ಹಿಂಸೆ ದ್ವೇಷದ ದಾವಾನಲದಲ್ಲಿ ‘ಬೂದಿ’ಯಾಗುತ್ತಿರುವ ಮಣಿಪುರದಿಂದ ಭೀಭತ್ಸ ಪೈಶಾಚಿಕ ಕೃತ್ಯಗಳು ಅಲೆ ಅಲೆಯಾಗಿ ಮೇಲೆ ತೇಲತೊಡಗಿವೆ. ಹತ್ಯೆಗಳು, ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು, ಬೆತ್ತಲೆ ಮೆರವಣಿಗೆಗಳು ನಾಗರಿಕ ಸಮಾಜವನ್ನು ನತಮಸ್ತಕಗೊಳಿಸಿವೆ.
ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಕಡೆಗೂ ರಾಜೀನಾಮೆ ನೀಡಿದ ನಂತರ ಬಿಜೆಪಿ ಹೊಸ ಮುಖ್ಯಮಂತ್ರಿಗಾಗಿ ಹುಡುಕುತ್ತಲಿತ್ತು. ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಹೊಂದಿದೆ. ಆದರೂ ಸರ್ಕಾರ ಉರುಳುವ ಹೆದರಿಕೆಯ ಕಾರಣ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಡಬಲ್ ಎಂಜಿನ ಸರ್ಕಾರ ಮತ್ತು ಮೋದಿ ಬಿಗಿ ನೇತೃತ್ವದ ನಾಯಕ ಎಂಬ ವರ್ಚಸ್ಸು ಮೊದಲ ಬಾರಿಗೆ ಮಣ್ಣುಪಾಲಾಗಿದೆ.
ರಾಷ್ಟ್ರಪತಿ ಆಡಳಿತ ಹೇರುವ ಅನುಚ್ಛೇದ 356ರ ದುರುಪಯೋಗ ಆಗಿದೆ. ಕಾಂಗ್ರೆಸ್ ವಿರುದ್ಧ ಮಾಡುತ್ತಿದ್ದ ಈ ಆರೋಪ ಇದೀಗ ಮೋದಿ ವಿರುದ್ಧವೇ ತಿರುಗಿದೆ. ದೇಶಹಿತ ಸರ್ವಪ್ರಥಮ ಎನ್ನುವ ಮೋದಿಯವರ ನಿಜ ಬಣ್ಣ ಬಯಲಾಗಿದೆ. ಎರಡು ವರ್ಷಗಳ ಕಾಲ ಮಣಿಪುರವನ್ನು ಜನಾಂಗೀಯ ದ್ವೇಷದಲ್ಲಿ ಹೊತ್ತಿ ಉರಿಸಿದ ಬೀರೇನ್ ಸಿಂಗ್ ಇದೇ ಒಂಬತ್ತರಂದು ಅಧಿಕಾರದಿಂದ ಕೆಳಗಿಳಿದರು. ಅವರ ರಾಜೀನಾಮೆ ಪಡೆಯಲಾಯಿತು. ತರುವಾಯ ಎಲ್ಲರಿಗೂ ಸಮ್ಮತವೆನಿಸುವ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆರಿಸುವ ಕಸರತ್ತನ್ನು ಬಿಜೆಪಿ ಆರಂಭಿಸಿತ್ತು.
ಆದರೆ ಹೊಸ ಮುಖ್ಯಮಂತ್ರಿಯ ಕುರಿತು ಒಮ್ಮತ ರೂಪಿಸುವಲ್ಲಿ ಬಿಜೆಪಿ ವರಿಷ್ಠರು ವಿಫಲವಾದರು. ಮೈತೇಯಿಗಳು ಕುಕಿ ನೇತೃತ್ವವನ್ನು, ಕುಕಿಗಳು ಮೈತೇಯಿ ನೇತೃತ್ವವನ್ನು ಒಪ್ಪದೆ ಹೋದರು. ಎರಡೂ ಬಣಗಳ ವಿಶ್ವಾಸ ಗಳಿಸಬಲ್ಲ ಅಭ್ಯರ್ಥಿ ದೊರೆಯಲಿಲ್ಲ. ರಾಷ್ಟ್ರಪತಿ ಶಾಸನ ಅನಿವಾರ್ಯ ಆಯಿತು.
ಈ ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಸಿಡಿದು (2003ರ ಮೇ) ಹೆಚ್ಚು ಕಡಿಮೆ ಎರಡು ವರ್ಷಗಳಾಗುತ್ತಿದೆ. 250ಕ್ಕೂ ಹೆಚ್ಚು ಮಂದಿ ಈ ಘರ್ಷಣೆಯಲ್ಲಿ ಸತ್ತಿದ್ದಾರೆ. ವ್ಯಾಪಕ ಹಿಂಸಾಚಾರದ ಕಾರಣ ಮೈತೇಯಿ ಮತ್ತು ಕುಕಿ ಜನಾಂಗಗಳ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.
ಮಯನ್ಮಾರ್ ಎಂಬ ಭಾರತದ ನೆರೆಹೊರೆಯ ದೇಶದ ಸರಹದ್ದಿನಲ್ಲಿರುವ ಮಣಿಪುರಕ್ಕೆ ಜನಾಂಗೀಯ ಹಿಂಸೆ ಹೊಸತೇನೂ ಅಲ್ಲ. ಮೂವತ್ತಮೂರು ಬುಡಕಟ್ಟುಗಳಿರುವ ಮಣಿಪುರದ್ದು ಬಲು ದಟ್ಟ ವೈವಿಧ್ಯ. ಅಷ್ಟೇ ಒಡೆದು ಹಂಚಿ ಹೋಗಿರುವ ಜನಬಾಹುಳ್ಯ. ನಿಜವಾದ ಮಣ್ಣಿನ ಮಕ್ಕಳು ನಾವೇ ಎಂಬ ಸೆಣೆಸಾಟದಲ್ಲಿ ಮೈತೇಯಿ-ಕುಕಿ-ನಾಗಾ ಸಮುದಾಯಗಳು ಪರಸ್ಪರರ ವಿರುದ್ಧ ತುಪಾಕಿಗಳನ್ನು ಎತ್ತಿಕೊಂಡು ಬಹುಕಾಲವಾಯಿತು.
ಮೈತೇಯಿಗಳು ವೈಷ್ಣವ ಸಂಪ್ರದಾಯದ ಹಿಂದೂಗಳು. ಕೇಂದ್ರೀಯ ಕಣಿವೆ ಪ್ರದೇಶ ಅವರ ವಸತಿಸೀಮೆ. ಮಣಿಪುರದ ಜನಸಂಖ್ಯೆಯಲ್ಲಿ ಮೈತೇಯಿಗಳ ಪ್ರಮಾಣ ಶೇ.53ರಷ್ಟು. ಈ ಸಮುದಾಯದಲ್ಲಿ ಹಿಂದೂ ಅಸ್ಮಿತೆಯನ್ನು ಬಡಿದೆಬ್ಬಿಸುವ ಕೆಲಸ ಬಹುಕಾಲದಿಂದ ನಡೆದಿದೆ. ಈ ದುಷ್ಕೃತ್ಯವು ಮಣಿಪುರವನ್ನು ಬಲಿ ತೆಗೆದುಕೊಂಡಿದೆ.

ಹಿಂಸೆ ದ್ವೇಷದ ದಾವಾನಲದಲ್ಲಿ ‘ಬೂದಿ’ಯಾಗುತ್ತಿರುವ ಮಣಿಪುರದಿಂದ ಭೀಭತ್ಸ ಪೈಶಾಚಿಕ ಕೃತ್ಯಗಳು ಅಲೆ ಅಲೆಯಾಗಿ ಮೇಲೆ ತೇಲತೊಡಗಿವೆ. ಹತ್ಯೆಗಳು, ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು, ಬೆತ್ತಲೆ ಮೆರವಣಿಗೆಗಳು ನಾಗರಿಕ ಸಮಾಜವನ್ನು ನತಮಸ್ತಕಗೊಳಿಸಿವೆ.
