ಬೆಲೆಯೇರಿಕೆ, ಬಡತನ ಮತ್ತು ನಿರುದ್ಯೋಗದ ಪ್ರಶ್ನೆಗಳಿಂದ ಬಳಲುತ್ತಿರುವ ಜನತೆಗೆ ಕೋಮು ಉನ್ಮಾದದಿಂದ ಮೂರ್ಖರನ್ನಾಗಿಸುವ ತಂತ್ರದ ಸೋಲಾಗಿದೆ. ಕೊನೆಯ ಕ್ಷಣದಲ್ಲಿ ಭಜರಂಗಬಲಿಯ ಆಸರೆ ತೆಗೆದುಕೊಂಡು ಹಿಂದೂ ಭಾವನೆಗಳನ್ನು ಕೆರಳಿಸುವ ಅತ್ಯಂತ ಅಗ್ಗದ ಈ ಆಟದ ಸೋಲಾಗಿದೆ
ರಾಜಕೀಯದಲ್ಲಿ ಯಾರು ಎಂಬುದಕ್ಕಿಂತ ದೊಡ್ಡ ಪ್ರಶ್ನೆ ಏನು ಮತ್ತು ಏಕೆ ಎಂಬುದು. ಕರ್ನಾಟಕದ ಚುನಾವಣೆಗಳ ಪರಿಣಾಮದ ನಂತರ ಮಾಧ್ಯಮಗಳು ಯಾರು ಗೆದ್ದರು, ಯಾರು ಸೋತರು ಎಂಬ ಪ್ರಶ್ನೆಯಲ್ಲಿ ನಿರತವಾಗಿವೆ. ಗೋದಿ ಮೀಡಿಯಾ ಮೊನ್ನೆಯ ತನಕ ನರೇಂದ್ರ ಮೋದಿಯನ್ನು ʼಟ್ರಂಪ್ ಕಾರ್ಡ್ʼ ಎಂದು ಬಿಂಬಿಸುವಲ್ಲಿ ನಿರತವಾಗಿದ್ದವೋ, ಇಂದು ಅವುಗಳೇ ಈ ಸೋಲಿನ ಭಾರದಿಂದ ಪ್ರಧಾನಮಂತ್ರಿಯನ್ನು ಉಳಿಸಲು ಮತ್ತು ಅದರ ಹೊಣೆಗಾರಿಕೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸ್ಥಳೀಯ ಬಿಜೆಪಿ ನಾಯಕರ ಮೇಲೆ ಹೊರೆಸುವ ಕೆಲಸದಲ್ಲಿ ಬಿಸಿಯಾಗಿವೆ.
ಅತ್ತ ಮುಖ್ಯಮಂತ್ರಿ ಯಾರು ಆಗುವರು ಎಂಬುದರ ಕಸರತ್ತು ಶುರುವಾಗಿದೆ. ಕರ್ನಾಟಕದ ನಂತರ ರಾಷ್ಟ್ರೀಯ ಮಟ್ಟದಲ್ಲಿ ವಿರೋಧಪಕ್ಷಗಳ ಮಹಾಮೈತ್ರಿಯಲ್ಲಿ ಯಾರದ್ದು ಎಷ್ಟು ತೂಕ ಇರುತ್ತೆ, ಇದರ ಅಂದಾಜು ಹಾಕಲಾಗುತ್ತಿದೆ. ಆದರೆ, ರಾಜಕೀಯದಲ್ಲಿ ದೀರ್ಘಾವಧಿ ತಿಳಿವಳಿಕೆಯುಳ್ಳವರು ತಮ್ಮ ಗಮನ ಯಾರು ಗೆದ್ದರು ಎಂಬುದರಿಂದ ತೆಗೆದು ಏನು ಗೆದ್ದಿದೆ ಹಾಗೂ ಏನು ಸೋತಿದೆ, ಏಕೆ ಸೋತಿದೆ ಎಂಬುದರ ಮೇಲೆ ಹರಿಸಬೇಕಿದೆ.
ವಿಶೇಷವಾಗಿ ಈ ಬಾರಿ, ಏಕೆಂದರೆ ಈ ಚುನಾವಣೆಗಳು ಕೇವಲ ಒಂದು ರಾಜ್ಯದ ಮುಂದಿನ ಐದು ವರ್ಷಗಳ ಸರಕಾರ ನಿರ್ಣಯವಾಗುವ ಕೇವಲ ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲ. ಈ ಚುನಾವಣೆಗಳ ಮೇಲೆ ಬಹಳಷ್ಟು ನಿಂತಿದೆ. ಒಂದು ವೇಳೆ ಬಿಜೆಪಿ ಇಲ್ಲಿ ಗೆಲ್ಲುತ್ತಿದ್ದರೆ, 2024ರ ಲೋಕಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಜೊತೆಗೆ ವಿರೋಧಪಕ್ಷಗಳಿಗಾಗಿಯೂ ಬಾಗಿಲು ಮುಚ್ಚುತ್ತಿತ್ತು. ನಮ್ಮ ಗಣತಂತ್ರದ ಮೇಲೆ ಆಗುತ್ತಿರುವ ದಾಳಿಗೆ ಪ್ರತಿರೋಧ ಒಡ್ಡುವುದು ಅಸಾಧ್ಯವಾಗುತ್ತಿತ್ತು. ಈ ನಿಟ್ಟಿನಲ್ಲಿ ಕರ್ನಾಟಕದ ಚುನಾವಣೆ ಭಾರತದ ಸ್ವಧರ್ಮವನ್ನು ಉಳಿಸಿಕೊಳ್ಳಲು ನಡೆಯುತ್ತಿರುವ ಕುರುಕ್ಷೇತ್ರದ ಯುದ್ಧದಲ್ಲಿ ಒಂದು ಮಹತ್ವಪೂರ್ಣ ಅಧ್ಯಾಯವಾಗಿದೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ನಡೆಸುವ ಯುದ್ಧದಲ್ಲಿ ಇದು ಮೊದಲ ಮುನ್ನಡೆಯಾಗಿದೆ.
ʼದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯ ಗೆಲುವುʼ ಎಂದು ರಾಹುಲ್ ಗಾಂಧಿಯು ಚುನಾವಣೆಗಳಲ್ಲಿ ಕಾಂಗ್ರೆಸ್ನ ಗೆಲುವಿನ ನಂತರ ಹೇಳಿದರು. ಚುನಾವಣಾ ಗೆಲುವಿನ ಉತ್ಸಾಹದಲ್ಲಿ ಮಾಡಿದ ಈ ಘೋಷಣೆಯಲ್ಲಿ ಒಂದಿಷ್ಟು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. ಕರ್ನಾಟಕದ ಚುನಾವಣೆಗಳಲ್ಲಿ ದ್ವೇಷ ಸೋತಿದೆ ಎಂಬುದಂತೂ ನಿಚ್ಚಳವಾಗಿದೆ. ಆದರೆ, ಪ್ರೀತಿಯ ಗೆಲುವು ಆಗಿದೆ ಎಂದು ಘೋಷಿಸಲು ಇನ್ನೂ ಸಮಯ ಬಂದಿಲ್ಲ.
ಈ ಚುನಾವಣೆಗಳ ಪರಿಣಾಮ ನೋಡಿ ಇಷ್ಟಂತು ಹೇಳಬಹುದು; ಬೆಲೆ ಬಡತನ ಮತ್ತು ನಿರುದ್ಯೋಗದ ಪ್ರಶ್ನೆಗಳಿಂದ ಬಳಲುತ್ತಿರುವ ಜನತೆಗೆ ಕೋಮು ಉನ್ಮಾದದಿಂದ ಮೂರ್ಖರನ್ನಾಗಿಸುವ ತಂತ್ರದ ಸೋಲಾಗಿದೆ. ಸೌಹಾರ್ದದ ಸಂಸ್ಕೃತಿಯ ಪ್ರತೀಕವಾಗಿರುವ ಕರ್ನಾಟಕದಲ್ಲಿ ಒಮ್ಮೆ ಹಿಜಾಬ್, ಮತ್ತೊಮ್ಮೆ ಆಜಾನ್, ಇನ್ನೊಮ್ಮೆ ಲವ್ ಜಿಹಾದ್ ಮತ್ತೆ ಟಿಪ್ಪು ಸುಲ್ತಾನ್ ನೆಪ ಮಾಡಿ ಹಿಂದೂ ಮುಸ್ಲಿಂ ದ್ವೇಷ ಹರಡಿಸುವ ರಾಜಕೀಯಕ್ಕೆ ಸೋಲುಂಟಾಗಿದೆ. ಕೊನೆಯ ಕ್ಷಣದಲ್ಲಿ ಭಜರಂಗಬಲಿಯ ಆಸರೆ ತೆಗೆದುಕೊಂಡು ಹಿಂದೂ ಭಾವನೆಗಳನ್ನು ಕೆರಳಿಸುವ ಅತ್ಯಂತ ಅಗ್ಗದ ಈ ಆಟದ ಸೋಲಾಗಿದೆ. ಒಂದು ಅಸಮರ್ಥ ಮತ್ತು ಭ್ರಷ್ಟ ಇಮೇಜ್ ಹೊಂದಿರುವ ಸರಕಾರಕ್ಕೆ ಕೊನೆಯ ಕೆಲ ದಿನಗಳಲ್ಲಿ ನರೇಂದ್ರ ಮೋದಿಯ ರೋಡ್ ಶೋ, ಭಾವನೆಗಳನ್ನು ಕೆರಳಿಸುವ ಭಾಷಣ ಹಾಗೂ ಚಾನೆಲ್ಗಳ ಮುಖಾಂತರ ಅದರ ಪ್ರಚಾರದಿಂದ ಗೆಲ್ಲಿಸಬಹುದು ಎಂಬ ಮಿಥ್ ಅನ್ನು ಮತ್ತೊಮ್ಮೆ ಸುಳ್ಳೆಂದು ಸಾಬೀತುಪಡಿಸಲಾಗಿದೆ.
ಇದನ್ನು ಓದಿ ಕಾಂಗ್ರೆಸ್ಗೆ ಅಹಿಂದ ಬಲ; ಬಲಾಢ್ಯ ಜಾತಿಗಳ ಅಬ್ಬರದಲ್ಲಿ ಅನಾಥ ಜಾತಿಗಳ ದನಿ ಕೇಳಿಸುವುದಾದರೂ ಹೇಗೆ?
ಆದರೆ, ಪ್ರೀತಿಯ ಗೆಲುವು ಆಗಿದೆ ಎಂದು ಹೇಳಿವುದು ಅವಸರದ ಮಾತಾದೀತು. ಮೊದಲನೆಯದಾಗಿ, ಕರ್ನಾಟಕದ ಗೆಲವು ಇನ್ನೂ ಕಚ್ಚಾ ಗೆಲುವು. ಖುದ್ದು ಕರ್ನಾಟಕದಲ್ಲಿಯೇ ಮುಂದಿನ ವರ್ಷ ಬರುವ ಲೋಕಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ಖಚಿತವಾಗಿ ಇನ್ನೂ ಹೇಳಲಾಗುವುದಿಲ್ಲ. ಎರಡನೆಯದಾಗಿ, ಈ ಗೆಲುವಿನ ನೇರ ಪರಿಣಾಮ ಪಕ್ಕದ ತೆಲಂಗಾಣ ಅಥವಾ ಹಿಂದಿ ಪ್ರದೇಶದ ಇತರ ರಾಜ್ಯಗಳಲ್ಲಿ ಆಗುವ ವಿಧಾನಸಭಾ ಚುನಾವಣೆಗಳ ಮೇಲೆ ಬೀರುತ್ತೆ ಎಂಬುದರ ಬಗ್ಗೆಯೂ ಯಾವುದೇ ಖಚಿತತೆ ಇಲ್ಲ. ಇಡೀ ದೇಶದ ಲೋಕಸಭಾ ಚುನಾವಣೆಗಳಲ್ಲಿ ಗೆಲುವಿನ ಮಾತಂತೂ ತುಂಬಾ ದೂರದ ಮಾತಾಗುತ್ತದೆ.
