ಆನ್ಲೈನ್ ಮಾರುಕಟ್ಟೆಗೆ ನಾವೆಲ್ಲವೂ ಮಾರುಹೋಗುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ತ್ವರಿತವಾಗಿ, ಕಡಿಮೆ ದರದಲ್ಲಿ, ನಾವು ಕುಳಿತಲ್ಲಿಗೆ ನಮಗೆ ಬೇಕಾದ ಸಾಮಾಗ್ರಿಗಳು ಬಂದು ತಲುಪುವುದು. ಬಟ್ಟೆಯಿಂದ ಹಿಡಿದು ಪ್ರತಿ ದಿನ ಬಳಸುವ ಬ್ರಶ್, ಪೇಸ್ಟು, ಸಾಬೂನು- ಹೀಗೆ ಎಲ್ಲ ಸಾಮಾಗ್ರಿಗಳ ಖರೀದಿಗೂ ಆನ್ಲೈನ್ ಮಾರುಕಟ್ಟೆಯ ರಿಯಾಯಿತಿ ಮೋಹಕ್ಕೆ ಸಿಲುಕುತ್ತಿದ್ದೇವೆ. ಇವೆಲ್ಲವುದರ ನಡುವೆ ಚಿಲ್ಲರೆ ಅಂಗಡಿ ಮಾಲೀಕರ ದುಸ್ಥಿತಿಯನ್ನು ಮರೆಯುತ್ತಿದ್ದೇವೆ.
ಇದು ಮಾನವ ಸಹಜ ಗುಣ. ನಮಗೆ ಅಗತ್ಯ ವಸ್ತುಗಳು ಕಡಿಮೆ ಬೆಲೆಗೆ ನಮ್ಮ ಮನೆ ಬಾಗಿಲಿಗೆ ಬಂದು ತಲುಪುವಾಗ ನಾಲ್ಕು ಹೆಜ್ಜೆ ನಡೆದು ಸ್ವಚ್ಛಂದ ಗಾಳಿ ಉಸಿರಾಡುವ ಸಾಹಸಕ್ಕೆ ಕೈಹಾಕುವುದಿಲ್ಲ. ಜತೆಗೆ ಆನ್ಲೈನ್ ಮಾರುಕಟ್ಟೆಯಲ್ಲಿ ಇಷ್ಟೊಂದು ಕಡಿಮೆ ದರದಲ್ಲಿ ವಸ್ತುಗಳನ್ನು, ದಿನಸಿಗಳನ್ನು ನೀಡಲು ಹೇಗೆ ಸಾಧ್ಯ? ಅದರ ಗುಣಮಟ್ಟವೇನು? ಎಂಬ ಬಗ್ಗೆ ಚಿಂತಿಸುವುದೂ ಇಲ್ಲ.
ಇದನ್ನು ಓದಿದ್ದೀರಾ? ವೀಸಾ ವಿಳಂಬ | ಪಾಕ್ ಯುವತಿ ಜೊತೆ ಆನ್ಲೈನ್ನಲ್ಲೇ ಮದುವೆಯಾದ ಬಿಜೆಪಿ ನಾಯಕನ ಪುತ್ರ
ಆಧುನಿಕ ಕಾಲದಲ್ಲಿ ಸಕಲ ಪರಿವರ್ತನೆಗೆ ನಾವು ಮೈಯೊಡ್ಡಿಕೊಳ್ಳುತ್ತಾ ಹೋದಂತೆ ಅದರಿಂದಾಗುವ ನಷ್ಟ, ಅಪಾಯ, ಏರಿಳಿತಗಳತ್ತ ಕಣ್ಣಾಯಿಸುವುದಿಲ್ಲ. ಅದೇ ರೀತಿ ಪ್ರಸ್ತುತ ಚಿಲ್ಲರೆ ಅಂಗಡಿ ನಡೆಸುವವರ ಪಾಡು. ಅವರತ್ತ ಮುಖ ಮಾಡುವವರಿಲ್ಲ.
ಪ್ರಸ್ತುತ, ‘ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್’ಗಳು ಕಿರಾಣಿ ಅಂಗಡಿಗಳ ವ್ಯಾಪಾರವನ್ನು ನುಂಗುತ್ತಿವೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದೆ. ಇದಕ್ಕೆ ಕಾರಣ ಎಫ್ಎಂಸಿಜಿ ವಿತರಕರ ಸಂಸ್ಥೆಯಾದ ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟ (ಎಐಸಿಪಿಡಿಎಫ್) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಾಗಿದೆ. ಈ ಆನ್ಲೈನ್ ಮಾರುಕಟ್ಟೆಯ ಕ್ಷಿಪ್ರ ಏರಿಕೆಯಿಂದಾಗಿ ಸುಮಾರು ಎರಡು ಲಕ್ಷ ಕಿರಾಣಿ ಅಂಗಡಿಗಳು ಮುಚ್ಚಿವೆ ಎಂದು ಈ ವರದಿ ಹೇಳುತ್ತದೆ.
