- ಪರಸ್ಪರ ಪ್ರೀತಿಸಿದ್ದ ಜೋಡಿ, ತಾಳಿ ಕಟ್ಟುವ ಸಮಯದಲ್ಲಿ ಕೈಕೊಟ್ಟಿದ್ದ ವರ
- ಬೇರೆ ಮದುವೆಯಾಗಲು ಹೊರಟಿದ್ದ ವರನನ್ನು 20 ಕಿಮೀ ಓಡಿ ಹಿಡಿದ ವಧು
ಮಂಟಪದಿಂದ ಓಡಿ ಹೋಗುತ್ತಿದ್ದ ವರನನ್ನು ವಧು 20 ಕಿಮೀ ಬೆನ್ನಟ್ಟಿ ಹಿಡಿದಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾದರಿ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ನಿವಾಸಿಯಾದ ಈ ಯುವತಿ, ಕಳೆದ ಎರಡೂವರೆ ವರ್ಷದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಎರಡೂ ಮನೆಗಳಲ್ಲಿ ಗೊತ್ತಾಗಿ, ವಿರೋಧ ವ್ಯಕ್ತವಾಗಿತ್ತು. ಮದುವೆ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ವಿಷಯ ಹೋಗಿತ್ತು. ಯುವತಿ ಹೇಗೋ ಕಾಡಿಬೇಡಿ ಮನೆಯವರನ್ನು ಒಪ್ಪಿಸಿದಳು. ಮದುವೆಯು ಸ್ಥಳೀಯ ಭೂತೇಶ್ವರನಾಥ ದೇವಸ್ಥಾನದಲ್ಲಿ ನಿಶ್ಚಯವಾಗಿತ್ತು.
ಇನ್ನೇನು ಎಲ್ಲವೂ ಸರಿಯಾಗಿ ಮಹೂರ್ತದ ಸಮಯದಲ್ಲಿ ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ವರ ನಾಪತ್ತೆ. ಬಹಳ ಸಮಯದವರೆಗೂ ಕಾದರೂ ವರ ಪತ್ತೆಯಾಗಲಿಲ್ಲ. ಕಾದು ಕಾದು ಸುಸ್ತಾದ ವಧು, ಭಾವೀ ಪತಿಗೆ ಕರೆ ಮಾಡುತ್ತಾಳೆ.
ಈ ಸುದ್ದಿ ಓದಿದ್ದೀರಾ? ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಬಿಜೆಪಿಯ ಮಾಜಿ ಶಾಸಕ ಬಂಧನ
ಕರೆ ಸ್ವೀಕರಿಸಿದ ಗಂಡು, ತಾನು ತಾಯಿಯನ್ನು ಕರೆದುಕೊಂಡು ಬರಲು ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದ. ಆದರೆ ವರನ ಮಾತು ವಧುವಿಗೆ ಯಾಕೋ ಅನುಮಾನ ಕಾಡಲು ಶುರುವಾಯಿತು. ಮದುವೆಯಿಂದ ತಪ್ಪಿಸಿಕೊಂಡು ಓಡಿ ಹೋಗಿ ಇನ್ನೊಂದು ಮದುವೆಯಾಗುವುದಾಗಿ ಮಾಹಿತಿ ಸಿಕ್ಕಿದೆ. ಒಂದೂ ಕ್ಷಣವೂ ತಡ ಮಾಡದೇ ಆತನನ್ನು ಹಿಡಿಯಲು ಮುಂದಾಗುತ್ತಾಳೆ. ಸುಮಾರು 20 ಕಿಮೀ ಚೇಸ್ ಮಾಡಿದ್ದಾಳೆ.
ಬಿಮೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಳಿ ವರ ಬಸ್ ಹತ್ತುವಾಗ ಸಿಕ್ಕಿ ಬಿದ್ದಿದ್ದಾನೆ. ನಡು ರಸ್ತೆಯಲ್ಲಿ ಇಬ್ಬರ ನಡುವೆ ಸಾಕಷ್ಟು ನಾಟಕೀಯ ಬೆಳವಣಿಗೆ ನಡೆದಿದೆ. ಕೊನೆಗೂ ಹಠ ಬಿಡದ ವಧು ವರನನ್ನು ಮದುವೆ ಮಂಟಪಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾಳೆ. ಜಗಳವು ಸುಖಾಂತ್ಯವಾಗಿ ಇಬ್ಬರು ಮದುವೆ ಭೀಮೋರ ದೇವಸ್ಥಾನದಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಮದುವೆಯಾಗದೆ ಮೋಸ ಮಾಡಿ ಓಡಿ ಹೋಗಲು ಯತ್ನಿಸಿದ ವರನನ್ನು 20 ಕಿಮೀ ಚೇಸ್ ಮಾಡಿ ಕರೆತರುವ ಬದಲು ಪೊಲೀಸರಿಗೆ ಹಿಡಿದುಕೊಟ್ಟು ಶಿಕ್ಷೆ ಕೊಡಿಸಬಹುದಿತ್ತು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.