1947ರ ನವೆಂಬರ್ 29ರಂದು ವಿಶ್ವಸಂಸ್ಥೆಯು ಪ್ಯಾಲೆಸ್ತೀನ್ನ ವಿಭಜನೆಯ ಗೊತ್ತುವಳಿಯನ್ನು ಅಂಗೀಕರಿಸಿತು. ಸಹಜವಾಗಿಯೇ ಪ್ಯಾಲೆಸ್ತೀನರು ಮತ್ತು ಅರಬ್ ದೇಶಗಳು ಇದನ್ನು ಪ್ರಬಲವಾಗಿ ವಿರೋಧಿಸಿದವು. ಒಟ್ಟು 13 ರಾಷ್ಟ್ರಗಳು ಈ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದವು. ಅವುಗಳಲ್ಲಿ ಭಾರತವೂ ಒಂದು.
1948ರ ಅರಬ್ ಇಸ್ರೇಲ್ ಯುದ್ಧದ ಪರಿಣಾಮ ಪ್ಯಾಲೆಸ್ತೀನ್ನ ಶೇಕಡ 70 ರಷ್ಟು ಭೂಭಾಗವು ಇಸ್ರೇಲ್ ಕೈವಶವಾಯಿತು. ಪ್ಯಾಲೆಸ್ತೀನರು ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪ್ರದೇಶಗಳಲ್ಲಿ ನೆಲೆ ನಿಂತರು. ಇನ್ನುಳಿದವರು ನಿರಾಶ್ರಿತರಾಗಿ ಬೇರೆ ದೇಶಕ್ಕೆ ತೆರಳಿದರು. ಈ ಯುದ್ಧದಲ್ಲಿ ಅರಬ್ಬರು ಸೋಲಲು ಅನೇಕ ಕಾರಣಗಳಿದ್ದವು, ಅವುಗಳು ವ್ಯವಸಾಯ ಆಧಾರಿತ ಆರ್ಥಿಕ ವ್ಯವಸ್ಥೆಗಳು ಆಗಿದ್ದವು. ಹಾಗಾಗಿ ಯುದ್ಧಕ್ಕೆ ಬೇಕಾದ ಆಧುನಿಕ ಕೈಗಾರಿಕೆಗಳು ಅವುಗಳ ಬಳಿ ಇರಲಿಲ್ಲ. ಅಲ್ಲದೇ ನಾಯಕತ್ವ ಮತ್ತು ಒಗ್ಗಟ್ಟಿನ ಸಮಸ್ಯೆಯಿತ್ತು. ವಸಾಹತುಶಾಹಿ ದೇಶಗಳಾದ ಬ್ರಿಟನ್ ಮತ್ತು ಫ್ರಾನ್ಸ್ಗಳು ಇಸ್ರೇಲಿಗೆ ಆಧುನಿಕ ಮಿಲಿಟರಿ ಸಹಾಯ ನೀಡಿದ್ದರಿಂದ ಅದು ಸುಲಭವಾಗಿ ಜಯಗಳಿಸಿತು.
ಈಜಿಪ್ಟ್ ಪಡೆಗಳು ಗಾಜಾ ಪ್ರಾಂತವನ್ನು ಮತ್ತು ಜೋರ್ಡಾನ್ ಪಡೆಗಳು ಪೂರ್ವ ಜೆರುಸಲೆಮ್ ಒಳಗೊಂಡ ಪಶ್ಚೀಮ ತೀರವನ್ನು (ವೆಸ್ಟ್ ಬ್ಯಾಂಕ್) ವಶಪಡಿಸಿಕೊಂಡಿದ್ದರಿಂದ ಅವುಗಳು ಪ್ಯಾಲೆಸ್ತೀನ್ರ ಬಳಿಯೇ ಉಳಿದವು. ಇದರು ತರುವಾಯು 1949ರಲ್ಲಿ, ಇಸ್ರೇಲ್ ಮತ್ತು ಅರಬ್ ಪಡೆಗಳ ನಡುವೆ ತಾತ್ಕಾಲಿಕ ಶಾಂತಿ ಒಪ್ಪಂದವಾಯಿತು. ಆದರೆ ಪ್ಯಾಲೆಸ್ತೀನ್ರ ಬಹುತೇಕ ಭೂಭಾಗ ಇಸ್ರೇಲ್ ಕೈವಶವಾಯಿತು.
ಗಾಜಾ ಮತ್ತು ಪಶ್ಚಿಮ ತೀರ (ವೆಸ್ಟ್ ಬ್ಯಾಂಕ್) ಹೊರತುಪಡಿಸಿ ಉಳಿದ ಭೂಪ್ರದೇಶದಲ್ಲಿದ್ದ ಲಕ್ಷಾಂತರ ಪ್ಯಾಲೆಸ್ತೀನಿಯನ್ನರು ನೆರೆಯ ಅರಬ್ ದೇಶಗಳಲ್ಲಿ ತೆರಳಿ ಅಲ್ಲೆ ನಿರಾಶ್ರಿತರಾಗಿ ವಾಸ ಮಾಡಲಾರಂಭಿಸಿದರು. ತದನಂತರದ ವರ್ಷಗಳಲ್ಲಿ ಅರಬ್ ದೇಶಗಳು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳಿಗೆ ಒಳಗಾಗುತ್ತಿದ್ದಂತೆ ಅರಬ್ ದೇಶದ ರಾಜಕೀಯದಲ್ಲಿ ಪ್ರಮುಖ ಆದ್ಯತೆಯಾಗಿದ್ದ ಪ್ಯಾಲೆಸ್ತೀನ್ ಪ್ರಶ್ನೆ ಕೊನೆಯ ಆದ್ಯತೆಯಾಯಿತು.
ತದನಂತರ ರಾಜಕೀಯದಲ್ಲಿ ಏಕಪಕ್ಷಿಯ ಮತ್ತು ಸರ್ವಾಧಿಕಾರಿ ಧೋರಣೆಗಳು ಚಿಗುರುತ್ತಿದ್ದಂತೆ ಪ್ಯಾಲೆಸ್ತೀನ್ ನಿರಾಶ್ರಿತರ ಮೇಲೆ ಅದು ಪರಿಣಾಮ ಬೀರಿತು. ಇದರಿಂದ ನಿರಾಶ್ರಿತ ಪ್ಯಾಲೆಸ್ತೀನರ ರಾಜಕೀಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು. ಈ ದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಪ್ಯಾಲೆಸ್ತೀನ್ ನಿರಾಶ್ರಿತರು ಹರಸಾಹಸ ಪಡಬೇಕಾಯಿತು. ಬೇರೆ ದೇಶಗಳಿಗೆ ತೆರಳಲು ಕೂಡ ನಿರ್ಬಂಧಗಳನ್ನು ಹೇರಿದ್ದರಿಂದ ನಿರಾಶ್ರಿತರ ಸಮಸ್ಯೆ ಬಿಗಡಾಯಿಸಿತ್ತು. ಜೊರ್ಡಾನ್ನಲ್ಲಿ ಮಾತ್ರ ಪ್ಯಾಲೆಸ್ತೀನರಿಗೆ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಸಕಾರಾತ್ಮಕ ಬೆಳವಣಿಗೆಯೇನೆಂದರೆ, ಅರಬ್ ದೇಶಗಳಲ್ಲಿ ನಾಗರಿಕತ್ವ ಪಡೆಯಲು ಕೆಲ ಪ್ಯಾಲೆಸ್ತೀನಿಯರಿಗೆ ಸಾಧ್ಯವಾಯಿತು.
ಆದರೆ, ಅರಬ್ಬರ ನಡುವೆ ಉಂಟಾಗಿದ್ದ ರಾಜಕೀಯ ಭಿನ್ನಾಭಿಪ್ರಾಯಗಳು ಪ್ಯಾಲೆಸ್ತೀನ್ ವಿಷಯದಲ್ಲಿ ಒಮ್ಮತಕ್ಕೆ ಬರಲು ಅಡ್ಡಿಯಾದವು. ಅರಬ್ ದೇಶಗಳು ಪ್ಯಾಲೆಸ್ತೀನ್ ರಾಷ್ಟ್ರ ಪುನರ್ಸ್ಥಾಪಿಸಲು ಯುದ್ಧದ ಮಾರ್ಗಗಳಿಂದ ದೂರ ಉಳಿಯಲು ನಿರ್ಧರಿಸಿದರು.
