಲಖನೌ ವಿವಿಯ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಒಳಗೊಂಡು ಹಲವರು ಸುಪ್ರಿಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಾಲಯ 11 ದಿನಗಳ ಕಾಲ ಅರ್ಜಿ ವಿಚಾರಣೆ ನಡೆಸಿದ್ದು, ಅಕ್ಟೋಬರ್ನಲ್ಲಿ ತೀರ್ಪು ಕಾಯ್ದಿರಿಸಿತ್ತು.