ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರನ್ನು ʼಜಿಹಾದಿʼ ಎಂದು ಕರೆದಿದ್ದ ಜಗದೀಶ್ ಸಿಂಗ್ ಎಂಬ ವ್ಯಕ್ತಿ ತನ್ನ ಎಕ್ಸ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿರುವುದಾಗಿ ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.
ಸಿಂಗ್ ಕ್ಷಮೆಯಾಚನೆ ಕನಿಷ್ಠ ಎರಡು ತಿಂಗಳುಗಳ ಕಾಲ ಖಾತೆಯಲ್ಲಿ ಪ್ರಕಟವಾಗಿರಬೇಕು ಎಂದು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು ತಮ್ಮ ಆದೇಶದ ವೇಳೆ ತಿಳಿಸಿದ್ದಾರೆ.
ಮೊಹಮ್ಮದ್ ಝುಬೈರ್ ಅವರನ್ನು ಉಲ್ಲೇಖಿಸಿ, ಜಗದೀಶ್ ಸಿಂಗ್ ಎಂಬ ಬಲಪಂಥೀಯ ಬೆಂಬಲಿಗನೋರ್ವ, ʼಒಮ್ಮೆ ಜಿಹಾದಿಯಾದವನು ಸದಾ ಜಿಹಾದಿಯೇʼ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಂಗ್ ಕ್ಷಮೆಯಾಚಿಸಬೇಕು ಎಂದಿರುವ ನ್ಯಾಯಾಲಯ, “ಈ ಮೇಲಿನ ಹೇಳಿಕೆ ನೀಡಿದ್ದಕ್ಕಾಗಿ ವಿಷಾದಿಸುತ್ತೇನೆ. ಯಾವುದೇ ದುರುದ್ದೇಶ ಅಥವಾ ಝುಬೇರ್ ಅವರನ್ನು ನೋಯಿಸುವ ಇಲ್ಲವೇ ಕುಕೃತ್ಯದ ಸಲುವಾಗಿ ಇದನ್ನು ಮಾಡಿಲ್ಲ” ಎಂದು ಸಿಂಗ್ ಉಲ್ಲೇಖಿಸಬೇಕು ಎಂದಿದೆ.
ವಿಚಾರಣೆಯ ಸಂದರ್ಭದಲ್ಲಿ ಸಿಂಗ್ ಪ್ರಕಟಿಸಿದ ಕೆಲ ಹೇಳಿಕೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಭಂಭಾನಿ, ಅಂತಹ ಜನರನ್ನು ಸಾಮಾಜಿಕ ಮಾಧ್ಯಮದಿಂದ ನಿರ್ಬಂಧಿಸಬೇಕು ಎಂದು ತಿಳಿಸಿದರು. ಆದರೆ, ಝುಬೈರ್ ವ್ಯಕ್ತಿಯ ಕ್ಷಮೆ ಯಾಚನೆಯ ವಿವರಗಳನ್ನು ಮರು ಟ್ವೀಟ್ ಮಾಡುವಂತಿಲ್ಲ ಅಥವಾ ಇನ್ನಾವುದೇ ಸಿವಿಲ್ ಇಲ್ಲವೇ ಕ್ರಿಮಿನಲ್ ವಿಚಾರಣೆಗೆ ಅದನ್ನು ಬಳಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿತು.
ಇದನ್ನು ಓದಿದ್ದೀರಾ? ಉಡುಪಿ | ‘ಕಂಚಿನಡ್ಕ’ ಟೋಲ್ಗೇಟ್ಗೆ ಸರ್ಕಾರದಿಂದ ತಾತ್ಕಾಲಿಕ ತಡೆ : ಸಚಿವ ಜಾರಕಿಹೊಳಿ ಆದೇಶ
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಸಿಂಗ್ ಅವರ ಟ್ವೀಟ್ ಸಾರ್ವಜನಿಕರಿಗೆ ಭಯ ಅಥವಾ ಆತಂಕವನ್ನು ಉಂಟು ಮಾಡುವುದಿಲ್ಲ ಮತ್ತು ಆದ್ದರಿಂದ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತ್ತು.