ಕರ್ನಾಟಕದಲ್ಲಿ ಬಿಜೆಪಿಯ ಸೋಲಿನಿಂದ ಈ ದೀರ್ಘ ಹೋರಾಟದ ನೆಲೆಯನ್ನು ಉಳಿಸಿಕೊಂಡಂತಾಗಿದೆ. ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಆಡಳಿತರೂಢ ಪಕ್ಷದ ಈ ಹೀನಾಯ ಸೋಲು ದೇಶದ ಮನಸ್ಥಿತಿ ಮತ್ತು ವಿರೋಧಪಕ್ಷಗಳ ಮನೋಬಲದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಲೋಕಸಭೆಯ ಚುನಾವಣೆಗಳಲ್ಲಿ ಏನಾಗುವುದು ಎಂದು ಈಗಲೇ ಹೇಳಲು ಆಗುವುದಿಲ್ಲ ಆದರೆ ಕರ್ನಾಟಕದ ಈ ಚುನಾವಣಾ ಫಲಿತಾಂಶವು 2024ರಲ್ಲಿ ಅಧಿಕಾರ ಬದಲಾವಣೆಯ ಬಾಗಿಲನ್ನು ತೆರೆದಿಟ್ಟಿದೆ ಎಂಬುದಂತೂ ನಿಚ್ಚಳವಾಗಿದೆ. ವಿಷಕಾರಿಯಾಗುತ್ತಲೇ ಇದ್ದ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಒಂದಿಷ್ಟು ಹೆಚ್ಚಾಗಿದೆ.
ಅಷ್ಟೇ ಅಲ್ಲ, ಕರ್ನಾಟಕವು ಈ ಬಾಗಿಲ ತನಕ ತಲುಪುವ ದಾರಿಯನ್ನೂ ತೋರಿಸಿಕೊಟ್ಟಿದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ನ ಗೆಲುವಿನ ಹಿಂದೆ ಬಿಜೆಪಿ ಸರಕಾರದ ಅಸಮರ್ಥತೆ ಮತ್ತು ಬಿಜೆಪಿಯ ಹೋಲಿಕೆಯಲ್ಲಿ ಕಾಂಗ್ರೆಸ್ನ ನೇತೃತ್ವದಲ್ಲಿ ಒಗ್ಗಟ್ಟು ಮುಂತಾದ ಸಾಮಾನ್ಯ ಕಾರಣಗಳಂತೂ ಇದ್ದವು. ಆದರೆ ಈ ಪರಿಣಾಮದ ಮೂಲದಲ್ಲಿ ಒಂದು ಆಳವಾದ ಸಾಮಾಜಿಕ ಸಂರಚನೆಯೂ ಇದೆ, ಅದು ಇಡೀ ದೇಶಕ್ಕೆ ಒಂದು ಉದಾಹರಣೆಯಾಗಬಲ್ಲದು. ಚುನಾವಣಾ ಪರಿಣಾಮದ ವಿಶ್ಲೇಷಣೆ ತೋರಿಸುವುದೇನೆಂದರೆ, ಕರ್ನಾಟಕದಲ್ಲಿ ಅಂಚಿನಲ್ಲಿರುವ ಬಹುಸಂಖ್ಯಾತ ಸಮುದಾಯಗಳು ಕಾಂಗ್ರೆಸ್ ಪರವಾಗಿ ಸಂಘಟಿತವಾದವು. ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸರಿಸುಮಾರು ಸಮಬಲ ಹೊಂದಿದ್ದವು ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ಗೆ ಬಿಜೆಪಿಗಿಂತ ಶೇಕಡ 10ರಷ್ಟು ಮತಗಳು ಹೆಚ್ಚುವರಿಯಾಗಿ ಸಿಕ್ಕವು. ಪುರುಷರ ಹೋಲಿಕೆಯಲ್ಲಿ ಕಾಂಗ್ರೆಸ್ಗೆ ಮಹಿಳೆಯರ ಎರಡು ಪಟ್ಟಿಗಿಂತಲೂ ಹೆಚ್ಚು ಮತಗಳು ಪ್ರಾಪ್ತಿಯಾದವು.
