ನೀಟ್ – ಯುಜಿ 2024ರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮವೆಸಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ.
ರಜಾ ಪೀಠದ ನ್ಯಾಯಾಧೀಶರಾದ ವಿಕ್ರಂನಾಥ್ ಹಾಗೂ ಎಸ್ಟಿ ಭಟ್ಟಿ ಅವರ ಪೀಠವು ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಹಾಗೂ ಕೆಲವು ವಿದ್ಯಾರ್ಥಿಗಳಿಗೆ ನೀಡಲಾದ ಕೃಪಾಂಕ ಅಂಕಗಳ ಕುರಿತ ಹಿಂದಿನ ಅರ್ಜಿಗಳ ರೀತಿಯ ಒಂದು ಪ್ರಕರಣವನ್ನು ವಿಚಾರಣೆ ನಡೆಸಿತು.
ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳು ಕಠಿಣ ಪರಿಶ್ರಮವಹಿಸಿ ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವಾಗ ಎಲ್ಲ ರೀತಿಯ ಗಂಭೀರತೆ ಕೈಗೊಳ್ಳಬೇಕು. ಯಾರಾದರೂ ಶೇ.0.001 ನಿರ್ಲಕ್ಷ್ಯ ವಹಿಸಿದರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಪರೀಕ್ಷೆಗಾಗಿ ಮಕ್ಕಳು ಅಪಾರ ಶ್ರಮ ಹಾಕಿರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಸುಪ್ರೀಂ ಕೋರ್ಟ್ ಪೀಠ ವಿಚಾರಣೆ ಸಂದರ್ಭದಲ್ಲಿ ತಿಳಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ
“ವ್ಯವಸ್ಥೆಯಲ್ಲಿ ವಂಚನೆವೆಸಗಿರುವ ವ್ಯಕ್ತಿಯ ಸಂದರ್ಭವನ್ನು ಕಲ್ಪಿಸಿಕೊಳ್ಳಿ, ಆತ ವೈದ್ಯನಾದರೆ ಸಮಾಜಕ್ಕೆ ಅತ್ಯಂತ ಹಾನಿಕಾರಕನಾಗುತ್ತಾನೆ. ಪ್ರಮುಖವಾಗಿ ಪರೀಕ್ಷೆಗಾಗಿ ಮಕ್ಕಳು ಅಪಾರ ಶ್ರಮ ಹಾಕಿರುತ್ತಾರೆ ಎಂಬುದನ್ನು ನಮ್ಮೆಲ್ಲರಿಗೂ ತಿಳಿದಿದೆ” ಎಂದು ನ್ಯಾಯಮೂರ್ತಿಗಳಾದ ಭಟ್ಟಿ ತಿಳಿಸಿದರು.
ಪರೀಕ್ಷೆ ನಡೆಸುವ ಜವಾಬ್ದಾರಿ ಹೊಂದಿರುವ ಸಂಸ್ಥೆಯನ್ನು ನೀವು ಪ್ರತಿನಿಧಿಸಿರುವ ಕಾರಣ ನ್ಯಾಯಾಲಯವನ್ನು ಪ್ರವೇಶಿಸಿದ ನಂತರ ನಿಮ್ಮ ನಿಲುವುಗಳು ಬದಲಾಗಬಾರದು. ನೀವು ದೃಢವಾಗಿ ನಿಲ್ಲಬೇಕು, ಯಾರಾದರೂ ತಪ್ಪು ಮಾಡಿದ್ದರೆ, ಹೌದು ತಪ್ಪಾಗಿದೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರೆ ನಿಮ್ಮ ಕಾರ್ಯವೈಖರಿಯ ಬಗ್ಗೆ ಕನಿಷ್ಠ ಆತ್ಮವಿಶ್ವಾಸ ಮೂಡುತ್ತದೆ ಎಂದು ಸುಪ್ರೀಂ ಪೀಠ ತಿಳಿಸಿತು.
“ಯಾರಾದರೂ ತಪ್ಪೆಸಗಿದರೆ, ಅವರನ್ನು ಸಂಪೂರ್ಣವಾಗಿ ಪರಿಶೀಲನೆಗೊಳಪಡಿಸಬೇಕು. ಅದು ಎಲ್ಲಿ ತಪ್ಪಾಗಿದೆ, ಎಷ್ಟು ಸೆಲ್ಫೋನ್ಗಳನ್ನು ಬಳಸಲಾಗಿದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು” ಎಂದು ಪೀಠ ತಿಳಿಸಿತು.
ಈಗಾಗಲೇ ಸುಪ್ರೀಂ ಪೀಠವು ಸಿಬಿಐ ತನಿಖೆಯ ಬಗ್ಗೆ ಕೇಂದ್ರ ಹಾಗೂ ಎನ್ಟಿಎಗೆ ಜೂನ್ 14 ರಂದು ನೋಟಿಸ್ ನೀಡಿದೆ. ಎಲ್ಲ ಅರ್ಜಿಗಳ ವಿಚಾರಣೆಯನ್ನು ಜುಲೈ 6 ರಂದು ಕೈಗೊಳ್ಳಲಾಗುತ್ತದೆ.
