ಲೋಕಸಭಾ ಚುನಾವಣೆಯು ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. ಈ ಪೈಕಿ ಈಗಾಗಲೇ ನಾಲ್ಕು ಹಂತಗಳು ಈಗಾಗಲೇ ಮುಗಿದಿದೆ. ಐದನೇ ಹಂತವು ಮೇ 20ಕ್ಕೆ(ಸೋಮವಾರ) ನಡೆಯಲಿದೆ.
ಏಳು ಹಂತದ ಲೋಕಸಭೆ ಚುನಾವಣೆಯ ಐದನೇ ಸುತ್ತಿನಲ್ಲಿ ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ ಪ್ರಮುಖ 14 ಲೋಕಸಭಾ ಕ್ಷೇತ್ರಗಳಳ್ಲಿ ಸೋಮವಾರ ಮತದಾನ ನಡೆಯಲಿದೆ. 543 ಸದಸ್ಯರ ಲೋಕಸಭೆಯಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶವಾಗಿದೆ. ಪಶ್ಚಿಮ ಬಂಗಾಳದಲ್ಲಿ 42 ಸ್ಥಾನಗಳಿದ್ದರೆ, ಬಿಹಾರದಲ್ಲಿ 40 ಕ್ಷೇತ್ರಗಳಿವೆ. ಈ ಮೂರೂ ರಾಜ್ಯಗಳಲ್ಲಿ ಎಲ್ಲ ಏಳು ಹಂತಗಳಲ್ಲಿಯೂ ಕೂಡ ಮತದಾನ ನಡೆಯುತ್ತಿದೆ.
ಮೇ 20ಕ್ಕೆ(ಸೋಮವಾರ) ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಘಟಾನುಘಟಿಗಳು ಸ್ಪರ್ಧಿಸುತ್ತಿರುವ ಲೋಕಸಭಾ ಕ್ಷೇತ್ರ ಕೂಡ ಒಳಗೊಂಡಿದೆ. ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ರಾಯ್ ಬರೇಲಿಯಿಂದ ಕಾಂಗ್ರೆಸ್ ಮುಖಂಡ ಸ್ಪರ್ಧಿಸುತ್ತಿದ್ದಾರೆ.
ಉಳಿದಂತೆ ಮೋಹನ್ಲಾಲ್ಗಂಜ್, ಲಕ್ನೋ, ಅಮೇಥಿ, ಜಲೌನ್, ಝಾನ್ಸಿ, ಹಮೀರ್ಪುರ್, ಬಂದಾ, ಫತೇಪುರ್, ಬಾರಾಬಂಕಿ, ಕೌಶಂಬಿ, ಫೈಜಾಬಾದ್, ಕೈಸರ್ಗಂಜ್ ಮತ್ತು ಗೊಂಡಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ.
ಚುನಾವಣಾ ಆಯೋಗದ (ಇಸಿಐ) ಪ್ರಕಾರ , ಐದನೇ ಹಂತದಲ್ಲಿ 144 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಯೋಗವು ಒಟ್ಟು 466 ನಾಮಪತ್ರಗಳನ್ನು ಸ್ವೀಕರಿಸಿದ್ದು ಅದರಲ್ಲಿ 147 ಅನ್ನು ಪರಿಶೀಲಿಸಿ, ಅಂತಿಮವಾಗಿ 144 ಅಭ್ಯರ್ಥಿಗಳ ನಾಮಪತ್ರಗಳನ್ನು ಅಂಗೀಕರಿಸಿದೆ.
ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ರಾಜ್ನಾಥ್ ಸಿಂಗ್ ಐದನೇ ಹಂತದಲ್ಲಿ ಸ್ಪರ್ಧಿಸುತ್ತಿರುವ ಇತರೆ ಪ್ರಮುಖ ರಾಜಕೀಯ ನಾಯಕರು. ಸ್ಮೃತಿ ಇರಾನಿ ಅಮೇಥಿಯಿಂದ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಿಶೋರಿ ಲಾಲ್ ಶರ್ಮಾ ಕಣದಲ್ಲಿದ್ದಾರೆ. ರಾಜ್ನಾಥ್ ಸಿಂಗ್ ಲಕ್ನೋದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದು, ರವಿದಾಸ್ ಮೆಹ್ರೋತ್ರಾ ಎಸ್ಪಿಯಿಂದ ಟಿಕೆಟ್ ಪಡೆದುಕೊಂಡಿದ್ದು, ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ನಾಕೌಟ್ ಪಂದ್ಯ | ಆರ್ಸಿಬಿ ಗೆಲುವಿಗೆ ಕಾರಣವಾದದ್ದು ಧೋನಿ ಬಾರಿಸಿದ 110 ಮೀಟರ್ನ ಸಿಕ್ಸ್!
ಉಳಿದಂತೆ ಕೈಸರ್ಗಂಜ್ ಕ್ಷೇತ್ರದಿಂದ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಕೂಡ ಕಣದಲ್ಲಿದ್ದಾರೆ. ಬಿಜೆಪಿಯು ಬ್ರಿಜ್ ಭೂಷಣ್ಗೆ ಟಿಕೆಟ್ ನೀಡಲು ನಿರಾಕರಿಸಿದ್ದರೂ ಕೂಡ, ಅವರ ಮಗನಿಗೆ ಮಣೆ ಹಾಕಿದೆ.
