ಭಾರತದ ವಿವಿಧ ಭಾಗದವರನ್ನು ಚೀನಿಯರು, ಆಫ್ರಿಕನ್ನರು, ಅರಬ್ಬರಿಗೆ ಹೋಲಿಸಿದ ಕಾಂಗ್ರೆಸ್ ಸಾಗರೋತ್ತರ ಭಾರತದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ವಿರುದ್ಧ ಬಿಜೆಪಿ ಟೀಕಿಸಿದ ಬೆನ್ನಲ್ಲೆ ಕಾಂಗ್ರೆಸ್ ಅಂತರವನ್ನು ಕಾಯ್ದುಕೊಂಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತದ ವೈವಿದ್ಯತೆಯ ಬಗ್ಗೆ ಹೋಲಿಕೆ ಮಾಡಿರುವ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಅತ್ಯಂತ ದುರಾದೃಷ್ಟಕರ ಹಾಗೂ ಸ್ವೀಕಾರ್ಹವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಹೇಳಿಕೆಯಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ್ದ ಸ್ಯಾಮ್ ಪಿತ್ರೋಡಾ, “ನಾವು ಭಾರತದಂತಹ ವೈವಿದ್ಯತೆ ದೇಶವನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಬಹುದು.ಈಶಾನ್ಯ ಭಾರತದಲ್ಲಿರುವವರು ಚೀನಿಗಳಂತೆ, ಪಶ್ಚಿಮ ಭಾಗದವರು ಅರಬ್ಬರಂತೆ,ಉತ್ತರದವರು ಶ್ವೇತ ವರ್ಣದವರಂತೆ ಹಾಗೂ ದಕ್ಷಿಣದವರು ಆಫ್ರಿಕಾದವರಂತೆ ಕಾಣುತ್ತಾರೆ. ಇದು ಅಂತಹ ದೊಡ್ಡ ವಿಷಯವಾಗುವುದಿಲ್ಲ. ನಾವೆಲ್ಲರು ಸೋದರ ಸೋದರಿಯರು” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ
ದೇಶದ ಜನರು ವಿವಿಧ ಭಾಷೆಗಳು, ಉಡುಪುಗಳು ಹಾಗೂ ಆಹಾರವನ್ನು ಗೌರವಿಸುತ್ತಾರೆ. ಆ ಭಾರತದಲ್ಲಿ ನಂಬಿಕೆ ಹೊಂದಿದ್ದು, ಪ್ರತಿಯೊಬ್ಬರಿಗೂ ವಾಸಿಸಲು ಸ್ಥಳವಿದ್ದು, ಎಲ್ಲರೂ ರಾಜಿ ಮಾಡಿಕೊಂಡು ಬದುಕುತ್ತಾರೆ ಎಂದು ಸ್ಯಾಮ್ ಪಿತ್ರೋಡಾ ತಿಳಿಸಿದ್ದರು.
“ಭಾರತವು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಭ್ರಾತೃತ್ವದೊಂದಿಗೆ ಬೇರೂರಿದೆ. ಆದರೆ ಈಗ ಸ್ವಾತಂತ್ರ್ಯವು ರಾಮ ನವಮಿ, ರಾಮ ದೇಗುಲದೊಂದಿಗೆ ಸವಾಲು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಮಯದಲ್ಲೂ ದೇಗುಲಕ್ಕೆ ತೆರಳುತ್ತಾರೆ. ಅವರು ಭಾರತದ ನಾಯಕರಂತೆ ಮಾತನಾಡದೆ, ಬಿಜೆಪಿಯವರಂತೆ ಮಾತನಾಡುತ್ತಾರೆ” ಎಂದು ಪಿತ್ರೋಡಾ ಹೇಳಿದ್ದರು.
ಸ್ಯಾಮ್ ಪಿತ್ರೋಡಾ ಈ ಮೊದಲು ಪಿತ್ರಾರ್ಜಿತ ತೆರಿಗೆಯ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಬಿಜೆಪಿ ನಾಯಕರು ಪಿತ್ರೋಡಾ ಅವರ ಪಿತ್ರಾರ್ಜಿತ ತೆರಿಗೆಯ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದರು.