ಅದರಲ್ಲೂ ಮುಖ್ಯವಾಗಿ ಮೆಟ್ರೋ ನಗರಗಳಲ್ಲಿ ಈ ಆನ್ಲೈನ್ ವಾಣಿಜ್ಯ ಆಯ್ಕೆಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ ಹಲವು ಅಂಗಡಿ ಮಾಲೀಕರು ನಷ್ಟದ ಕೂಪಕ್ಕೆ ಬಂದು ಮೇಲೆರಲಾರದೆ ಒದ್ದಾಡುತ್ತಿದ್ದಾರೆ. ಶ್ರೇಣಿ 1 ನಗರಗಳಲ್ಲಿ ಮತ್ತು ಶ್ರೇಣಿ 2/3 ನಗರಗಳಲ್ಲಿ ಶೇಕಡ 45ರಷ್ಟು ಅಂಗಡಿಗಳನ್ನು ಮುಚ್ಚಲಾಗಿದೆ.
ಇದನ್ನು ಓದಿದ್ದೀರಾ? ರಾಯಚೂರು | ಆನ್ಲೈನ್ ಬೆಟ್ಟಿಂಗ್ ಗೇಮ್ನಿಂದ ಯುವಕರು ಬೀದಿಪಾಲು: ನಿಷೇಧಕ್ಕೆ ಆಗ್ರಹಿಸಿ ಮನವಿ
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು!
ಕೋವಿಡ್ ಸಮಯದಲ್ಲಿ ಅನಿವಾರ್ಯ ಎನಿಸಿದ ಈ ಆನ್ಲೈನ್ ಮಾರುಕಟ್ಟೆ ಈಗ ಪೈಪೋಟಿಯ ಕ್ಷೇತ್ರವಾಗಿ ಮಾರ್ಪಟ್ಟಿರುವುದು ಕೂಡಾ ನಿಜ. ಅದಕ್ಕೆ ಸ್ಪಷ್ಟ ಉದಾಹರಣೆ ಹೊಸ ಹೊಸದಾಗಿ ಹುಟ್ಟಿಕೊಳ್ಳುವ ಆನ್ಲೈನ್ ಡೆಲಿವರಿ ಆ್ಯಪ್ಗಳು. ಹತ್ತು ನಿಮಿಷದಲ್ಲಿ ಡೆಲಿವರಿ, ಹಬ್ಬಗಳ ಆಫರ್ಗಳನ್ನು ನೀಡುವ ಪರಸ್ಪರ ಪೈಪೋಟಿ ಆನ್ಲೈನ್ ಆ್ಯಪ್ಗಳ ನಡುವೆ ನಡೆಯುತ್ತದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇಲ್ಲಿ ಈ ಡೆಲಿವರಿ ಆ್ಯಪ್ಗಳ ಊಹೆಗೆ ಎಟುಕದ ಆಫರ್ಗಳಿಂದ ಚಿಲ್ಲರೆ ಅಂಗಡಿ ಎಂಬ ಕೂಸು ಬಡವಾಗುತ್ತದೆ.
ಬ್ರೋಕರೇಜ್ ಸಂಸ್ಥೆ ಎಲಾರಾ ಕ್ಯಾಪಿಟಲ್ ಅಕ್ಟೋಬರ್ 22ರಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ, “ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದ ಚಿಲ್ಲರೆ ಅಂಗಡಿಗಳ ಮೇಲಾದ ನಕಾರಾತ್ಮಕ ಪರಿಣಾಮದಿಂದಾಗಿ ವಿತರಕರುಗಳಿಗೆ ಚಿಲ್ಲರೆ ಅಂಗಡಿಗಳಿಂದ ಬಾಕಿ ಮೊತ್ತವನ್ನು ಮರುಪಡೆಯಲು ಸಾಧ್ಯವಾಗುತ್ತಿಲ್ಲ.”
