- ಬಾಲ್ಯ ವಿವಾಹ ನಿಷೇಧಾಜ್ಞೆ ಗಮನಿಸುವ ಹೆಚ್ಚುವರಿ ಹೊಣೆಗಾರಿಕೆ
- ಮು.ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದಿಂದ ಅರ್ಜಿ ವಿಚಾರಣೆ
ದೇಶದಲ್ಲಿ ಬಾಲ್ಯ ವಿವಾಹ ನಿಷೇಧಾಜ್ಞೆ ಜಾರಿಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಗುರುವಾರ (ಏಪ್ರಿಲ್ 13) ಕೇಂದ್ರ ಸರ್ಕಾರವನ್ನು ಕೇಳಿದೆ.
ಸೊಸೈಟಿ ಫಾರ್ ಎನ್ಲೈಟ್ಮೆಂಟ್ ಮತ್ತು ವಾಲಂಟರಿ ಆಕ್ಷನ್ ಸಂಸ್ಥೆಗಳು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು.
2006ರ ಬಾಲ್ಯ ವಿವಾಹಗಳ ನಿಷೇಧಾಜ್ಞೆ ಕಾಯ್ದೆಯಡಿ ನಿಷೇಧ ಜಾರಿಗೊಳಿಸಲು ಯಾವುದೇ ಅಧಿಕಾರಿಗಳು ನೇಮಕವಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಬಾಲ್ಯ ವಿವಾಹ ಈಗಲೂ ಚಾಲ್ತಿಯಲ್ಲಿದೆ ಎಂದು ಹೇಳಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ಎಲ್ಲ ರಾಜ್ಯಗಳ ಬಳಿ ಬಾಲ್ಯ ವಿವಾಹಗಳ ‘ಲಕ್ಷಣ ಹಾಗೂ ವ್ಯಾಪ್ತಿ’ಯ ಸಂಗ್ರಹ ದತ್ತಾಂಶಗಳ ನವೀಕರಿಸಿದ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಪೀಠ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ನಿರ್ದೇಶಿಸಿದೆ.
2006ರ ಬಾಲ್ಯ ವಿವಾಹಗಳ ನಿಷೇಧ, ರೂಪಿಸಿದ ನೀತಿಗಳ ಅನುಷ್ಠಾನಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಪೀಠ ಕೇಂದ್ರಕ್ಕೆ ಸೂಚಿಸಿದೆ.
ಎಲ್ಲ ಸಮುದಾಯಗಳ ಮಹಿಳೆಯರ ವಿವಾಹದ ವಯಸ್ಸನ್ನು 21ಕ್ಕೆ ಏರಿಸುವ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದೇ ವಿಷಯ ಸ್ಥಾಯಿ ಸಮಿತಿಯ ಮುಂದೆ ಬಾಕಿ ಇದೆ ಎಂದು ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಪೀಠಕ್ಕೆ ಅರುಹಿದರು.
ಈ ಸುದ್ದಿ ಓದಿದ್ದೀರಾ? ಪಶ್ಚಿಮ ಬಂಗಾಳ | ಬುಡಕಟ್ಟು ಮಹಿಳೆಯರ ಮೇಲೆ ದೌರ್ಜನ್ಯ; ಟಿಎಂಸಿ ನಾಯಕ ಸೇರಿ ಇಬ್ಬರ ಬಂಧನ
2006ರ ಕಾಯ್ದೆಯಡಿ ರಾಜ್ಯಗಳ ಮಟ್ಟದಲ್ಲಿ ಅಧಿಕಾರಿಗಳಿರುತ್ತಾರೆ. ರಾಜ್ಯ ಸರ್ಕಾರಗಳೇ ಬಾಲ್ಯ ವಿವಾಹ ನಿಷೇಧಾಜ್ಞೆ ಜಾರಿ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ದಿವಾನ್ ಉಲ್ಲೇಖಿಸಿದರು.
ಕೆಲವು ರಾಜ್ಯ ಸರ್ಕಾರಗಳು ನಿಷೇಧಾಜ್ಞೆ ಜಾರಿ ಅಧಿಕಾರಿಗಳನ್ನು ನೇಮಿಸಿವೆ. ಜಿಲ್ಲೆಗಳಲ್ಲಿರುವ ವಲಯ ಅಭಿವೃದ್ಧಿ ಅಧಿಕಾರಿಗಳಿಗೆ ನಿಷೇಧಾಜ್ಞೆ ನೋಡಿಕೊಳ್ಳುವ ಹೆಚ್ಚುವರಿ ಕೆಲಸವನ್ನು ನೀಡಲಾಗಿದೆ ಎಂದು ಅರ್ಜಿ ಹೇಳಿದೆ.
ಮುಂದಿನ ವಿಚಾರಣೆಯನ್ನು ಜುಲೈಗೆ ಮುಂದೂಡಲಾಗಿದೆ.