ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು 118 ಕ್ಷೇತ್ರಗಳ ಮೊದಲ ಜಂಟಿ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದಾರೆ.
ಮೊದಲ ಪಟ್ಟಿಯ ಪ್ರಕಾರ, ಟಿಡಿಪಿ 94 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಜನಸೇನಾ ಪಕ್ಷಕ್ಕೆ 24 ಕ್ಷೇತ್ರಗಳನ್ನು ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ 175 ವಿಧಾನಸಭೆ ಮತ್ತು 25 ಸಂಸತ್ ಸ್ಥಾನಗಳಿದ್ದು, ಅಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯಲಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಮೈತ್ರಿ ಪಕ್ಷಗಳು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚಂದ್ರಬಾಬು ನಾಯ್ದು ಮತ್ತು ಪವನ್ ಕಲ್ಯಾಣ್ ಹೇಳಿದ್ದಾರೆ.
— Telugu Desam Party (@JaiTDP) February 24, 2024
“ರಾಜ್ಯಾದ್ಯಂತ 1 ಕೋಟಿ 3 ಲಕ್ಷ 33 ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಧಾನಸಭೆಯಲ್ಲಿ ಆಂಧ್ರಪ್ರದೇಶದ ಜನರ ಆಕಾಂಕ್ಷೆಗಳು ಮತ್ತು ಧ್ವನಿಗಳನ್ನು ಎತ್ತುವವರಿಗೆ ಈ ಪಟ್ಟಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ” ಎಂದು ಹೇಳಿದ್ದಾರೆ.
“ಟಿಡಿಪಿ ಮತ್ತು ಜನಸೇನಾ ಎರಡೂ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿವೆ. ಇದು ರಾಜ್ಯದಲ್ಲಿನ ಪ್ರತಿಯೊಬ್ಬರಿಗೂ ಶುಭ ಸಮಾಚಾರವಾಗಲಿದೆ ಎಂದು ಆಶಿಸುತ್ತೇನೆ. ಈ ಒಕ್ಕೂಟವು ರಾಜ್ಯದ ಭವಿಷ್ಯವಾಗಿದೆ. ಮಹಾನ್ ಪ್ರಯತ್ನಕ್ಕೆ ಇದು ಮೊದಲ ಹೆಜ್ಜೆಯಾಗಿದೆ” ಎಂದು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಉಂಡವಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿ ವೇಳೆ ಹೇಳಿದರು.
“ಬಿಜೆಪಿ ಕೂಡ ಮೈತ್ರಿಕೂಟದ ಒಳಗೆ ಸೇರಿಕೊಂಡರೆ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಎಲ್ಲ ಅಂಶಗಳನ್ನು ಚರ್ಚಿಸಲಾಗುವುದು” ಎಂದು ನಾಯ್ಡು ತಿಳಿಸಿದರು.
ಜನಸೇನಾಕ್ಕೆ ಕೇವಲ 24 ಸೀಟುಗಳನ್ನು ನೀಡಿರುವುದ ಹಿಂದಿನ ಲೆಕ್ಕಾಚಾರವನ್ನು ವಿವರಿಸಿದ ಪವನ್ ಕಲ್ಯಾಣ್, “ದೊಡ್ಡ ಸಂಖ್ಯೆಯ ಸೀಟುಗಳಲ್ಲಿ ಪ್ರಯೋಗ ಮಾಡುವುದಕ್ಕಿಂತ ಕಡಿಮೆ ಸಂಖ್ಯೆಯ ಸೀಟುಗಳನ್ನು ಪಡೆಯುವುದು ಮುಖ್ಯ” ಎಂದರು.
“ನಾವು ಮೊದಲು ರಾಜ್ಯವನ್ನು ಸರಿಯಾದ ದಾರಿಗೆ ತರಬೇಕಿದೆ. ವೈಯಕ್ತಿಕ ಮತ್ತು ಪಕ್ಷದ ಉದ್ದೇಶಕ್ಕಿಂತಲೂ ರಾಜ್ಯದ ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ” ಎಂದು ಹೇಳಿದರು. ಮೈತ್ರಿಕೂಟದಲ್ಲಿ ಜನಸೇನಾಕ್ಕೆ ಮೂರು ಲೋಕಸಭೆ ಕ್ಷೇತ್ರಗಳನ್ನು ನೀಡಲಾಗಿದೆ. ಇದು ಪಕ್ಷವು 40 ಸೀಟುಗಳಲ್ಲಿ ಸ್ಪರ್ಧಿಸುವುದಕ್ಕೆ ಸಮ” ಎಂದರು.
“ಈ ಮೈತ್ರಿಕೂಟವು ರಾಜ್ಯದ ಭವಿಷ್ಯಕ್ಕಾಗಿ. ಇದು ಯಾವುದೇ ಇಬ್ಬರು ವ್ಯಕ್ತಿಗಳು ಅಥವಾ ಎರಡು ಪಕ್ಷಗಳಿಗಲ್ಲ. ಎರಡೂ ಪಕ್ಷಗಳು ಐದು ಕೋಟಿ ಜನರ ಕಲ್ಯಾಣಕ್ಕಾಗಿ ಜತೆಗೂಡಿ ಕೆಲಸ ಮಾಡಲು ಈ ನಿರ್ಧಾರ ಕೈಗೊಂಡಿವೆ. ಇದು ರಾಜ್ಯಕ್ಕೆ ಐತಿಹಾಸಿಕ ದಿನ” ಎಂದು ಹೇಳಿದರು.
ಜನಸೇನಾ ಪಕ್ಷದಿಂದ ಕಣಕ್ಕಿಳಿಯಲಿರುವ ಐವರು ಅಭ್ಯರ್ಥಿಗಳ ಹೆಸರನ್ನು ಪವನ್ ಕಲ್ಯಾಣ್ ಪ್ರಕಟಿಸಿದರು. ಉಳಿದ 19 ಅಭ್ಯರ್ಥಿಗಳ ಹೆಸರನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದರು.
ನಾಯ್ಡು ಅವರು ಕುಪ್ಪಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದರೆ, ಅವರ ಮಗ ನಾರಾ ಲೋಕೇಶ್ ಮಂಗಳಗಿರಿಯಿಂದ ಕಣಕ್ಕಿಳಿಯಲಿದ್ದಾರೆ. ನಾಯ್ಡು ಅವರ ಟಿಡಿಪಿ ಪಕ್ಷದಿಂದ ಘೋಷಣೆಯಾಗಿರುವ 94 ಅಭ್ಯರ್ಥಿಗಳ ಪೈಕಿ 23 ಮಂದಿ ಹೊಸಬರಾಗಿದ್ದಾರೆ. ಮೂವರು ವೈದ್ಯರು, ಒಬ್ಬ ನಿವೃತ್ತ ಐಎಎಸ್ ಅಧಿಕಾರಿ, 25 ಸ್ನಾತಕೋತ್ತರ ಪದವೀಧರರು, 51 ಪದವೀಧರರು ಮತ್ತು ಮೂವರು ಡಾಕ್ಟರೇಟ್ ಪಡೆದವರಿದ್ದಾರೆ.
ಇದನ್ನು ಓದಿದ್ದೀರಾ? 2013ರಲ್ಲಿ ಯುಪಿಎ ಸ್ಥಾಪಿಸಿದ್ದ ಚುನಾವಣಾ ಟ್ರಸ್ಟ್ ಯೋಜನೆಯಿಂದ ಬಿಜೆಪಿ ಫಲಾನುಭವಿಯಾಗಿದ್ದು ಹೇಗೆ?
ಟಾಲಿವುಡ್ನ ಜನಪ್ರಿಯ ನಟನಾಗಿರುವ ಪವನ್ ಕಲ್ಯಾಣ್ 2014ರ ಮಾರ್ಚ್ 14ರಂದು ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯ ಪ್ರವೇಶಿಸಿದ್ದರು. ಅಂದಿನಿಂದ ಈವರೆಗೆ ಸುಮಾರು 1 ದಶಕದಿಂದ ರಾಜಕೀಯದಲ್ಲಿದ್ದರೂ ಗಳಿಸಿದ್ದಕ್ಕಿಂತ ಹೆಚ್ಚು ನಷ್ಟವನ್ನೇ ಕಂಡಿದ್ದಾರೆ. ಇವರ ಪಕ್ಷದಿಂದ ಇದುವರೆಗೆ ಒಬ್ಬ ಶಾಸನನ್ನೂ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಟಿಡಿಪಿ 2024ರ ವಿಧಾನಸಭೆ ಚುನಾವಣೆಗೆ ಜನಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, 24 ವಿಧಾನಸಭೆ ಹಾಗೂ 3 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಇದು ಎಷ್ಟರಮಟ್ಟಿಗೆ ಆಂಧ್ರಪ್ರದೇಶದಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ಚುನಾವಣಾ ಫಲಿತಾಂಶದ ಬಳಿಕ ತಿಳಿದುಬರಲಿದೆ.
