ಇಸ್ರೇಲ್ – ಹಮಾಸ್ ಸಂಘರ್ಷದಲ್ಲಿ ಗಾಜಾ ಪ್ರದೇಶದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಹಾಗೂ ಎಲ್ಲ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಕರಡು ನಿರ್ಣಯದ ಪರವಾಗಿ ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತ ಚಲಾಯಿಸಿತು.
193 ಸದಸ್ಯರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮಂಗಳವಾರ ಇಲ್ಲಿ ನಡೆದ ತುರ್ತು ವಿಶೇಷ ಅಧಿವೇಶನದಲ್ಲಿ ಈಜಿಪ್ಟ್ ಪರಿಚಯಿಸಿದ ಕರಡು ನಿರ್ಣಯವನ್ನು ಅಂಗೀಕರಿಸಿತು. ನಿರ್ಣಯವು ಪರವಾಗಿ 153 ಮತಗಳೊಂದಿಗೆ ಅಂಗೀಕರಿಸಲ್ಪಟ್ಟಿತು, ಆದರೆ 23 ರಾಷ್ಟ್ರಗಳು ಗೈರು ಹಾಜರಾದವು ಮತ್ತು 10 ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದವು.
ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ತೀನ್ ಪ್ರಾಯೋಜಿಸಿದ ನಿರ್ಣಯವು ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮವನ್ನು ಒತ್ತಾಯಿಸಿತು ಮತ್ತು ಎಲ್ಲ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಅನುಸರಿಸಬೇಕು ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿತು.
“ವಿಶೇಷವಾಗಿ ನಾಗರಿಕರ ರಕ್ಷಣೆಗೆ ಸಂಬಂಧಿಸಿದಂತೆ. ಇದು ಎಲ್ಲ ಒತ್ತೆಯಾಳುಗಳ ತಕ್ಷಣದ ಮತ್ತು ಬೇಷರತ್ ಬಿಡುಗಡೆ, ಜೊತೆಗೆ ಮಾನವೀಯ ಪ್ರವೇಶವನ್ನು ಖಾತ್ರಿ ಪಡಿಸುವುದು” ಎಂದು ಒತ್ತಾಯಿಸಿತು.
ಈ ಸುದ್ದಿ ಓದಿದ್ದೀರಾ? ಮಹಾದೇವ್ ಬೆಟ್ಟಿಂಗ್ ಆ್ಯಪ್ನ ಮಾಲೀಕ ರವಿ ಉಪ್ಪಲ್ ದುಬೈನಲ್ಲಿ ಬಂಧನ
ನಿರ್ಣಯವು ಹಮಾಸ್ಅನ್ನು ಹೆಸರಿಸಲಿಲ್ಲ ಮತ್ತು ಅಮೆರಿಕದ ಕರಡು ನಿರ್ಣಯಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸಿ ಹೆಚ್ಚುವರಿ ಅಂಶಗಳನ್ನು ಸೇರಿಸಲು ಕರೆ ನೀಡಿತು. “7 ಅಕ್ಟೋಬರ್ 2023 ರಿಂದ ಇಸ್ರೇಲ್ನಲ್ಲಿ ನಡೆದ ಹಮಾಸ್ನ ಘೋರ ಭಯೋತ್ಪಾದಕ ದಾಳಿಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಮತ್ತು ಖಂಡಿಸುತ್ತದೆ. ಇದಕ್ಕೆ ಭಾರತವು ತಿದ್ದುಪಡಿಯ ಪರವಾಗಿ ಮತಹಾಕಿತು.
ಅಕ್ಟೋಬರ್ನಲ್ಲಿ, ಇಸ್ರೇಲ್ – ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಗಾಜಾ ಪಟ್ಟಿಯಲ್ಲಿ ಮಾನವೀಯ ಪ್ರವೇಶಕ್ಕೆ ಕರೆ ನೀಡಿದ ನಿರ್ಣಯಕ್ಕೆ ಭಾರತವು ಸಾಮಾನ್ಯ ಸಭೆಯಲ್ಲಿ ದೂರವಿತ್ತು. ಜೋರ್ಡಾನ್-ಕರಡು ನಿರ್ಣಯವು ಗಾಜಾ ಪಟ್ಟಿಯಾದ್ಯಂತ ನಾಗರಿಕರಿಗೆ ತಕ್ಷಣದ, ನಿರಂತರ ಹಾಗೂ ಸಾಕಷ್ಟು ಅಡೆತಡೆಯಿಲ್ಲದ ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವಂತೆ ಒತ್ತಾಯಿಸಿದೆ.
ಗಾಜಾದಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ, ಇದುವರೆಗೆ ಶೇ.70 ರಷ್ಟು ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 18,205 ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಹಾಗೂ ಸುಮಾರು 49,645 ಜನರು ಗಾಯಗೊಂಡಿದ್ದಾರೆ.
ಗಾಜಾ ಪ್ರದೇಶದಲ್ಲಿ ಕದನ ವಿರಾಮ ಒತ್ತಾಯಿಸಿದ ವಿಶ್ವಸಂಸ್ಥೆ
ಗಾಜಾದಲ್ಲಿ ಮಾನವೀಯತೆಯ ಆಧಾರದಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಮಂಗಳವಾರ ವಿಶ್ವಸಂಸ್ಥೆ ಅಂಗೀಕರಿಸಿದೆ.
ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ಹೆಚ್ಚಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಅಧಿಕಾರಿಗಳಿಂದ ತೀವ್ರ ಎಚ್ಚರಿಕೆಯ ನಂತರ, 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ 153 ರಾಷ್ಟ್ರಗಳು ಪರವಾಗಿ ಮತ ಚಲಾಯಿಸುವ ಮೂಲಕ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು ಅಂಗೀಕರಿಸಿವೆ.
ಪ್ಯಾಲೇಸ್ತೀನಿಯನ್ ಪ್ರಾಧಿಕಾರವು ನಿರ್ಣಯವನ್ನು ಸ್ವಾಗತಿಸಿತು ಮತ್ತು ಇಸ್ರೇಲ್ ಮೇಲೆ ಒತ್ತಡ ಹೇರುವಂತೆ ವಿಶ್ವಸಂಸ್ಥೆಯ ರಾಷ್ಟ್ರಗಳನ್ನು ಒತ್ತಾಯಿಸಿತು.