ಇದನ್ನು ಓದಿ ಈ ದಿನ ಸಂಪಾದಕೀಯ | ಅಭಿವೃದ್ಧಿಗಾಗಿ ಬಾಯಾರಿದ ರಾಜ್ಯ; ಹೊಸ ಪರ್ವಕ್ಕೆ ನಾಂದಿ ಹಾಡಲಿ ಕಾಂಗ್ರೆಸ್
ಟಿವಿ ಚಾನೆಲ್ಗಳಲ್ಲಿ ಆದ ಚರ್ಚೆಗಳು ಲಿಂಗಾಯತ ಮತ್ತು ಒಕ್ಕಲಿಗ ಮತ ಬ್ಯಾಂಕ್ಗಳ ಮೇಲೆ ಕೇಂದ್ರೀಕೃತವಾಗಿದ್ದವು, ಆದರೆ ವಾಸ್ತವದಲ್ಲಿ ಕರ್ನಾಟಕದ ‘ಅಹಿಂದ’ ಮತಗಳು ಅಂದರೆ ಹಿಂದುಳಿದ, ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್ನ್ನು ಗೆಲ್ಲಿಸಿದವು. ಒಂದು ವೇಳೆ ಬಡವರು ಶ್ರೀಮಂತರು ಎಂಬ ಲೆಕ್ಕದಲ್ಲಿ ನೋಡಿದರೆ, ಸಣ್ಣಪುಟ್ಟ ಶ್ರೀಮಂತ ಭಾಗಗಳಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿತು ಆದರೆ ಮಧ್ಯಮ ವರ್ಗ, ಬಡವ ಮತ್ತು ಕಡುಬಡತನದ ವರ್ಗಗಳು ಕಾಂಗ್ರೆಸ್ ಮುನ್ನೆಡೆ ಸಾಧಿಸುವಂತೆ ಮಾಡಿದವು. ಒಂದುವೇಳೆ ಸಮಾಜ ಒಂದು ಪಿರಮಿಡ್ನಂತೆ ಇದೆ ಎಂದೂ ಊಹಿಸಿಕೊಂಡಲ್ಲಿ, ಪಿರಮಿಡ್ನ ಮೇಲಿನ ಭಾಗವು ಬಿಜೆಪಿಯ ಜೊತೆಗೆ ಸಾಥ್ ನೀಡಿತು ಹಾಗೂ ಅದರ ಕೆಳಗಿನ ಭಾಗಗಳು ಕಾಂಗ್ರೆಸ್ ಜೊತೆಗೆ. ಒಂದು ವೇಳೆ ಈ ಮಾದರಿಯನ್ನು ಎಲ್ಲಾ ವಿರೋಧ ಪಕ್ಷಗಳು ದೇಶಾದ್ಯಂತ ಅಳವಡಿಸಿಕೊಂಡರೆ 2024ರಲ್ಲಿ ಅಧಿಕಾರ ಬದಲಾವಣೆಯನ್ನು ಖಾತ್ರಿಪಡಿಸಬಹುದು.
ಈ ಸಾಮಾಜಿಕ ಸಮೀಕರಣ ತನ್ನಿಂದಾಗಿಯೇ ದ್ವೇಷದ ಕಡಿತಗೊಳಿಸುವುದಿಲ್ಲ ಎಂದು ನೀವು ಹೇಳಬಹುದು. ಕೊನೆಯ ವ್ಯಕ್ತಿ ಬಿಜೆಪಿಗೆ ಮತ ನೀಡದೇ ಇರಬಹುದು ಆದರೆ ಆತನ ಮನದಲ್ಲಿಯ ಕೋಮುವಾದದ ವಿಷ ಕೊನೆಯಾಗುವುದಿಲ್ಲ. ಈ ಮಾತು ನಿಜ. ಪ್ರೀತಿಯ ಗೆಲುವಿಗಾಗಿ 2024ರ ಚುನಾವಣೆಗಳಲ್ಲಿ ಬಿಜೆಪಿಯ ಸೋಲು ಅವಶ್ಯಕವಿದ್ದರೂ, ಆದರೆ ಅದುವೇ ಸಾಕಾಗುವುದಿಲ್ಲ. ಪ್ರೀತಿಯ ಗೆಲುವಿಗಾಗಿ ಜನರ ಹೃದಯ ಮತ್ತು ಮನಸ್ಸನ್ನು ಗೆಲ್ಲಬೇಕಾಗುವುದು. ದ್ವೇಷದ ವಿಷವನ್ನು ತೆಗೆದುಹಾಕಲು ಕನಿಷ್ಠ ಒಂದು ತಲೆಮಾರಿನ ದೀರ್ಘ ವೈಚಾರಿಕ ಹೋರಾಟ ನಡೆಸಬೇಕಾಗುವುದು. ಚುನಾವಣಾ ರಾಜಕೀಯ ಭಾರತದ ಸ್ವಧರ್ಮದ ರಕ್ಷಣೆಗಾಗಿ ಅವಶ್ಯಕವಾಗಿರುವ ಈ ಆಳವಾದ ಸಾಂಸ್ಕøತಿಕ ಸಂಘರ್ಷದ ಪ್ರಾರಂಭ ಆಗಬಹುದಷ್ಟೆ.

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