ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಜೂ.9 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೊದಲು ಜೂ.9 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಜೂ.8 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿಂದ ನಾಯ್ಡು ಅವರು ಪ್ರಮಾಣ ವಚನ ದಿನಾಂಕವನ್ನು ಮುಂದೂಡಿದ್ದಾರೆ. ನರೇಂದ್ರ ಮೋದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ನೀಡಿದ್ದು, 17ನೇ ಲೋಕಸಭೆಯನ್ನು ರಾಷ್ಟ್ರಪತಿ ಅವರು ವಿಸರ್ಜಿಸಿದ್ದಾರೆ.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಪಕ್ಷ ಟಿಡಿಪಿ ಅಭೂತಪೂರ್ವ ಯಶಸ್ಸು ಗಳಿಸಿದ್ದು, ಲೋಕಸಭೆಯಲ್ಲೂ 16 ಸ್ಥಾನ ಗೆಲ್ಲುವುದರೊಂದಿಗೆ ಎನ್ಡಿಎ ಒಕ್ಕೂಟದಲ್ಲಿ ಕಿಂಗ್ ಮೇಕರ್ಗಳಲ್ಲಿ ಪ್ರಮುಖ ಪಕ್ಷವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?
ಬಿಜೆಪಿ ಬಹುಮತಕ್ಕೆ ಅಗತ್ಯವಾದ ಸಂಖ್ಯೆಗಳನ್ನು ಗಳಿಸುವಲ್ಲಿ ವಿಫಲವಾದ ಕಾರಣ ಟಿಡಿಪಿ ಹಾಗೂ ಜೆಡಿಯು ಕೇಂದ್ರದ ನೂತನ ಎನ್ಡಿಎ ಸರ್ಕಾರದಲ್ಲಿ ಪ್ರಮುಖ ಪಾತ್ರವಹಿಸಲಿವೆ. ಸುದ್ದಿಗಾರರೊಂದಿಗೆ ಮಾತನಾಡಿದ್ದ ಚಂದ್ರಬಾಬು ನಾಯ್ಡು ತಾವು ಎನ್ಡಿಎದಲ್ಲಿ ಉಳಿಯುವುದಾಗಿ ತಿಳಿಸಿದ್ದರು.
175 ಸದಸ್ಯ ಬಲದ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ತೆಲುಗು ದೇಶಂ ಪಕ್ಷ 135 ಸ್ಥಾನದೊಂದಿಗೆ ಅಭೂತಪೂರ್ವ ಜಯ ಸಾಧಿಸಿದರೆ, ಪವನ್ ಕಲ್ಯಾಣ್ ನೇತೃತ್ವದ ಮಿತ್ರಪಕ್ಷ ಜನಸೇನಾ 21 ಸ್ಥಾನಗಳಲ್ಲಿ ಗೆಲುವುಗಳಿಸಿದೆ. ಬಿಜೆಪಿ 8 ಸ್ಥಾನಗಳನ್ನು ಪಡೆದರೆ, ಆಡಳಿತರೂಢ ವೈಎಸ್ಆರ್ಸಿಪಿ ಕೇವಲ 11 ಸ್ಥಾನಗಳಲ್ಲಿ ಜಯಗಳಿಸಿತ್ತು.
ಹೊಸ ಸರ್ಕಾರದಲ್ಲಿ ಚಂದ್ರಬಾಬು ನಾಯ್ಡು ಲೋಕಸಭೆಯ ಸ್ಪೀಕರ್ ಸ್ಥಾನ ಸೇರಿದಂತೆ ಪ್ರಮುಖ ಖಾತೆಗಳನ್ನು ಕೇಳುವ ಸಾಧ್ಯತೆಯಿದೆ. ಮೂಲಗಳಂತೆ 7 ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ಖಾತೆಗಳನ್ನು ತಮ್ಮ ಪಕ್ಷಕ್ಕೆ ನೀಡುವಂತೆ ಕೇಳುವ ಸಾಧ್ಯತೆಯಿದೆ. ಇವುಗಳಲ್ಲಿ ರಸ್ತೆ ಸಾರಿಗೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ನಗರಾಭಿವೃದ್ಧಿ ಸೇರಿವೆ. ಜನಸೇನಾ ಕೂಡ ಐಟಿ, ಶಿಕ್ಷಣ ಮತ್ತು ರಾಜ್ಯ ಖಾತೆಯ ಹಣಕಾಸು ಖಾತೆ ನೀಡುವಂತೆ ಪಟ್ಟು ಹಿಡಿಯಲಿದೆ ಎನ್ನಲಾಗಿದೆ.