ವಿಶ್ವಸಂಸ್ಥೆಯ ಪ್ರಮಾದ
1947ರಲ್ಲಿ ಪ್ಯಾಲೆಸ್ತೀನ್ನಲ್ಲಿ ಬ್ರಿಟಿಷ್ ಮ್ಯಾಂಡೆಟ್ ಕೊನೆಯಾಗುತ್ತಿದ್ದಂತೆ ಜಿಯೋನಿಸ್ಟ್ ಮತ್ತು ಪ್ಯಾಲೆಸ್ತೀನ್ರ ನಡುವಿನ ಈ ಭೂ ವಿವಾದವನ್ನು ಬಗೆಹರಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಿತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯುರೋಪಿನಲ್ಲಿ ಹಿಟ್ಲರ್ ನಡೆಸಿದ ಯಹೂದಿಗಳ ನರಮೇಧದಿಂದ ಇಡಿ ವಿಶ್ವವೇ ನಲುಗಿ ಹೋಗಿತ್ತು. ಯಹೂದಿಗಳ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ವಿಶ್ವದೆಲ್ಲೆಡೆ ಚರ್ಚೆಗಳಾದವು. ಅವರ ಹಕ್ಕುಗಳಿಗಾಗಿ ಒತ್ತಾಯಿಸಿ ಅಮೆರಿಕ ಮತ್ತು ಯುರೋಪಿನಲ್ಲಿ ಚಳವಳಿಗಳು ನಡೆದವು. ಅವರ ಮೇಲೆ ಅಪಾರ ಅನುಕಂಪ ಮೂಡಿತು. ಈ ಸಂದರ್ಭವನ್ನು ಜಿಯೋನಿಸ್ಟರು ಬಳಸಿಕೊಂಡರು. ಪ್ಯಾಲೆಸ್ತೀನ್ ನೆಲದಲ್ಲಿ ಇಸ್ರೇಲ್ ಸ್ಥಾಪಿಸಲು ಎಲ್ಲಾ ದೇಶಗಳಿಗೆ ಒತ್ತಾಯಿಸಿದರು. ವಿಶ್ವಸಂಸ್ಥೆಯ ಕಮಿಷನ್ ಈ ಭಾವನೆಗಳ ಆಧಾರದ ಮೇಲೆಯೇ ಜಿಯೋನಿಸ್ಟ್ ಮತ್ತು ಸ್ಥಳೀಯ ಪ್ಯಾಲೆಸ್ತೀನರ ನಡುವೆ ಪ್ಯಾಲೆಸ್ತೀನ್ ಭೂಭಾಗವನ್ನು ವಿಭಾಗಿಸುವ ಅಂಗೀಕಾರನ್ನು ಪ್ರಸ್ತಾಪಿಸಿತು. ಈ ಕಾರಣ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಇಸ್ರೇಲ್ ದೇಶದ ಸ್ಥಾಪನೆಯನ್ನು ಅಮೆರಿಕ, ಅಂದಿನ ಸೋವಿಯತ್ ಯೂನಿಯನ್ ಈ ಅನುಕಂಪದ ಆಧಾರದ ಮೇಲೆಯೆ ಈ ನಿರ್ಣಯವನ್ನು ಅನುಮೋದಿಸಿದವು.
1947ರ ನವೆಂಬರ್ 29ರಂದು ವಿಶ್ವಸಂಸ್ಥೆಯು ಪ್ಯಾಲೆಸ್ತೀನಿನ ವಿಭಜನೆಯ ಗೊತ್ತುವಳಿಯನ್ನು ಅಂಗೀಕರಿಸಿತು. ಸಹಜವಾಗಿಯೇ ಪ್ಯಾಲೆಸ್ತೀನರು ಮತ್ತು ಅರಬ್ ದೇಶಗಳು ಇದನ್ನು ಪ್ರಬಲವಾಗಿ ವಿರೋಧಿಸಿದವು. ಒಟ್ಟು 13 ರಾಷ್ಟ್ರಗಳು ಈ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದವು. ಅರಬ್ ದೇಶಗಳ ಜೊತೆ ಭಾರತ, ಪಾಕಿಸ್ತಾನ, ಗ್ರೀಸ್ ಮತ್ತು ಕ್ಯೂಬಾ ಕೂಡ ಈ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದವರಲ್ಲಿ ಪ್ರಮುಖವಾದವು.
