ಪಂಜಾಬ್ನ ಫಿರೋಜ್ಪುರದಲ್ಲಿ 2022ರಲ್ಲಿ ಪ್ರಧಾನಿ ಮೋದಿ ಪ್ರಯಾಣದ ವೇಳೆ ಸಂಭವಿಸಿದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 25 ರೈತರ ವಿರುದ್ಧ ಕೊಲೆಯತ್ನ ಆರೋಪದಲ್ಲಿ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ಭಾರತಿ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಗುರುವಾರ ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರತಿಭಟನಾ ನಿರತ ರೈತ ಕನ್ವಲ್ಜಿತ್ ಸಿಂಗ್ ಅವರ ಜಾಮೀನು ಅರ್ಜಿಯನ್ನು ಫಿರೋಜ್ಪುರದ ನ್ಯಾಯಾಲಯ ತಿರಸ್ಕರಿಸಿದ ನಂತರ ಎಫ್ ಐಆರ್ ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ಅಂದರೆ ಕೊಲೆ ಯತ್ನ ಆರೋಪಕ್ಕೆ ಸಂಬಂಧಿತ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿರುವುದು ತಿಳಿದು ಬಂದಿದೆ ಎಂದು ರೈತ ಸಂಘಟನೆಯ ನಾಯಕರು ತಿಳಿಸಿದ್ದಾರೆ.
2022ರ ಜನವರಿ 5ರಂದು ಪಂಜಾಬ್ನ ಫಿರೋಜ್ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಾಗ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ 15 ರಿಂದ 20 ನಿಮಿಷಗಳ ಕಾಲ ಫ್ಲೈಓವರ್ ನಲ್ಲಿ ಸಿಲುಕಿಕೊಂಡಿದ್ದರು. ನಂತರ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಅರ್ಧದಿಂದ ಹಿಂತಿರುಗಿದ್ದರು.
ಭದ್ರತಾ ಉಲ್ಲಂಘನೆ ಘಟನೆಯ ತನಿಖೆಗಾಗಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ʼಇಂದು ಮಲ್ಹೋತ್ರಾʼ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿತ್ತು. ನಂತರ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ರೈತ ಹೋರಾಟ | ಜನವರಿ 21ರಿಂದ ದೆಹಲಿ ಚಲೋ ಪುನರಾರಂಭ: ರೈತ ಸಂಘಟನೆಗಳ ಘೋಷಣೆ
ಆರಂಭದಲ್ಲಿ ಐಪಿಸಿಯ ಸೆಕ್ಷನ್ 283ರಡಿಯಲ್ಲಿ ಕುಲ್ ಗಢಿ ಪೊಲೀಸ್ ಠಾಣೆಯಲ್ಲಿ 150 ಅಪರಿಚಿತರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಮೂವರು ಸದಸ್ಯರ ವಿಶೇಷ ತನಿಖಾ ತಂಡ ಈ ಕುರಿತು ತನಿಖೆ ನಡೆಸಿದ ನಂತರ,ಪೊಲೀಸರು ಎಫ್ ಐಆರ್ ನಲ್ಲಿ ಸೆಕ್ಷನ್ 307(ಕೊಲೆ ಯತ್ನ), 353 (ಸಾರ್ವಜನಿಕ ಸೇವಕನ ಮೇಲೆ ಹಲ್ಲೆ), 186 (ಕರ್ತವ್ಯಕ್ಕೆ ಅಡ್ಡಿ), 149 (ಕಾನೂನುಬಾಹಿರ ಸಭೆ),341 ಮತ್ತು ರಾಷ್ಟ್ರೀಯ ಹೆದ್ದಾರಿ ಕಾಯ್ದೆಯ ಸೆಕ್ಷನ್ 8ಬಿ ಯನ್ನು ಸೇರಿಸಿದ್ದಾರೆ ಎಂದು ರೈತರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಭಾರತಿ ಕಿಸಾನ್ ಯೂನಿಯನ್(ಕ್ರಾಂತಿಕಾರಿ) ಅಧ್ಯಕ್ಷ ಬಲದೇವ್ ಸಿಂಗ್ ಝಿರಾ, ಪ್ರತಿಭಟನಾಕಾರರಲ್ಲಿ ಓರ್ವರಾದ ಕನ್ವಲ್ಜಿತ್ ಸಿಂಗ್ ಅವರ ಜಾಮೀನು ಅರ್ಜಿಯನ್ನು ಮಂಗಳವಾರ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಘಟನೆ ನಡೆದು ಮೂರು ವರ್ಷಗಳಾಗಿವೆ. ರೈತರು ವಾಸ್ತವವಾಗಿ ಪ್ರತಿಭಟನೆ ನಡೆಸಲು ಜಿಲ್ಲಾಧಿಕಾರಿ ಕಚೇರಿ ಕಡೆಗೆ ಹೋಗುತ್ತಿದ್ದರು, ಆದರೆ, ಪೊಲೀಸರು ಸೇತುವೆಯ ಬಳಿ ರೈತರನ್ನು ತಡೆದರು. ಪ್ರಧಾನಿ ಅದೇ ರಸ್ತೆಯ ಮೂಲಕ ಬರುತ್ತಿದ್ದಾರೆ ಎಂಬುದು ರೈತರಿಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.