ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಜಾರ್ಖಂಡ್ನ ಕಾರ್ಮಿಕನೋರ್ವನ ಕುಟುಂಬವೊಂದರ ದುಸ್ಥಿತಿಯನ್ನು ವರದಿ ಮಾಡಿದ್ದ ಇಬ್ಬರು ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜಾರ್ಖಂಡ್ನ ಸ್ಥಳೀಯ ಇಬ್ಬರು ಪತ್ರಕರ್ತರ ವಿರುದ್ಧ ಖುಂತಿ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ ಸ್ಮಿತಾ ನಾಗೇಸಿಯಾ ಮತ್ತು ವೃತ್ತ ಅಧಿಕಾರಿ ವಂದನಾ ಭಾರತಿ ಅವರ ದೂರಿನ ಆಧಾರದ ಮೇಲೆ ಕರ್ರಾ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಸೋನು ಅನ್ಸಾರಿ ಮತ್ತು ಯೂಟ್ಯೂಬರ್ ಗುಂಜನ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತೋರ್ಪಾ ಉಪವಿಭಾಗೀಯ ಪೊಲೀಸ್ ಅಧಿಕಾರಿ ಓಂಪ್ರಕಾಶ್ ತಿವಾರಿ ಮಾಹಿತಿ ನೀಡಿದ್ದಾರೆ.
‘ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಮತ್ತು ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಧಿಕಾರಿಗಳು ಕಾರ್ಮಿಕನ ಮನೆಗೆ ಭೇಟಿ ನೀಡಿದಾಗ, ಇಬ್ಬರು ವರದಿಗಾರರು ಆಗಲೇ ಅಲ್ಲಿದ್ದರು. ಅವರು ಸತ್ಯವನ್ನು ಪರಿಶೀಲಿಸದೆ ರೆಕಾರ್ಡಿಂಗ್ ಪ್ರಾರಂಭಿಸಿದರು. ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಕೇಳಿದಾಗ ಅವರು ನಮ್ಮ ಕೆಲಸಕ್ಕೆ ಅಡ್ಡಿಪಡಿಸಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು’ ಎಂದು ನ.30ರಂದು ದಾಖಲಿಸಿದ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಸಿಆರ್ಪಿಸಿಯ ನಿಬಂಧನೆಗಳ ಪ್ರಕಾರ ಇಬ್ಬರಿಗೂ ನೋಟಿಸ್ ನೀಡಲಾಗುವುದು ಮತ್ತು ಅವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿವಾರಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರು ಬದುಕಿದ್ದೇವೆಂದು ತಿಳಿಸಲು ಕಳಿಸಿದ್ದು ಈ ‘ಜಲಸಂದೇಶ’!
ಅನ್ಸಾರಿ ಮತ್ತು ಕುಮಾರ್ ತಮ್ಮ ವರದಿಗಳ ಮೂಲಕ ವಿಜಯ್ ಹೊರೋ ಕುಟುಂಬದ ದುಸ್ಥಿತಿಯನ್ನು ಎತ್ತಿ ತೋರಿಸಿದ್ದರು. ನ.12ರಂದು ಸುರಂಗ ಕುಸಿತದ ಎರಡು ವಾರಗಳ ನಂತರ ಆಡಳಿತವು ಬಡ ಕುಟುಂಬಕ್ಕೆ ಪಡಿತರವನ್ನು ಒದಗಿಸಿಲ್ಲ ಎಂದು ಅವರು ತಮ್ಮ ವರದಿಗಳಲ್ಲಿ ಆರೋಪಿಸಿದ್ದರು.

ಎಫ್ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪತ್ರಕರ್ತ ಗುಂಜನ್, ‘ವಿಜಯ್ ಕುಟುಂಬದ ಪರಿಸ್ಥಿತಿಯನ್ನು ಹೊರಜಗತ್ತಿಗೆ ತಿಳಿಸಲು ವರದಿ ಮಾಡಿದ್ದೇವೆ. ಸುರಂಗ ಕುಸಿತವಾದ ಎರಡು ವಾರಗಳ ನಂತರ ಬಡ ಕುಟುಂಬಕ್ಕೆ ಅಧಿಕಾರಿಗಳು ಪಡಿತರ ಒದಗಿಸಿದ್ದರು’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಚಾರ್ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಿಸುತ್ತಿದ್ದ ಸುರಂಗದ ಕೆಳಭಾಗಗಳು ನ.12ರಂದು ಕುಸಿದು 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಈ ಘಟನೆ ನಡೆದ 17 ದಿನಗಳ ನಂತರ ನ.28ರಂದು ಕಾರ್ಮಿಕರನ್ನು ರಕ್ಷಿಸಲಾಗಿತ್ತು.