ವ್ಯಾಪಾರವಾಗುವ ಭರವಸೆಯಲ್ಲಿ ಕಿರಾಣಿ ಅಂಗಡಿಗಳು ವಿತರಕರಿಂದ ಸಾಮಾಗ್ರಿ ಪಡೆದಿರುತ್ತದೆ. ಆದರೆ, ದಾಸ್ತಾನು ಖಾಲಿಯಾಗದ ಕಾರಣ ವಿತರಕರಿಗೆ ಹಣವನ್ನು ನೀಡಲು ಕಿರಾಣಿ ಅಂಗಡಿಗಳಿಗೆ ಸಾಧ್ಯವಾಗುತ್ತಿಲ್ಲ. ಆನ್ಲೈನ್ ವ್ಯಾಪಾರದ ಹೆಚ್ಚಳವು ಚಿಲ್ಲರೆ ಅಂಗಡಿಗಳ ಮೇಲೆ ಪ್ರಭಾವ ಬೀರಿದೆ ಎಂದು ವರದಿಯು ಎತ್ತಿ ತೋರಿಸುತ್ತದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಆನ್ಲೈನ್ ಉದ್ಯೋಗದ ಹೆಸರಲ್ಲಿ 6 ಕೋಟಿ ವಂಚನೆ: 10 ಮಂದಿ ಆರೋಪಿಗಳ ಬಂಧನ
ಇಲ್ಲಿ ನಾವು ಆನ್ಲೈನ್ ಮಾರುಕಟ್ಟೆಯಿಂದ ನಮಗಾಗುವ ಸಹಾಯ, ಲಾಭವನ್ನು ಅಲ್ಲಗಳೆಯುವಂತಿಲ್ಲ. ಜತೆಗೆ ಚಿಲ್ಲರೆ ಅಂಗಡಿ ಮಾಲೀಕರ ನೋವನ್ನು, ನಷ್ಟವನ್ನು ಮೂಲೆಗುಂಪು ಮಾಡುವಂತೆಯೂ ಇಲ್ಲ. ವಾಟ್ಸಾಪ್ ಮೂಲಕ, ಕರೆಯ ಮೂಲಕ ದಿನಸಿ ಆರ್ಡರ್ ಪಡೆದು ಮನೆಗೆ ಡೆಲಿವರಿ ಮಾಡುವುದು ಕೆಲವು ಅಂಗಡಿ ಮಾಲೀಕರ ತಮ್ಮ ಉಳಿವಿನ ಹೋರಾಟ. ಈಗ ತಮ್ಮ ಉಳಿವಿಗಾಗಿ ಕೆಲವು ಅಂಗಡಿ ಮಾಲೀಕರ ಡೆಲಿವರಿ ಉಪಾಯವನ್ನು ಎಲ್ಲ ಅಂಗಡಿ ಮಾಲೀಕರು ಪಾಲಿಸಿದರೆ ತಮ್ಮ ವ್ಯಾಪಾರ ಉಳಿಸಿಕೊಳ್ಳಬಹುದೆಸುತ್ತದೆ. ಆದರೆ ಇದಕ್ಕೆ ಹಣಕಾಸು, ಸಮಯ ನಿರ್ವಹಣೆ, ಹೆಚ್ಚುವರಿ ಉದ್ಯೋಗಿ ಎಂಬ ಅಡತಡೆ ಖಂಡಿತವಾಗಿಯೂ ಬರುತ್ತದೆ.
ಆನ್ಲೈನ್ ಮಾರುಕಟ್ಟೆ ಎಷ್ಟು ಹಿತವೋ ಅಷ್ಟೇ ಮಿತಕ್ಕೆ ಕಡಿವಾಣ, ಜೊತೆಗೆ ಅಷ್ಟೇ ತಿಕ್ತ. ಸುಲಭ, ತ್ವರಿತ, ಕಡಿಮೆ ವೆಚ್ಚದ ಖರೀದಿಗಾಗಿ ಆನ್ಲೈನ್ ಮಾರುಕಟ್ಟೆಗೆ ಮಾರುಹೋದಾಗ ಇತ್ತ ಚಿಲ್ಲರೆ ಅಂಗಡಿ ಮಾಲೀಕರ ಅಳಲು ನಮ್ಮ ಕಿವಿಗೆ ಕೇಳಿಸಲಾರದು. ಆನ್ಲೈನ್ ಮಾರುಕಟ್ಟೆ ಹರವು ಹೆಚ್ಚಾದಷ್ಟು ಕಿರಾಣಿ ಅಂಗಡಿಗಳ ನಡೆಸುವ ಮಧ್ಯಮ ವರ್ಗವು ನಷ್ಟದ ಹೊರೆ ಹೊರಲಾಗದೆ ಅಂಗಡಿ ಬಾಗಿಲು ಮುಚ್ಚಿ ಕೈಚೆಲ್ಲಿ ನಿಲ್ಲಬೇಕಾದ ದುಸ್ಥಿತಿ ಬಂದೊದಗಿದೆ ಎಂಬುದು ವಾಸ್ತವ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.