ಧರ್ಮದ ಲೇಪನದಲ್ಲಿ ನಡೆಯುವ ಬಹಳಷ್ಟು ನಯವಂಚನೆಯನ್ನು ಜನ ಅರ್ಥಮಾಡಿಕೊಳ್ಳಲು ಸೋಲುತ್ತಿದ್ದಾರೆ. ಅಧಿಕಾರ ರಾಜಕಾರಣದ ಸುತ್ತ ಇಂದು ನಡೆಯುತ್ತಿರುವ ಹಲವಾರು ವಿದ್ಯಮಾನಗಳ ಹಿಂದೆ ಇಂತಹದೇ ತಂತ್ರ ಕೆಲಸ ಮಾಡುತ್ತಿರುವುದು ಸುಳ್ಳಲ್ಲ.
ವೈಯಕ್ತಿಕ ನೆಲೆಯಲ್ಲಿ ವಂಚನೆ, ಮೋಸ, ಹಿಂಸೆ ಮಾಡಿದರೆ ಜನಸಾಮಾನ್ಯರು ಅದನ್ನು ವಿರೋಧಿಸುತ್ತಾರೆ. ಆದರೆ ಯುದ್ಧ, ಜನಾಂಗ ದ್ವೇಷ, ಧರ್ಮದ ಕಾರಣಗಳಿಂದ ಆಗುವ ಹಿಂಸೆ, ನಡೆದಾಗ ಜನರಿಗೆ ಅಲ್ಲಿ ಹಿಂಸೆ ಕಾಣದೆ ಸಾಮೂದಾಯಿಕ ಹಿತಾಸಕ್ತಿಯ ವಿಷಯ ಮುಖ್ಯವಾಗಿ ಬಿಡುತ್ತದೆ. ಈ ರೀತಿಯ ಹೊಸ ಸಾಂಸ್ಕೃತಿಕ ಮೌಲ್ಯವೊಂದು ನಮ್ಮ ಸಮಾಜದಲ್ಲಿಯೂ ಕಳೆದ ಕೆಲವು ಸಮಯಗಳಿಂದ ಸ್ವೀಕೃತವಾದಂತೆ ತೋರುತ್ತದೆ. ಇಂತಹ ಹಿಂಸೆಯ ಮೂಲಕ ಬಹುಜನರ ಅಭಿಪ್ರಾಯವನ್ನು ಒಂದು ನಿಶ್ಚಿತ ಹಿತಾಸಕ್ತಿಯ ಪರವಾಗಿ ರೂಪಿಸುವ ಪೃವೃತ್ತಿ ಬೆಳೆಯತ್ತಿರುವುದು ಕಳವಳಕಾರಿ.
ಇದೇ ಕಾರಣದಿಂದ ರಾಜಕೀಯ, ಆಡಳಿತ, ಮತ್ತು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ, ಸಮುದಾಯದ ಹಿತಾಸಕ್ತಿಯ ಹೆಸರಿನಲ್ಲಿ ಗುರಿ ಸಾಧನೆಗೆ ಹಿಂಸೆಯನ್ನು ಉಪಯೋಗಿಸ ತೊಡಗಿರುವುದನ್ನು ಕಾಣಬಹುದು. ಇದನ್ನು ಬಂಡವಾಳ ನಿರ್ದೇಶಿತ ಅಧಿಕಾರ ರಾಜಕಾರಣ ಬಹಳ ಸಮರ್ಥವಾಗಿಯೇ ಬಳಸಿಕೊಂಡು ಎಲ್ಲ ರೀತಿಯ ಅನ್ಯಾಯ, ಹಿಂಸೆ, ಅಪರಾಧಗಳನ್ನು ಸಮರ್ಥಿಸಿಕೊಳ್ಳತೊಡಗಿದೆ. ಈ ಕಾರಣದಿಂದ ಜನಪ್ರತಿನಿಧಿಗಳು ಒಂದು ಪಕ್ಷದ ಚಿಹ್ನೆಯಲ್ಲಿ ಒಂದು ಉದ್ದೇಶದಿಂದ ಜನರ ಮತ ಪಡೆದು ಆಯ್ಕೆಯಾಗಿ, ಹಣ, ಅಧಿಕಾರ ಮತ್ತು ತಮ್ಮ ವೈಯಕ್ತಿಕ ಹಿತಾಸಕ್ತಿಯ ಕಾರಣದಿಂದ ಮಾರಿಕೊಂಡು ಇನ್ನೊಂದು ರಾಜಕೀಯ ಪಕ್ಷ ಸೇರಿದಾಗಲೂ ಅದಕ್ಕೆ ಧರ್ಮದ, ಸಮುದಾಯದ ಹಿತಾಸಕ್ತಿಯ ಲೇಪ ಹಚ್ಚಿದರೆ ಜನ ಅದನ್ನು ಸುಲಭವಾಗಿ ಸ್ವೀಕಾರ ಮಾಡುತ್ತಾರೆ. ಇದೇ ಕಾರಣದಿಂದ ಧರ್ಮದ ಲೇಪನದಲ್ಲಿ ನಡೆಯುವ ಬಹಳಷ್ಟು ನಯವಂಚಕತೆಯನ್ನು ಜನ ಅರ್ಥಮಾಡಿಕೊಳ್ಳಲು ಸೋಲುತ್ತಿದ್ದಾರೆ. ಅಧಿಕಾರ ರಾಜಕಾರಣದ ಸುತ್ತ ಇಂದು ನಡೆಯುತ್ತಿರುವ ಹಲವಾರು ವಿದ್ಯಮಾನಗಳ ಹಿಂದೆ ಇಂತಹದೇ ತಂತ್ರ ಕೆಲಸ ಮಾಡುತ್ತಿರುವುದು ಸುಳ್ಳಲ್ಲ.
