ಕೇರಳದ ತಿರುವನಂತಪುರಂ ಜಿಲ್ಲೆಯ ಸರ್ಕಾರಾ ದೇವಿ ದೇವಸ್ಥಾನದ ಆವರಣದಲ್ಲಿ ಆರ್ಎಸ್ಎಸ್ ಶಸ್ತ್ರಾಸ್ತ್ರ ತರಬೇತಿ ಹಾಗೂ ಸಾಮೂಹಿಕ ತರಬೇತಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಈ ದೇವಾಲಯವು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ನಿರ್ವಹಣೆಯಲ್ಲಿದೆ.
ಆರ್ಎಸ್ಎಸ್ ಮತ್ತು ಅದರ ಸದಸ್ಯರು ದೇವಾಲಯದ ಆವರಣವನ್ನು “ಅಕ್ರಮ ಬಳಕೆ ಮತ್ತು ಅನಧಿಕೃತ ಒತ್ತುವರಿ” ಮಾಡಿದ್ದು, ಅದನ್ನು ತಡೆಯಲು ಆದೇಶ ನೀಡುವಂತೆ ಕೋರಿ ಇಬ್ಬರು ಭಕ್ತರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ತನ್ನ ಹಿಂದಿನ ಆದೇಶವನ್ನು ಅನುಸರಿಸಿ ಅಗತ್ಯ ನೆರವು ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಮಂಡಳಿಯು ಆರ್ಎಸ್ಎಸ್ ತನ್ನ ಧಾರ್ಮಿಕ ಸ್ಥಳಗಳಲ್ಲಿ ಶಾಖೆಗಳನ್ನು ಸ್ಥಾಪಿಸುವುದನ್ನು ಮತ್ತು ತರಬೇತಿ ನಡೆಸುವುದನ್ನು ನಿಷೇಧಿಸಿತ್ತು. ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೇ ಆರ್ಎಸ್ಎಸ್ ಸದಸ್ಯರು ದೇವಸ್ಥಾನದಲ್ಲಿ ಅಕ್ರಮ ನಡೆಸುತ್ತಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡಿಗೂ ಹಬ್ಬಿದ ಕರ್ನಾಟಕ ಮಾದರಿ: ಮನೆಯೊಡತಿಗೆ 1 ಸಾವಿರ ರೂ. ಆರ್ಥಿಕ ನೆರವು ಘೋಷಿಸಿದ ಸ್ಟಾಲಿನ್
ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ ಜಿ ಅಜಿತ್ ಕುಮಾರ್ ಅವರಿದ್ದ ಪೀಠ ಇತ್ತೀಚಿನ ಆದೇಶದಲ್ಲಿ, ತಿರುವಾಂಕೂರು ದೇವಸ್ವಂ ಬೋರ್ಡ್ ನಿರ್ವಹಿಸುತ್ತಿರುವ ದೇವಾಲಯದ ಆವರಣದಲ್ಲಿ ಸಾಮೂಹಿಕ ಅಭ್ಯಾಸ ಅಥವಾ ಆಯುಧ ಅಭ್ಯಾಸವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ಕೇರಳ ದೇವಾಲಯಗಳನ್ನು ನಿರ್ವಹಿಸುವ ಮಂಡಳಿಯು ಮೇ 18 ರಂದು ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ಅಧಿಕಾರಿಗಳಿಗೆ ಕೇಳಿಕೊಂಡಿದೆ. ಹಿಂದಿನ ಆದೇಶದಲ್ಲಿ, ಮಂಡಳಿಯ ಅಡಿಯಲ್ಲಿ ಧಾರ್ಮಿಕ ಪ್ರದೇಶಗಳಲ್ಲಿ ಆರ್ಎಸ್ಎಸ್ನ ಶಾಖಾ ಅಥವಾ ಗುಂಪು ಅಭ್ಯಾಸ ಮಾಡುವುದನ್ನು ನಿಷೇಧಿಸಿತ್ತು.
ಆರ್ಎಸ್ಎಸ್ನಿಂದ ದೇವಾಲಯದ ಸಂಕೀರ್ಣಗಳಲ್ಲಿ ಎಲ್ಲಾ ರೀತಿಯ ಶಸ್ತ್ರಾಸ್ತ್ರ ತರಬೇತಿಯನ್ನು ನಿಷೇಧಿಸಿ ಟಿಡಿಬಿ 2016 ರಲ್ಲಿ ಸುತ್ತೋಲೆ ಹೊರಡಿಸಿತ್ತು. ನಂತರ, ಮಾರ್ಚ್ 30, 2021 ರಂದು, ಮಂಡಳಿಯು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸುತ್ತೋಲೆಯನ್ನು ಪುನಃ ಹೊರಡಿಸಿತು.