ವಿಚಾರಣಾಧೀನ ಕೈದಿಗಳ ಬಟ್ಟೆ ಬಿಚ್ಚಿ ತಪಾಸಣೆ ನಡೆಸುವುದು ಅವರ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆ ಹಾಗೂ ಅಪಮಾನಕಾರಿ ಎಂದು ಮುಂಬೈ ವಿಶೇಷ ನ್ಯಾಯಾಲಯವೊಂದು ಅಭಿಪ್ರಾಯಪಟ್ಟಿದೆ.
“ವಿಚಾರಣಾಧೀನ ಕೈದಿಯ ವಿರುದ್ಧ ಅಸಂಸದೀಯ ಅಥವಾ ಅಶ್ಲೀಲ ಭಾಷೆ ಬಳಸುವುದೂ ಕೂಡಾ ಅಪಮಾನಕಾರಿ. ಆದ ಕಾರಣ ಅಧೀಕ್ಷಕರು ಹಾಗೂ ಸಂಬಂಧಿತ ಭದ್ರತಾ ಸಿಬ್ಬಂದಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕಿದೆ” ಎಂದು ವಿಶೇಷ ನ್ಯಾಯಾಧೀಶ ಬಿ ಡಿ ಶೆಲ್ಕೆ ಅಭಿಪ್ರಾಯ ಪಟ್ಟಿದ್ದಾರೆ.
1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿ ಮೂರನೆ ಹಂತದ ವಿಚಾರಣಾಧೀನ ಕೈದಿಯಾಗಿರುವ ಅಹ್ಮದ್ ಕಮಾಲ್ ಶೇಖ್ ಎಂಬ ಆರೋಪಿಯು, ನ್ಯಾಯಾಲಯದ ವಿಚಾರಣೆಯ ನಂತರ ಕಾರಾಗೃಹಕ್ಕೆ ವಾಪಸು ಕರೆ ತಂದಾಗ, ತನ್ನನ್ನು ಕಾರಾಗೃಹದ ಪ್ರವೇಶ ದ್ವಾರದ ಬಳಿ ಬೆತ್ತಲೆಯಾಗಿ ನಿಲ್ಲಿಸಲಾಗಿತ್ತು ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಒಂದು ವೇಳೆ ವಿದ್ಯುನ್ಮಾನ ಶೋಧಕಗಳು ಲಭ್ಯವಿಲ್ಲದಿದ್ದರೆ ವಿಚಾರಣಾಧೀನ ಕೈದಿಗಳ ವೈಯಕ್ತಿಕ ಶೋಧವನ್ನು ದೈಹಿಕವಾಗಿ ನಡೆಸಬೇಕು. ಆದರೆ ಯಾವುದೇ ಕಾರಣಕ್ಕೂ ಅವರನ್ನು ಬೆತ್ತಲೆ ಮಾಡಬಾರದು. ಅವರ ವಿರುದ್ಧ ಅವಾಚ್ಯ ಅಥವಾ ಅಸಂಸದೀಯ ಭಾಷೆಯನ್ನು ಬಳಸಬಾರದು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಫಿರ್ಯಾದುದಾರರ ಪರ ಸಾಕ್ಷಿಯಾಗಿ ಪರಿವರ್ತನೆಗೊಂಡಿದ್ದ ವಿಚಾರಣಾಧೀನ ಕೈದಿಯೊಬ್ಬರು ತನ್ನನ್ನು ಆರ್ಥರ್ ರಸ್ತೆ ಕಾರಾಗೃಹದ ಅಧೀಕ್ಷಕರು ಹಾಗೂ ಭದ್ರತಾ ಸಿಬ್ಬಂದಿ ಬೆತ್ತಲೆಗೊಳಿಸಿ ತಪಾಸಣೆ ನಡೆಸಿದ್ದಾರೆ ಎಂದು ನ್ಯಾಯಾಲಯಕ್ಕೆ ನೀಡಿದ್ದ ದೂರಿನಲ್ಲಿ ಹುರುಳಿರುವುದನ್ನು ಕಳೆದ ಫೆಬ್ರವರಿಯಲ್ಲಿ ನ್ಯಾಯಾಲಯ ಗಮನಿಸಿತ್ತು.
ವಿಚಾರಣಾಧೀನ ಕೈದಿಗಳ ತಪಾಸಣೆಯನ್ನು ವಿದ್ಯುನ್ಮಾನ ಶೋಧಕ ಹಾಗೂ ಗ್ಯಾಡ್ಜೆಟ್ಗಳನ್ನು ಮಾತ್ರ ಬಳಸಿ ಮಾಡಬೇಕು ಎಂದು ಆರ್ಥರ್ ರಸ್ತೆ ಕಾರಾಗೃಹದ ಅಧೀಕ್ಷಕ ಹಾಗೂ ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ.