ಬಸವಣ್ಣನವರು ಆಹಾರವನ್ನು ವ್ಯರ್ಥ ಮಾಡುವ ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಿದ್ದರು. ಪಂಚಮಿಯ ಹಬ್ಬವು ಕೇವಲ ಒಡಹುಟ್ಟಿದವರ ಹಬ್ಬವಾಗಿತ್ತು. ಜಾನಪದರು ಈ ಕುರಿತಾಗಿ ತಮ್ಮ ಹಾಡುಗಳಲ್ಲಿಯೂ ತಿಳಿಸಿದ್ದಾರೆ.
ಹಸಿವು ಮತ್ತು ಆಹಾರದ ಕೊರತೆಯಿಂದ ಬಳಲುತ್ತಿರುವ ಸಮುದಾಯ ಒಂದೆಡೆಯಾದರೆ ಮೌಢ್ಯತೆಯಿಂದ ಆಹಾರ ಉತ್ಪನ್ನಗಳನ್ನು ವ್ಯರ್ಥ ಮಾಡುತ್ತಿರುವ ಸಮುದಾಯ ಮತ್ತೊಂದು ಕಡೆ ಮಕ್ಕಳಲ್ಲಿನ ಅಪೌಷ್ಟಿಕತೆಯ ಕುರಿತು ಯುನಿಸೆಫ್ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 2024ರ ವರದಿಯ ಪ್ರಕಾರ ಜಗತ್ತಿನಲ್ಲಿ ಐದು ವರ್ಷದ ಒಳಗಿನ 18.1 ಕೋಟಿ ಮಕ್ಕಳು ತೀವ್ರವಾದ ಆಹಾರ ಕೊರತೆಯನ್ನು ಎದುರಿಸುತ್ತಿದ್ದು. ಭಾರತದಲ್ಲಿ ಶೇಕಡಾ 40ರಷ್ಟು ಮಕ್ಕಳಿಗೆ ಆಹಾರದ ಕೊರತೆಯಿದೆ. ಚೀನಾ, ಅಫ್ಘಾನಿಸ್ತಾನ, ಪಾಕಿಸ್ತಾನ ಸೇರಿದಂತೆ ಭಾರತವು ಸೇರಿದಂತೆ 20 ದೇಶಗಳ ಪಾಲು ಇದರಲ್ಲಿ ಶೇಕಡಾ 65 ರಷ್ಟಿದೆ ಎಂಬುದು ಭಾರತೀಯರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.
ಭಾರತದ ಮನೆಗಳಲ್ಲಿ 68.7ಮಿಲಿಯನ್ ಟನ್ ಆಹಾರ ವಾರ್ಷಿಕವಾಗಿ ವ್ಯರ್ಥವಾಗುತ್ತಿದೆ ಎಂದು 2023ರಲ್ಲಿ ಯುನೈಟೆಡ್ ಎನ್ವಿರಾನ್ಮೆಂಟ್ ಪ್ರೋಗ್ರಾಂ ಎಂಬ ಸಂಸ್ಥೆಯ ವರದಿಯು ದಿಗ್ಭ್ರಮೆ ಗೊಳಿಸುತ್ತದೆ. ಇದರ ಮಧ್ಯೆ ಭಾರತೀಯರು ಆಹಾರ ಉತ್ಪನ್ನಗಳನ್ನು ಹಾಗೂ ಆಹಾರವನ್ನು ಮೌಢ್ಯತೆಯ ಕಾರಣದಿಂದ ವ್ಯರ್ಥ ಮಾಡುತ್ತಿದ್ದಾರೆ. ಉದಾಹರಣೆಗೆ ನಾಗರ ಪಂಚಮಿಯ ಹೆಸರಿನಲ್ಲಿ ಲಕ್ಷಾಂತರ ಲೀಟಲ್ ಹಾಲು ಮಣ್ಣು ಪಾಲಾಗುತ್ತಿದೆ. ವೈಜ್ಞಾನಿಕವಾಗಿ ಹಾವುಗಳು ಹುಳುಗಳನ್ನು ತಿಂದು ಬದುಕುತ್ತದೆ. ಆದರೆ ಮೂಢನಂಬಿಕೆಯ ಪರಿಣಾಮವಾಗಿ ಜನರು ಕಲ್ಲು ನಾಗರಕ್ಕೆ ಹಾಲು ಸುರಿದು ವ್ಯರ್ಥ ಮಾಡುತ್ತಾರೆ.
12ನೇ ಶತಮಾನದಲ್ಲಿ ಬಸವಣ್ಣನವರು ಈ ಕುರಿತು ತಮ್ಮ ವಚನಗಳಲ್ಲಿ ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ ಎಂದು ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಿದ್ದರು. ಪಂಚಮಿಯ ಹಬ್ಬವು ನಿಜವಾಗಿಯೂ ಕೇವಲ ಅಣ್ಣತಂಗಿ ಮತ್ತು ಒಡಹುಟ್ಟಿದವರ ಹಬ್ಬವಾಗಿತ್ತು. ಜಾನಪದರು ಈ ಕುರಿತಾಗಿ ತಮ್ಮ ಹಾಡುಗಳಲ್ಲಿಯೂ ತಿಳಿಸಿದ್ದಾರೆ.

ಪಂಚಮಿ ಹಬ್ಬ ಉಳಿದಾವ ದಿನ ನಾಕ/ ಅಣ್ಣ ಬರಲಿಲ್ಲ ಯಾಕ ಕರಿಲಾಕ/ ನನ್ನ ತವರಲ್ಲಿ ಪಂಚಮಿ ಭಾರಿ ಮಣ ತೂಕಾದ ಬೆಲ್ಲ ಕೊಬ್ಬಾರಿ ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ ನಾನು ತಿನುವಾಕಿ ಅಲ್ಲೆ ಮನ ಸಾರಿ ಎಂದು ಪದ ಕಟ್ಟಿ ಹಾಡಿದ್ದಾರೆ. ಅಂದು ಜೋಕಾಲಿ ಕಟ್ಟಿ ಪೌಷ್ಟಿಕಾಂಶದಿಂದ ಕೂಡಿದ ದ್ವಿದಳ ಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸಿ ಸಂತೋಷಪಡುವುದು ಪಂಚಮಿ ಹಬ್ಬವಾಗಿತ್ತು, ಹೊರತು ಕಲ್ಲು ನಾಗರಕ್ಕೆ ಹಾಲು ಸುರಿದು ವ್ಯರ್ಥ ಮಾಡುವುದಾಗಿರಲಿಲ್ಲ ಎಂದು ಜಾನಪದರು ತಿಳಿಸಿದ್ದರು.
ನಾಗರಿಕ ಸಮಾಜವು ಬದಲಾಗಬೇಕಿದೆ ಮತ್ತು ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಆಹಾರ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕಿದೆ. ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಸೇರಿದಂತೆ ಅನೇಕ ಜನಪರ ಸಂಘಟನೆಗಳು ನಾಗರ ಪಂಚಮಿಯಂದು ಹಾಲು ವ್ಯರ್ಥ ಮಾಡುವುದನ್ನು ವಿರೋಧಿಸಿ ಜಾಗೃತಿ ಮೂಡಿಸುತ್ತಿವೆ. ಶಿಕ್ಷಣವಂತರು ಸಹ ಮೌಢ್ಯದ ನೆರಳಿನಲ್ಲಿ ಆಹಾರವನ್ನು ವ್ಯರ್ಥ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು