ದೇಶದಲ್ಲೇ ಅತಿ ದೊಡ್ಡದು ಎನ್ನಲಾಗಿರುವ ವೈದ್ಯಕೀಯ ಕಾಲೇಜುಗಳ ಹಗರಣವೊಂದನ್ನು ಸಿಬಿಐ ಬಯಲು ಮಾಡಿದ್ದು, ಇದರಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಕರ್ನಾಟಕದ ಇಬ್ಬರು ವೈದ್ಯರು ಸಹಿತ 35 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ| ಸಿ.ಎನ್.ಮಂಜಪ್ಪ, ಬೆಂಗಳೂರಿನಲ್ಲಿರುವ ಅವರ ಆಪ್ತ ವೈದ್ಯ ಡಾ| ಸತೀಶ್ ವಿರುದ್ಧ ಆರೋಪಗಳು ಕೇಳಿಬಂದಿವೆ. ವೈದ್ಯಕೀಯ ಕಾಲೇಜುಗಳಿಗೆ ಅನುಕೂಲಕರ ವರದಿ ನೀಡಲು ಆ ಕಾಲೇಜುಗಳಿಂದ ತಲಾ 55 ಲಕ್ಷ ರೂ. ಲಂಚ ಪಡೆಯಲಾಗುತ್ತಿತ್ತು ಎಂಬುದು ಆರೋಪ.
ಹಗರಣದಲ್ಲಿ ಛತ್ತೀಸ್ಗಢದ ಸ್ವಘೋಷಿತ ದೇವಮಾನವ ರಾವತುರ ಸರ್ಕಾರ್ ಹೆಸರೂ ಕೇಳಿಬಂದಿದ್ದು, ಕೆಲವು ಹಿರಿಯ ಆಧಿಕಾರಿಗಳು, ಮಧ್ಯವರ್ತಿಗಳು, ಉನ್ನತ ಶಿಕ್ಷಣ ತಜ್ಞರು ಸಹಿತ 35 ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅವರಲ್ಲಿ ಮಾಜಿ ಯುಜಿಸಿ ಅಧ್ಯಕ್ಷ ಡಿ.ಪಿ. ಸಿಂಗ್ ಮತ್ತು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಮಾಜಿ ಅಧ್ಯಕ್ಷ ಸಂಜಯ್ ಶುಕ್ಲಾ ಕೂಡ ಸೇರಿದ್ದಾರೆ.
ದೇಶಾದ್ಯಂತ 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಅಕ್ರಮ ಮಾನ್ಯತೆ ಪಡೆದಿರಬಹುದು ಎಂದು ಶಂಕಿಸಲಾಗಿದೆ. ಅಚ್ಚರಿಯೆಂದರೆ ಈ ಹಗರಣದಲ್ಲಿ ಆರೋಗ್ಯ ಸಚಿವಾಲಯದ ಕೆಲವು ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ‘ಅಚ್ಛೇ ದಿನ’ದಲ್ಲಿ ಸಾಮಾನ್ಯರಿಗೆ ಸಾಲದ ಹೊರೆ
ಈ ಬಹುಕೋಟಿ ಹಗರಣವು ರಾಜಸ್ಥಾನ, ಗುರುಗ್ರಾಮ, ಇಂದೋರ್, ವಾರಂಗಲ್, ವಿಶಾಖಪಟ್ಟಣಂ ಸಹಿತ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿದೆ. ಕಳಪೆ ಮಟ್ಟದ ವೈದ್ಯಕೀಯ ಕಾಲೇಜುಗಳಿಗೆ ಅಕ್ರಮ ಅನುಮೋದನೆಗಳನ್ನು ಪಡೆಯಲು ನಕಲಿ ಅಧ್ಯಾಪಕರು, ಸುಳ್ಳು ತನಿಖೆಗಳು ಮತ್ತು ಗೌಪ್ಯ ಸೂಕ್ಷ್ಮ ಮಾಹಿತಿಗಳ ಸೋರಿಕೆ ಮಾಡಿ ಕೋಟ್ಯಂತರ ರೂಪಾಯಿಗಳನ್ನು ಹವಾಲಾ ಮತ್ತು ಬ್ಯಾಂಕಿಂಗ್ ಮಾರ್ಗಗಳ ಮೂಲಕ ವಿನಿಮಯ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ರಾಯ್ಪುರದ ವೈದ್ಯಕೀಯ ಸಂಸ್ಥೆಯಲ್ಲಿ 55 ಲಕ್ಷ ರೂಪಾಯಿ ಲಂಚ ಪ್ರಕರಣದಿಂದ ಆರಂಭವಾದ ತನಿಖೆ ಈಗ ರಾಷ್ಟ್ರಮಟ್ಟದ ಹಗರಣವನ್ನು ಬಯಲಿಗೆಳೆದಿದೆ.
ಛತ್ತೀಸ್ಗಢದ ಶ್ರೀರಾಮಪುರ ಸರ್ಕಾರ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಗೆ ನಿಯೋಜಿಸಲಾದ ಎನ್ಎಂಪಿ ತಪಾಸಣೆ ತಂಡದಲ್ಲಿ ಡಾ. ಮಂಜಪ್ಪ ಅವರಿದ್ದರು. ಈ ಸಂಸ್ಥೆಯ ಪರವಾಗಿ ವರದಿ ನೀಡಲು ತಂಡವು 55 ಲಕ್ಷ ರೂ. ಲಂಚ ಪಡೆದಿತ್ತು. ಮಂಜಪ್ಪ ಅವರು ಈ ಹಣವನ್ನು ಪಡೆಯುವಂತೆ ಬೆಂಗಳೂರಿನ ಸತೀಶ್ಗೆ ತಿಳಿಸಿದ್ದರು. ಬೆಂಗಳೂರಿನಲ್ಲಿ ಲಂಚದ ಹಣ ಸ್ವೀಕರಿಸುವ ಸಮಯದಲ್ಲೇ ಸಿಬಿಐ ಆರೋಪಿಗಳನ್ನು ಬಂಧಿಸಿತು ಎನ್ನಲಾಗಿದೆ.