ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,250 ಮತಗಳನ್ನು ವಿವಿಧ ರೀತಿಯಲ್ಲಿ ವಂಚಿಸಿ ಮತಗಳವು ಮಾಡಿರುವುದನ್ನು ಮಾಹಿತಿ ಬಿಚ್ಚಿಟ್ಟರು.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00, 250 ಮತದಾರರಲ್ಲಿ 11,965 ನಕಲಿ ಮತದಾರರು, 40,009 ಸುಳ್ಳು ಹಾಗೂ ಅಮಾನ್ಯ ವಿಳಾಸ, 10,452 ಮಂದಿ ಒಂದೇ ವಿಳಾಸದಲ್ಲಿ ಮತದಾನ ಮಾಡಿದ ಹಲವರು, 4132 ಮಂದಿ ಅಮಾನ್ಯ ಭಾವಚಿತ್ರ ಮೂಲಕ ಹಾಗೂ 33,692 ಮಂದಿ ಫಾರ್ಮ್ 6 ದುರ್ಬಳಕೆ ಮಾಡಿಕೊಂಡು ಮತದಾನ ಮಾಡಿದ್ದಾರೆ ಎಂದು ದಾಖಲೆ ಮೂಲಕ ಬಹಿರಂಗ ಪಡಿಸಿದರು.
ಸುಳ್ಳು ಹಾಗೂ ಅಮಾನ್ಯ ವಿಳಾಸ ನೀಡಿ ಮತದಾನ ಮಾಡಿದ 40,009 ಮಂದಿ ದಾಖಲೆಯ ಬಗ್ಗೆ ಹಾಗೂ 40, 50, ಮತದಾರರು ಒಂದೇ ಕೊಠಡಿಯಲ್ಲಿ ವಾಸವಿರುವ ಬಗ್ಗೆಯೂ ಪರಿಶೀಲನೆಗೊಳಪಡಿಸಿದ ದಾಖಲೆಗಳನ್ನು ಕೂಡ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರದರ್ಶಿಸಿದರು.
ಮಹದೇವಪುರ ಕ್ಷೇತ್ರದಲ್ಲಿ ಮತದಾನ ಮಾಡಿರುವ ಹಲವರು ಬೇರೆ ರಾಜ್ಯಗಳಲ್ಲಿ ಮತದಾರರಾಗಿರುವ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ನೀಡಿದರು. ಒಂದೇ ಹೆಸರಿನ, ಒಂದೇ ವಿಳಾಸದ ಹಾಗೂ ವಿವಿಧ ವಯಸ್ಸಿನ ದಾಖಲೆಯ ಮೂಲಕ ಮತದಾನ ಮಾಡಿದ್ದಾರೆ ಎಂಬುದನ್ನು ರಾಹುಲ್ ಗಾಂಧಿ ತಿಳಿಸಿದರು.
ಈ ಲೇಖನ ಓದಿದ್ದೀರಾ?: ಬಲಾಢ್ಯರೊಂದಿಗೆ ಜೊತೆಯಾಗುವುದು ಜನದ್ರೋಹ
ಇವೆಲ್ಲ ಅಕ್ರಮಗಳಿಗೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳು, ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ಬೆಂಬಲವಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದರು.
2024 ರಲ್ಲಿ ಅಧಿಕಾರದಲ್ಲಿ ಉಳಿಯಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ 25 ಸ್ಥಾನಗಳನ್ನು ‘ಕದಿಯಬೇಕಾಗಿತ್ತು’ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 33,೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ 25 ಸ್ಥಾನಗಳನ್ನು ಗೆದ್ದಿತು ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ಇದು ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆಯ ಮೇಲಿನ ನೇರ ಅಕ್ರಮ. ಚುನಾವಣಾ ಆಯೋಗವು ತನ್ನ ಸಂವಿಧಾನಾತ್ಮಕ ಕರ್ತವ್ಯದಿಂದ ದೂರವಾಗುತ್ತಾ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಲಾಭ ಉಂಟುಮಾಡುವಂತೆ ಕಾರ್ಯನಿರ್ವಹಿಸುತ್ತಿದೆ,” ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಈ ಕುರಿತು ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಿದರೆ ನಮಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆಯೋಗ ನಮಗೆ ಮತದಾರರ ಪಟ್ಟಿ ನೀಡಲು ನಿರಾಕರಿಸಿದೆ. ಅದಲ್ಲದೇ ರಾಜಕೀಯ ಪಕ್ಷಗಳಿಗೂ ಕೂಡ ಮತದಾರರ ಪಟ್ಟಿ ನೀಡಿಲ್ಲ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವೆಲ್ಲ ಅಕ್ರಮಗಳು ನಡೆದಿರುವ ಸಲುವಾಗಿ ನಾಳೆ(ಆ.8) ಬೆಂಗಳೂರಿಗೆ ತೆರಳಿ ಪ್ರತಿಭಟನೆ ನಡೆಸಲಿದ್ದು, ಎಐಸಿಸಿ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದರು.
