18ನೇ ಲೋಕಸಭೆ ಯ ಮೊದಲ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಲಿದ್ದು, ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ 26ರಂದು ಲೋಕಸಭಾ ಸ್ಪೀಕರ್ ಆಯ್ಕೆ ನಡೆಯಲಿದ್ದು, 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬಿಜೆಪಿ ನಾಯಕ ಮತ್ತು ಏಳು ಬಾರಿ ಸಂಸದರಾಗಿ ಅನುಭವ ಇರುವ ಭರ್ತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಅವರ ನೇಮಕಕ್ಕೆ ಸಂಬಂಧಿಸಿ ಸೃಷ್ಟಿಯಾಗಿರುವ ವಿವಾದವು ಅಧಿವೇಶನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಈ ಕ್ರಮವನ್ನು ವಿರೋಧ ಪಕ್ಷಗಳು ಈಗಾಗಲೇ ಟೀಕಿಸಿದ್ದು, ಈ ಸ್ಥಾನಕ್ಕೆ ಕಾಂಗ್ರೆಸ್ನ ಹಿರಿಯ ಸದಸ್ಯ ಕೆ. ಸುರೇಶ್ ಅವರ ಹೆಸರನ್ನು ಸೂಚಿಸಲಾಗಿದ್ದರೂ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿವೆ.
ಮಹತಾಬ್ ಅವರು ಸತತವಾಗಿ ಏಳು ಬಾರಿ ಲೋಕಸಭೆ ಸದಸ್ಯರಾಗಿದ್ದು, ಹಂಗಾಮಿ ಸ್ಪೀಕರ್ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜಿಜು ಪ್ರತಿಪಾದಿಸಿದ್ದಾರೆ. ಸುರೇಶ್ ಅವರು 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದರು ಎಂದೂ ಅವರು ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಲೋಕಸಭೆಯ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರಿಗೆ ಸೋಮವಾರ ಬೆಳಿಗ್ಗೆ ಪ್ರಮಾಣವಚನ ಬೋಧಿಸುವರು. ಬಳಿಕ ಮಹತಾಬ್ ಅವರು ಸಂಸತ್ ಭವನ ತಲುಪಿ, ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಅಧಿವೇಶನ ಆರಂಭಿಸಲಿದ್ದಾರೆ.
ಅಗಲಿದ ಗಣ್ಯರ ಗೌರವಾರ್ಥ ಮೌನ ಆಚರಿಸುವುದರ ಮೂಲಕ ಕಲಾಪ ಆರಂಭವಾಗಲಿದೆ. ಮೊದಲಿಗೆ ಲೋಕಸಭೆಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವಂತೆ ಹಂಗಾಮಿ ಸ್ಪೀಕರ್ ಕರೆ ನೀಡುತ್ತಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಹಿತಿಗಳ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಂಸ್ಕೃತಿ ಸಚಿವರ ತಿಪ್ಪೆ ಸಾರಿಸುವಿಕೆ
ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಹಂಗಾಮಿ ಸ್ಪೀಕರ್ಗೆ ನೆರವಾಗಲು ಸದಸ್ಯರಾದ ಕೆ. ಸುರೇಶ್ (ಕಾಂಗ್ರೆಸ್), ಟಿ.ಆರ್.ಬಾಲು (ಡಿಎಂಕೆ), ರಾಧಾ ಮೋಹನ್ ಸಿಂಗ್, ಫಗ್ಗನ್ ಸಿಂಗ್ ಕುಲಸ್ತೆ (ಇಬ್ಬರೂ ಬಿಜೆಪಿ) ಹಾಗೂ ಸುದೀಪ್ ಬಂದ್ಯೋಪಾಧ್ಯಾಯ (ಟಿಎಂಸಿ) ಅವರನ್ನು ರಾಷ್ಟ್ರಪತಿ ನೇಮಿಸಿದ್ದಾರೆ. ಬಳಿಕ, ಮಂತ್ರಿ ಪರಿಷತ್ತಿನ ಸದಸ್ಯರು ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವರು. ಆ ನಂತರ ಎರಡು ದಿನಗಳವರೆಗೆ ಉಳಿದ ಸದಸ್ಯರ ಪ್ರಮಾಣವಚನ ಪ್ರಕ್ರಿಯೆ ನಡೆಯಲಿದೆ.
ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆಯು 28ರಂದು ಪ್ರಾರಂಭ ವಾಗಲಿದ್ದು, ಜುಲೈ 2 ಅಥವಾ 3ರಂದು ಪ್ರಧಾನಿ ಚರ್ಚೆಗೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ನಂತರ ಎರಡೂ ಸದನಗಳನ್ನು ಸಂಕ್ಷಿಪ್ತ ಅವಧಿಗೆ ಮುಂದೂಡಲಾಗುತ್ತದೆ. ಕೇಂದ್ರ ಬಜೆಟ್ ಮಂಡನೆಗಾಗಿ ಜುಲೈ 22ರಂದು ಮತ್ತೆ ಸದನದ ಕಲಾಪ ನಡೆಯುವ ನಿರೀಕ್ಷೆಯಿದೆ.