ಮಣಿಪುರ ವಿಧಾನಸಭೆಯ ಸದಸ್ಯ ಬಲ 60. ಸರಳಬಹುಮತಕ್ಕೆ 31 ಶಾಸಕರು ಬೇಕು. ಬಿಜೆಪಿಯ ಬಳಿ 37 ಶಾಸಕರಿದ್ದಾರೆ. ಮಿತ್ರಪಕ್ಷಗಳ 11 ಮಂದಿ ಸದಸ್ಯರೂ ಇದ್ದಾರೆ. ಇಷ್ಟೆಲ್ಲ ಬೆಂಬಲದ ಬೆಟ್ಟವೇ ತನ್ನ ಬೆನ್ನಿಗಿದೆ, ಇನ್ನೂ ಮೂರು ವರ್ಷಗಳಷ್ಟು ಅಧಿಕಾರಾವಧಿ ಬಾಕಿ ಇದೆ. ಆದರೂ ರಾಷ್ಟ್ರಪತಿ ಆಡಳಿತ ಜಾರಿಯಾದದ್ದು ದೊಡ್ಡ ವಿಡಂಬನೆಯೇ ಸರಿ.
ಕಳೆದ ಹತ್ತು ವರ್ಷಗಳಿಗೂ ಹೆಚ್ಚಿನ ಮೋದಿ ಆಡಳಿತದಲ್ಲಿ ಬಿಜೆಪಿಗೆ ಬಹುಮತವಿದ್ದ ರಾಜ್ಯದಲ್ಲೂ ರಾಷ್ಟ್ರಪತಿ ಆಡಳಿತ ಹೇರಿರುವ ಮೊದಲ ನಿದರ್ಶನವಿದು. ಮಣಿಪುರದಲ್ಲಿ ಕಾನೂನು-ಸುವ್ಯವಸ್ಥೆ ಮುರಿದು ಬಿದ್ದಿದೆ ಎಂದು ಸುಪ್ರೀಮ್ ಕೋರ್ಟು ಟೀಕೆ ಟಿಪ್ಪಣಿ ಮಾಡಿದಾಗಲೇ ಮುಖ್ಯಮಂತ್ರಿಯನ್ನು ಬದಲಿಸಬೇಕಿತ್ತು. ಆದರೆ ದೇಶದಲ್ಲಿ ಮೂಡಿದ್ದ ಸಾರ್ವಜನಿಕ ಒತ್ತಡಕ್ಕೆ ಯಾಕೆ ಬಗ್ಗಬೇಕು ಎಂಬ ಹಠಮಾರಿತನ ಮತ್ತು ದುರಹಂಕಾರ ದೇಶ ಆಳುವವರನ್ನು ಆವರಿಸಿಕೊಂಡಿತ್ತು.
ಮಣಿಪುರ ವಿಧಾನಸಭೆಯ ಅಧಿವೇಶನ ಕಳೆದ ಬಾರಿ ನಡೆದದ್ದು 2024ರ ಆಗಸ್ಟ್ ನಲ್ಲಿ. ಅಂದಿನಿಂದ ಆರು ತಿಂಗಳ ಒಳಗಾಗಿ ಮತ್ತೊಂದು ಅಧಿವೇಶನ ಕರೆಯಲೇಬೇಕಿತ್ತು. ಸಂವಿಧಾನದ 174 (1) ಅನುಚ್ಛೇದದ ಪ್ರಕಾರ ಎರಡು ವಿಧಾನಸಭೆ ಅಧಿವೇಶನಗಳ ನಡುವಣ ಅಂತರ ಆರು ತಿಂಗಳಿಗಿಂತ ಹೆಚ್ಚು ಕಾಲ ಲಂಬಿಸುವಂತಿಲ್ಲ. 2025ರ ಫೆಬ್ರವರಿ 10ರಿಂದ ಅಧಿವೇಶನ ಆರಂಭ ಆಗಬೇಕಿತ್ತು. ಆದರೆ ಆರಂಭ ಆಗುವ ಮುನ್ನವೇ ಅದನ್ನು ಅಮಾನ್ಯವೆಂದು ಘೋಷಿಸಿದ್ದರು ರಾಜ್ಯಪಾಲ ಭಲ್ಲಾ. ಈ ಅಧಿವೇಶನದಲ್ಲಿ ಬೀರೇನ್ ಸಿಂಗ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ತಯಾರಿಗಳು ಜರುಗಿದ್ದವು. ಬೀರೇನ್ ಸಿಂಗ್ ವಿರುದ್ಧ ಪಕ್ಷದೊಳಗೇ ಅಸಮಾಧಾನ ಕುದಿಯುತ್ತಿತ್ತು. 2024ರ ಅಕ್ಟೋಬರ್ ನಲ್ಲಿಯೇ 19 ಮಂದಿ ಬಿಜೆಪಿ ಶಾಸಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಗದ ಬರೆದು ಬೀರೇನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸುವಂತೆ ಒತ್ತಾಯ ಮಾಡಿದ್ದರು.