ತಮ್ಮ ಕಾಲಿಗೇ ಕೊಡಲಿ ಏಟು ಹಾಕಿಕೊಳ್ಳುತ್ತಿರುವ ಜನ ಸಾಮಾನ್ಯರಿಗೆ ಇದನ್ನು ಅರ್ಥಮಾಡಿಸುವ ಕೆಲಸಕ್ಕೆ ಕೆಲವು ಜನ ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಕೆಲ ಚಾಣಾಕ್ಷರು ಸಮುದಾಯದ ಮದ್ಯೆ ಬೆಂಕಿ ಹಚ್ಚುವ ಮೂಲಕ ದಿನ ಬೆಳಗಾಗುವುದರೊಳಗೆ ಸಮುದಾಯದ ಮಾನ, ಪ್ರಾಣ ರಕ್ಷಣೆಯ ಜಾಕೀಟು ಧರಿಸಿ ವಿಧಾನಸಭೆ, ಲೋಕಸಭೆಗೆ ಪ್ರವೇಶ ಪಡೆಯುತ್ತಿದ್ದಾರೆ. ಸಮುದಾಯದ ನಡುವೆ ಸಾಮರಸ್ಯ ನಿಜವಾಗಿಯೂ ನಮ್ಮ ನಾಯಕರುಗಳಿಗೆ ಬೇಕಿದ್ದರೆ, ಮೆರವಣಿಗೆಯಲ್ಲಿ ಗೊಂದಲ ದೊಂಬಿಯಾಗಿ, ಬಡಮಕ್ಕಳಯ ಬಲಿಯಾಗುವ ಮೊದಲು,
ನಮ್ಮ ತಂಗಿ ತಾಯಂದಿರ ಹಣೆಯ ಕುಂಕುಮ ಅಳಿಸಿಹೋಗುವ ಮುನ್ನ, ದುರ್ಬಲರ ಅಂಗಡಿ ಮುಂಗಟ್ಟುಗಳು ಸುಟ್ಟು ಬೂದಿಯಾಗುವ ಮೊದಲೇ ಸತ್ಯ ಶೋಧನಾ ಸಮಿತಿ ಮಾಡಬಹುದಲ್ಲ? ಎಲ್ಲ ಪಕ್ಷದ ನಾಯಕರಿರುವ ಸಮಿತಿಗೆ ಶಾಂತಿ ಕಾಪಾಡುವ ಹೋಣೆ ನೀಡಿ, ಗಲಾಟೆ, ದೊಂಬಿ ನಡೆದು ಜನರ ಪ್ರ್ರಾಣ, ಆಸ್ತಿ ಪಾಸ್ತಿ ನಷ್ಟ ಆದರೆ ಶಾಸಕರ ಸ್ಥಾನ ರದ್ದಾಗುವಂತೆ ಆಗಲಿ. ಇದು ಆಗುತ್ತದೆಯೇ? ಕಷ್ಟ! ದುರಂತವೆಂದರೆ “ಕುರಿ ಸಾಕುವ ರೈತನನ್ನು ಬಿಟ್ಟು ಕಟುಕನ ಹಿಂದೆ” ಹೋಗಲು ಹಾತೊರೆಯುತ್ತಿರುವುದು.
ಮುಂದಿನ ಕೆಲವೇ ಸಮಯದಲ್ಲಿ ಪಾರ್ಲಿಮೆಂಟ್ ಕ್ಷೇತ್ರಗಳ ಮರುವಿಂಡಣೆ ಆಗಲಿದೆ. ಅದರ ಪರಿಣಾಮವಾಗಿ, ಹಿಂದಿ ಭಾಷೆ ಮಾತನಾಡುವ ಉತ್ತರ ಬಾರತದ ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ರಾಜಸ್ಥಾನ, ಇವುಗಳು ಕೇಂದ್ರದಲ್ಲಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ದಕ್ಷಿಣದ ರಾಜ್ಯಗಳು ರಾಜಕೀಯವಾಗಿ ಮಹತ್ವ ಕಳೆದುಕೊಂಡರೂ ಅಚ್ಚರಿಪಡಬೇಕಾಗಿಲ್ಲ. ಜನಸಂಖ್ಯೆಯನ್ನು ನಿಯಂತ್ರಣ ಮಾಡುತ್ತಾ, ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುತ್ತಾ, ಅಭಿವೃದ್ಧಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಟಾನ ಮಾಡಿ, ವ್ಯವಹಾರ ವ್ಯಾಪಾರ ವೃದ್ಧಿಸಿಕೊಂಡು ಒಕ್ಕೂಟದ ಬೊಕ್ಕಸ ತುಂಬಿಸಿವುದರಲ್ಲಿ ಬಹುತೇಕ ಮುಂದಿರುವುದು ನಮ್ಮ ದಕ್ಷಿಣದ ರಾಜ್ಯಗಳು. ಈ ನಿಟ್ಟಿನಲ್ಲಿ ಗಾವುದ ಹಿಂದೆ ಇರುವ ಹೆಚ್ಚು ಜನಸಂಖ್ಯೆ ಇರುವ ಉತ್ತರದ ರಾಜ್ಯಗಳು ಶಾಸನ ರೂಪಿಸುವ ಅವಕಾಶದಲ್ಲಿ ಮಾತ್ರ ಪರಿಸ್ಥಿತಿ ಮುಂದುವರಿಯಲಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ತೆರಿಗೆ ಪೂರ್ತಿ ನಮಗೆ ಬೇಕು ಎನ್ನುವುದು ನ್ಯಾಯ ಸಮ್ಮತವಲ್ಲ ಎನ್ನುವುದನ್ನು, ನೆನಪಿಸಿಕೊಳ್ಳುತ್ತಲೇ, ಯಾರೋ ದುಡಿದದ್ದರಲ್ಲಿ ಹೇಗೋ ಪಾಲು ಬರುತ್ತಿದೆ ನಾವು ಹಾಯಾಗಿರೋಣ ಎನ್ನುವ ಕೆಲವರ ಧೋರಣೆ ನಮಗೆ ಬೇಸರ ತರಿಸಿದರೆ ಏನು ಮಾಡೋಣ?
ಇದನ್ನೂ ಓದಿ ಬಹಿರಂಗ ಪತ್ರ | ಅತ್ಯಾಚಾರ ಸಂತ್ರಸ್ತರು ಮುಖ ಮುಚ್ಚಿಕೊಳ್ಳದೇ ಟಿ ವಿ ಮುಂದೆ ಬರಬೇಕಾ, ಕುಮಾರಸ್ವಾಮಿಯವರೇ?!
ಹಿಂದಿ ಹೇರಿಕೆ, ಧರ್ಮ, ದೇವರು, ಭಾಷೆ, ಉತ್ತರ, ದಕ್ಷಿಣ, ಒಂದು ದೇಶ ಒಂದು ಚುನಾವಣೆ, ಸಮಾನ ನಾಗರಿಕ ಕಾನೂನು… ಮುಂತಾದ ವಿಷಯಗಳು ದೇಶದ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳು ಹೇಗೆ, ಯಾಕೆ ಮತ್ತು ಯಾವ ಹಿತಾಸಕ್ತಿಯಿಂದ ಮರು ನಿರೂಪಿತವಾಗುತ್ತಿವೆ ಎನ್ನುವುದನ್ನು ಸಮಾಜದ ಬಹುಜನ ವಿಮರ್ಶೆ ಮಾಡಬೇಕಿದೆ. ಅಧಿಕಾರದಲ್ಲಿರುವವರಿಗೆ ಕೇವಲ ಆಧಿಕಾರದ ಅಮಲು ಮಾತ್ರ ಮುಖ್ಯವಾಗದೇ, ಇಡೀ ಸಮುದಾಯದ ಸರ್ವೋದಯವೇ ಆದ್ಯತೆಯಾಗಬೇಕು. “ಮಾಡಿ ಮಾಡಿ ಕೆಟ್ಟರು ಮನವಿಲ್ಲದೇ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ… “ಎಂಬ ಶರಣರ ಮಾತಿನಂತೆ, ರಾಜಕೀಯದ ನೀಡುವ, ಮಾಡುವ, ವಿಷಯದ ಹಿಂದಿರಬಹುದಾದ ನಿಜವೇನು ಎನ್ನುವುದನ್ನು ತಿಳಿಯುವುದು ಅಗತ್ಯವಿದೆ.

ಡಾ ಉದಯ್ ಕುಮಾರ್ ಇರ್ವತ್ತೂರು
ನಿವೃತ್ತ ಪ್ರಾಂಶುಪಾಲರು, ಮಂಗಳೂರು