ಕೆಲವು ದಿನಗಳ ಹಿಂದಷ್ಟೆ ಪಕ್ಷದಿಂದ ಉಚ್ಚಾಟನೆಗೊಳಿಸಿದ್ದ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಪುನಃ ಪಕ್ಷಕ್ಕೆ ಬರಮಾಡಿಕೊಂಡು, ಅವರು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ ಎಂದು ಪಕ್ಷದ ನಾಯಕ ಸರ್ವಾರ್ ಮಲಿಕ್ ತಿಳಿಸಿದ್ದಾರೆ.
ಆನಂದ್ ಅವರು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ಅವರು ಒಂದು ದಿನದ ಹಿಂದಷ್ಟೆ ಆಕಾಶ್ ಆನಂದ್ ಅವರನ್ನು ಸ್ಟಾರ್ ಪ್ರಚಾರಕರಲ್ಲಿ ಒಬ್ಬರನ್ನಾಗಿ ನೇಮಿಸಿದ್ದರು.
ಆನಂದ್ ಅವರು ‘ಸಂಪೂರ್ಣವಾಗಿ ಪ್ರಬುದ್ಧರಾಗಿಲ್ಲ’ ಎಂದು 45 ದಿನಗಳ ಹಿಂದೆ ಮಾಯಾವತಿ ಉಚ್ಚಾಟಿಸಿದ್ದರು.
ಕಳೆದ ವರ್ಷದ ಡಿಸೆಂಬರ್ನಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಹೆಸರಿಸಿದ್ದರು.
ಆಕಾಶ್ ಆನಂದ್ ಅವರು ಮಾಯಾವತಿ ಅವರ ಕಿರಿಯ ಸಹೋದರನ ಪುತ್ರನಾಗಿದ್ದು, ಈ ಮೊದಲು ಮಾಯಾವತಿ ಅವರ ನಂತರದ ಬಿಎಸ್ಪಿಯ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಹಿತಿಗಳ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಂಸ್ಕೃತಿ ಸಚಿವರ ತಿಪ್ಪೆ ಸಾರಿಸುವಿಕೆ
2016 ರಲ್ಲಿ ಬಿಎಸ್ಪಿಗೆ ಸೇರ್ಪಡೆಗೊಂಡ ಆನಂದ್ ಅವರು 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು. 2019 ರಲ್ಲಿ ಮಾಯಾವತಿಯವರ ಲೋಕಸಭಾ ಪ್ರಚಾರದ ಸಮಯದಲ್ಲಿ ಪ್ರಮುಖ ಮುಖವಾಗಿದ್ದ ಆಕಾಶ್ ಆನಂದ್ ಈ ಹಿಂದೆ ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿದ್ದರು.
29 ವರ್ಷದ ಆನಂದ್ ಆಕಾಶ್ ಅವರು ಡಾ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು 2022 ರಲ್ಲಿ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದ 13 ಕಿಮೀ “ಸ್ವಾಭಿಮಾನ್ ಸಂಕಲ್ಪ ಯಾತ್ರೆ “ಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಅವರ ಗೋಚರತೆ ಸಾರ್ವಜನಿಕವಾಗಿ ಹೆಚ್ಚಾಗಿ ಕಂಡುಬಂದಿತ್ತು. 2018ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಆರು ಸ್ಥಾನಗಳನ್ನು ಪಡೆದಿತ್ತು. ಆ ಚುನಾವಣಾ ಪ್ರಚಾರದಲ್ಲೂ ಅವರು ಕಾಣಿಸಿಕೊಂಡಿದ್ದರು.