ಇದನ್ನೂ ಓದಿ ಈ ದಿನ ಸಂಪಾದಕೀಯ | ಹೆಣ್ಣಿನ ಮೇಲೆ ಅಮಾನುಷ ಲೈಂಗಿಕ ಕ್ರೌರ್ಯಕ್ಕೆ ವಿವಾಹವು ಪರವಾನಗಿಯೇ?
ವಿಧಾನಸಭಾ ಅಧಿವೇಶನ ನಡೆಯಗೊಟ್ಟಿದ್ದಲ್ಲಿ ಪ್ರತಿಪಕ್ಷ ಅವಿಶ್ವಾಸ ನಿರ್ಣಯ ಮಂಡಿಸುವುದು ಖಚಿತವಿತ್ತು. ಬಿಜೆಪಿಯ ಹಲವು ಮಂದಿ ಶಾಸಕರು ಪಾರ್ಟಿಯ ‘ವ್ಹಿಪ್’ ಉಲ್ಲಂಘಿಸಿ ಮತದಾನ ಮಾಡುವ ಸೂಚನೆಯನ್ನು ಪಕ್ಷದ ವರಿಷ್ಠರು ಮುಂದಾಗಿಯೇ ಗ್ರಹಿಸಿದ್ದರು. ತನ್ನ ಸರ್ಕಾರ ಉರುಳುವ ಇಂತಹ ಅವಹೇಳನದಿಂದ ಮುಜುಗರದಿಂದ ಪಾರಾಗಬೇಕಿತ್ತು.
ಮತ್ತೊಂದು ಕಾರಣವೂ ಇತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ರಂಪ್ ಭೇಟಿಗೆಂದು ಅಮೆರಿಕೆಗೆ ತೆರಳಬೇಕಿತ್ತು. ಅಲ್ಲಿ ಮಣಿಪುರ ಹೊತ್ತಿ ಉರಿದಿರುವ ಕುರಿತು, ಕ್ರೈಸ್ತ ಮತೀಯರ ಮೇಲಿನ ಆಕ್ರಮಣಗಳು ಹಲ್ಲೆಗಳು ಅತ್ಯಾಚಾರಗಳ ಕುರಿತು ಪ್ರಶ್ನೆಗಳು ಏಳುವ ನಿರೀಕ್ಷೆಯಿತ್ತು. ಈ ತರಾತುರಿಯೂ ಬೀರೇನ್ ಸಿಂಗ್ ನಿರ್ಗಮನಕ್ಕೆ ಕಾರಣವಾಗಿತ್ತು. ರಾಷ್ಟ್ರಪತಿ ಆಡಳಿತ ಹೇರಿಕೆಯ ನಂತರವೂ ಮಣಿಪುರದ ಹಾಲಿ ಹಣೆಬರೆಹ ಬದಲಾಗುವುದು ಕಠಿಣ. ಯಾಕೆಂದರೆ ಈಗಾಗಲೆ ಮಣಿಪುರ ಸರ್ಕಾರವನ್ನು ಕೇಂದ್ರವೇ ನಡೆಸುತ್ತಲಿತ್ತು.

ಡಿ ಉಮಾಪತಿ
ಹಿರಿಯ ಪತ್ರಕರ್ತರು