ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ಸ್ಪ್ಯಾನಿಷ್ ಪ್ರವಾಸಿ ಮಹಿಳೆಯ ಸಾಮೂಹಿಕ ಅತ್ಯಾಚಾರ (ಗ್ಯಾಂಗ್ ರೇಪ್) ಮಾಡಿದ ಪ್ರಕರಣದಲ್ಲಿ ಬಂಧಿತ ಮೂವರು ಆರೋಪಿಗಳಿಗೆ ಭಾನುವಾರ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಜಾರ್ಖಂಡ್ನ ರಾಜಧಾನಿ ರಾಂಚಿಯಿಂದ ಸುಮಾರು 300 ಕಿಮೀ ದೂರದಲ್ಲಿರುವ ಹಂಸಡೀಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್ನಲ್ಲಿ ಶುಕ್ರವಾರ ಸ್ಪೇನ್ನ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಅಲ್ಲಿ ಮಹಿಳೆಯು ತನ್ನ ಪತಿಯೊಂದಿಗೆ ಟೆಂಟ್ನಲ್ಲಿ ರಾತ್ರಿ ತಂಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮಹಿಳೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಮಹಿಳೆಗೆ ಥಳಿಸಿ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ಆಕೆಯ ಪತಿಗೂ ಹಲ್ಲೆ ಮಾಡಿದ್ದಾರೆ. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ್ ಸಿಂಗ್ ಖೇರ್ವಾರ್, ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದಿದ್ದಾರೆ. ಅತ್ಯಾಚಾರದ ಆರೋಪವನ್ನು ಹೊತ್ತಿರುವ ಏಳು ಮಂದಿಯ ಪೈಕಿ ಮೂವರನ್ನು ಈಗಾಗಲೇ ಬಂಧಿಸಿ, ಕೋರ್ಟ್ನಲ್ಲಿ ಹಾಜರುಪಡಿಸಲಾಗಿದೆ. ಕೋರ್ಟ್ ಈ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.
“ಗ್ಯಾಂಗ್ ರೇಪ್ ಮಾಡಿದ ಇತರೆ ನಾಲ್ವರು ಆರೋಪಿಗಳನ್ನು ಗುರುತಿಸಲಾಗಿದ್ದು ಶೋಧ ನಡೆಸಲಾಗುತ್ತಿದೆ. ಉಳಿದ ನಾಲ್ವರನ್ನು ಶೀಘ್ರವೇ ಬಂಧಿಸಲಾಗುತ್ತದೆ,” ಎಂದು ಖೇರ್ವಾರ್ ತಿಳಿಸಿದರು. “ಪೊಲೀಸರು ನವದೆಹಲಿಯಲ್ಲಿರುವ ಸ್ಪೇನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಎಲ್ಲ ಬೆಳವಣಿಗೆಯ ಮಾಹಿತಿಯನ್ನು ರಾಯಭಾರ ಕಚೇರಿಗೆ ನೀಡಲಾಗುತ್ತಿದೆ,” ಎಂದು ತಿಳಿಸಿದರು.
ಇನ್ನು ದಂಪತಿಗಳು ಯಾವಾಗ ಜಾರ್ಖಂಡ್ನಿಂದ ಸ್ಪೇನ್ಗೆ ಹಿಂದಿರುಗುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಖೇರ್ವಾರ್, “ಪ್ರಸ್ತುತ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಈ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ,” ಎಂದಿದ್ದಾರೆ.
“ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ಹಂಸಡೀಹಾ ಠಾಣೆಯ ಪೊಲೀಸ್ ಗಸ್ತು ತಂಡವು ರಸ್ತೆ ಬದಿಯಲ್ಲಿದ್ದ ಈ ಸ್ಪೇನ್ ದಂಪತಿಯನ್ನು ನೋಡಿದ್ದಾರೆ. ಈ ದಂಪತಿ ಸ್ಪ್ಯಾನಿಷ್ ಭಾಷೆ ಮಾತ್ರ ಮಾತನಾಡುತ್ತಿದ್ದು, ಆರಂಭದಲ್ಲಿ ಇವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅತ್ಯಾಚಾರ ನಡೆದಿರುವುದನ್ನು ದಂಪತಿಯು ವೈದ್ಯರಿಗೆ ತಿಳಿಸಿದ್ದಾರೆ,” ಎಂದು ಎಸ್ಪಿ ಪೀತಾಂಬರ ಸಿಂಗ್ ಮಾಹಿತಿ ನೀಡಿದ್ದಾರೆ.
ಸುಮಾರು 28 ವರ್ಷದ ಮಹಿಳೆ ಮತ್ತು ಆಕೆಯ 64 ವರ್ಷದ ಪತಿ ಎರಡು ಮೋಟಾರ್ ಸೈಕಲ್ಗಳಲ್ಲಿ ಬಾಂಗ್ಲಾದೇಶದಿಂದ ದುಮ್ಕಾ ತಲುಪಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯದಲ್ಲಿ ಟೆಂಟ್ನಲ್ಲಿ ನೆಲೆಸಿದ್ದು, ಈ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಮಮತಾ ಕುಮಾರಿ ಸಂತ್ರಸ್ಥೆಯನ್ನು ಭೇಟಿಯಾಗಿದ್ದಾರೆ.
“ಈ ಘಟನೆ ದುರದೃಷ್ಟಕರ. ಇದು ಜಾರ್ಖಂಡ್ನ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಹಿರಂಗಪಡಿಸಿದೆ. ಎಲ್ಲಾ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಕಠಿಣ ಕ್ರಮವನ್ನು ಕೈಗೊಳ್ಳಬೇಕು,” ಎಂದು ಮಮತಾ ಕುಮಾರಿ ಆಗ್ರಹಿಸಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.