ದೆಹಲಿಯ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ಭಾರತ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರಿಗೆ ಸೋಮವಾರ ದೆಹಲಿ ನ್ಯಾಯಾಲಯವು ಮಧ್ಯಂತರ ಜಾಮೀನು ನಿರಾಕರಿಸಿದೆ.
ಏಪ್ರಿಲ್ 4ರಂದು ಕಾಯ್ದಿರಿಸಿದ್ದ ಆದೇಶವನ್ನು ರೋಸ್ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಇಂದು ಪ್ರಕಟಿಸಿದರು.
ಕವಿತಾ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿದ ಜಾರಿ ನಿರ್ದೇಶನಾಲಯವು ಮಾರ್ಚ್ 15ರಂದು ಅವರನ್ನು ಹೈದರಾಬಾದ್ನಲ್ಲಿ ಬಂಧಿಸಿತ್ತು. ಸದ್ಯ ಕವಿತಾ ಅವರು ತಿಹಾರ್ ಜೈಲಿನಲ್ಲಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಪ್ರಮುಖ ರಾಜಕಾರಣಿಗಳಲ್ಲಿ ಕವಿತಾ ಸಹ ಒಬ್ಬರಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಮಾಜಿ ಸಚಿವ ಸತ್ಯೇಂದರ್ ಜೈನ್ ಮತ್ತಿತರರು ನ್ಯಾಯಾಂಗ ಬಂಧನದಲ್ಲಿದ್ದಾರೆ.
2021-22ರಲ್ಲಿ ರೂಪಿಸಲಾಗಿದ್ದ, ಸದ್ಯ ರದ್ದುಪಡಿಸಲಾಗಿರುವ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮದ್ಯ ಮಾರಾಟ-ತಯಾರಕ ಲಾಬಿ ಗುಂಪಿನಿಂದ ಮೇಲಿನ ಪ್ರಮುಖ ರಾಜಕೀಯ ಮುಖಂಡರು ಲಾಭ ಮಾಡಿಕೊಂಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.
ಕವಿತಾ ಅವರು ಅಬಕಾರಿ ನೀತಿಯ ಅಡಿ ಮಹತ್ವದ ಪಾತ್ರ ವಹಿಸಲು ಪ್ರಯತ್ನಿಸಿದ್ದ ದಕ್ಷಿಣ ಭಾರತದ ಮದ್ಯ ತಯಾರಕರು-ಮಾರಾಟ ಗುಂಪಿನ ಭಾಗವಾಗಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ಆರೋಪ ಹೊರಿಸಿದೆ.
ಪ್ರಕರಣದಲ್ಲಿನ ಆರೋಪಿ ವಿಜಯ್ ನಾಯರ್ ಎಂಬಾತ ಆಪ್ ನಾಯಕರ ಪರವಾಗಿ ₹100 ಕೋಟಿಯನ್ನು ದಕ್ಷಿಣ ಭಾರತದ ಗುಂಪಿನಿಂದ ಪಡೆದಿದ್ದಾರೆ. ಈ ಗುಂಪನ್ನು ಶರತ್ ರೆಡ್ಡಿ, ಕೆ ಕವಿತಾ ಮತ್ತು ಮಗುಂಟಾ ಶ್ರೀನಿವಾಸುಲು ರೆಡ್ಡಿ ನಿಯಂತ್ರಿಸುತ್ತಿದ್ದರು ಎಂದು ಇ ಡಿ ದೂರಿದೆ.
‘ತಾನು ಮುಗ್ಧೆಯಾಗಿದ್ದು, ತೆಲಂಗಾಣದಲ್ಲಿ ತಳವೂರಲು ಬಿಜೆಪಿಯು ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದು ಕವಿತಾ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಹಗರಣ | ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಗೊಂಡ ಆಪ್ ಸಂಸದ ಸಂಜಯ್ ಸಿಂಗ್
ಅಬಕಾರಿ ಹಗರಣದಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ ಎಂದು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಪ್ರಶ್ನಿಸಿ, ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಜಾಮೀನಿಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ದೆಹಲಿ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನ ಹಾಗೂ ರಿಮ್ಯಾಂಡ್ ಕಸ್ಟಡಿಯಲ್ಲಿರುವುದನ್ನು ಪ್ರಶ್ನಿಸಿ ಸಂಜಯ್ ಸಿಂಗ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಂಜಯ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಏಪ್ರಿಲ್ 2ರಂದು ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 3ರಂದು ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದರು.