ಈ ಗೊತ್ತುವಳಿಯಲ್ಲಿ ಇದ್ದ ಸಮಸ್ಯೆಯೇನೆಂದರೆ, ಇಸ್ರೇಲ್ ದೇಶದ ಹಾಗೇ ಪ್ಯಾಲೆಸ್ತೀನ್ ಸ್ವಾಯತ್ತತೆಯನ್ನು ಈ ಗೊತ್ತುವಳಿ ಎತ್ತಿ ಹಿಡಿಯಲಿಲ್ಲ. ಅಲ್ಲದೇ ಭೂಭಾಗಗಳನ್ನು ಧರ್ಮಗಳ ಆಧಾರದ ಮೇಲೆ ವಿಭಜಿಸಿತು. ಹೀಗಾಗಿ ಶೇಕಡ 56ರಷ್ಟು ಭೂಭಾಗವನ್ನು ಅಲ್ಪಸಂಖ್ಯಾತರಾಗಿದ್ದ ಯಹೂದಿಗಳಿಗೆ ನೀಡಿ, ಉಳಿದ ಭೂಭಾಗವನ್ನು ಪ್ಯಾಲೆಸ್ತೀನರಿಗೆ ಎಂದು ಘೋಷಿಸಲಾಯಿತು. ಐತಿಹಾಸಿಕ ಸುಳ್ಳುಗಳು ಮತ್ತು ಅವೈಜ್ಞಾನಿಕತೆಯಿಂದ ಕೂಡಿದ ಈ ಶಿಫಾರಸ್ಸುಗಳು ಜಿಯೋನಿಸ್ಟರ ಲಾಬಿ ಮತ್ತು ವಸಾಹತುಶಾಹಿ ದೇಶಗಳ ಹುನ್ನಾರದಿಂದ ಅಂಗೀಕಾರವಾದವು. ಇದೇ ಮುಂದೆ 1948ರಲ್ಲಿ, ಇಸ್ರೇಲ್ ಸ್ಥಾಪನೆಗೆ ಮತ್ತು ಅರಬ್ ಇಸ್ರೇಲ್ ಯುದ್ಧಕ್ಕೆ ಪ್ರಮುಖ ಕಾರಣವಾಯಿತು.
ಅರಬ್ ಇಸ್ರೇಲ್ ಯುದ್ಧದ ನಂತರ ಇಸ್ರೇಲ್ ದೇಶ ವಿಶ್ವಸಂಸ್ಥೆಯ ಗೊತ್ತುವಳಿಯನ್ನು ಮೀರಿ ಪ್ಯಾಲೆಸ್ತೀನ್ ಭೂಭಾಗಗಳನ್ನು ವಶಪಡಿಸಿಕೊಂಡಿತು. ಸ್ಥಳೀಯ ಪ್ಯಾಲೆಸ್ತೀನಿಯರನ್ನು ಅವರ ಭೂಭಾಗಗಳಿಂದ ಹೊರದಬ್ಬಿತು. ಆಗ ವಿಶ್ವಸಂಸ್ಥೆ, ವಶಪಡಿಸಿಕೊಂಡ ಭೂಭಾಗಗಳನ್ನು ಮರಳಿಸಲು ಇಸ್ರೇಲ್ಗೆ ಸೂಚಿಸಿತು. ಆದರೆ, ಅದು ಫಲಕಾರಿಯಾಗಲಿಲ್ಲ. ಪ್ಯಾಲೆಸ್ತೀನಿಯನ್ನರಿಗೆ ಅವರ ನೆಲೆಗಳನ್ನು ಮರಳಿಸಿ ಒದಗಿಸುವ ವಿಶ್ವಸಂಸ್ಥೆಯ ಎಲ್ಲಾ ಪ್ರಯತ್ನಗಳು ವಿಫಲವಾದವು. ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲೆಸ್ತೀನಿಯರು ನಿರಾಶ್ರಿತರಾದರು.
(ಮುಂದುವರಿಯುವುದು)

ವಸಂತ ಕಲಾಲ್
ದೆಹಲಿಯ JNU ನಲ್ಲಿ ಸಂಶೋಧನಾ ವಿದ್ಯಾರ್ಥಿ