ಕಾಂಗ್ರೆಸ್‌ಗೆ ಅಹಿಂದ ಬಲ; ಬಲಾಢ್ಯ ಜಾತಿಗಳ ಅಬ್ಬರದಲ್ಲಿ ಅನಾಥ ಜಾತಿಗಳ ದನಿ ಕೇಳಿಸುವುದಾದರೂ ಹೇಗೆ?

Date:

Advertisements
ದೇವರಾಜ ಅರಸು ಅವರು ಅನಾಥ ಜಾತಿಗಳ ಮತಗಳನ್ನು ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳಿಸಿದ್ದರು. ಎಸ್ .ಬಂಗಾರಪ್ಪ ಅವರು ಅರಸು ಅವರ ಮುಂದುವರೆದ ನಾಯಕನಂತೆ ಕಾಣಿಸಿಕೊಂಡಿದ್ದರು. ಈ ಇಬ್ಬರೂ ನಾಯಕರ ನಂತರ ಅಹಿಂದ ವರ್ಗಗಳಲ್ಲಿನ ರಾಜಕೀಯ ಶಕ್ತಿಯನ್ನು ಕ್ರೋಡೀಕರಿಸಿದವರು ಈಗಿನ ಸಿದ್ದರಾಮಯ್ಯನವರು

ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ 135 ಸ್ಥಾನಗಳೊಂದಿಗೆ ಅಧಿಕಾರ ಹಿಡಿಯುತ್ತಿರುವುದು ಮತ್ತೊಮ್ಮೆ ಅಹಿಂದ ವರ್ಗಗಳಿಗೆ ರಾಜಕೀಯ ಶಕ್ತಿ ಮೈಗೂಡಿಸಿಕೊಂಡ ಸಮಾಧಾನ ಸಿಕ್ಕಂತಾಗಿದೆ.

ಆದರೆ ಎಂದಿನಂತೆ ಬಲಾಢ್ಯ ಜಾತಿಗಳ ಒಗ್ಗಟ್ಟು ಮತ್ತು ಅಬ್ಬರದ ಸದ್ದಿನಲ್ಲಿ ಅನಾಥ ಜಾತಿಗಳ ನಿರ್ಣಾಯಕ ಮತಬಲವನ್ನು ವ್ಯವಸ್ಥಿತವಾಗಿ ಮರೆಮಾಚಿ ಅವರನ್ನು ಅಧಿಕಾರದಿಂದ ದೂರ ಇಡುವ ಪರಂಪರಾಗತ ಸಂಚು ಈಗಲೂ ಮುಂದುವರೆದಿರುವುದು ಆಶ್ಚರ್ಯವೇನಲ್ಲ.

ಮೊನ್ನೆಯಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸನ್ನು ಬೆಂಬಲಿಸಿದೆ ಎಂದು ವಿಶ್ಲೇಷಿಸಲಾಗುತ್ತಿದ್ದರೂ ಅದು ಅರ್ಧ ಸತ್ಯ ಮಾತ್ರ. ಬಲಾಢ್ಯ ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗ ಮತಸಮುದಾಯಗಳನ್ನು ಕೇಂದ್ರೀಕರಿಸಿಕೊಂಡೇ ನಡೆಯುವ ವಿಶ್ಲೇಷಣೆಗಳು ಈ ಬಲಾಢ್ಯ ಜಾತಿಗಳನ್ನು ಎಲ್ಲಾ ಕಾರಣಕ್ಕೂ ರಾಜಕೀಯ ಮುನ್ನಲೆಯಿಂದ ಸರಿದುಹೋಗುವಂತೆ ನೋಡಿಕೊಳ್ಳುವ ಮತ್ತು ಅಧಿಕಾರ ಎಂಬುದು ಈ ಜಾತಿಗಳ ಹಿಡಿತದಲ್ಲೇ ಹಿಡಿದಿಟ್ಟುಕೊಳ್ಳುವ ತಂತ್ರವೇ ಆಗಿರುತ್ತದೆ.

Advertisements

ಇದೀಗ ರಾಜ್ಯದಲ್ಲಿ 135 ಸ್ಥಾನಗಳ ಬಲದೊಂದಿಗೆ ಸರ್ಕಾರ ರಚಿಸುತ್ತಿರುವ ಕಾಂಗ್ರೆಸ್‌ನಲ್ಲೂ ಈಗ ಬಲಾಢ್ಯ ಜಾತಿಗಳು ಅಧಿಕಾರ ಹಿಡಿಯಲು ಜಾತಿಬಲವನ್ನೆ ಮುಂದುಮಾಡುತ್ತಿವೆ. ಈ ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಅನಾಥ ಜಾತಿಗಳ ಮತಗಳನ್ನು ಯಾವ ಕಾಲಕ್ಕೂ ಗಣನೆಗೆ ತೆಗೆದುಕೊಂಡ ಉದಾಹರಣೆಗಳಿಲ್ಲ. ಮಾಧ್ಯಮಗಳಿಗೆ ಅಹಿಂದ ಮತಗಳ ಧ್ರುವೀಕರಣ ಮಹತ್ವದ್ದು ಅನಿಸುವುದೇ ಇಲ್ಲವೆಂದರೆ ಪೂರ್ವಗ್ರಹ ಪೀಡಿತ ಜಾತಿಯ ಸನ್ನಿ ಆವರಿಸಿರುತ್ತದೆ.

ದೇವರಾಜ ಅರಸು ಅವರು ಅನಾಥ ಜಾತಿಗಳ ಮತಗಳನ್ನು ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳಿಸಿದ್ದರು.
ಎಸ್. ಬಂಗಾರಪ್ಪ ಅವರು ಅರಸು ಅವರ ಮುಂದುವರೆದ ನಾಯಕನಂತೆ ಕಾಣಿಸಿಕೊಂಡಿದ್ದರು. ಈ ಇಬ್ಬರೂ ನಾಯಕರ ನಂತರ ಅಹಿಂದ ವರ್ಗಗಳಲ್ಲಿನ ರಾಜಕೀಯ ಶಕ್ತಿಯನ್ನು ಕ್ರೋಡೀಕರಿಸಿದವರು ಈಗಿನ ಸಿದ್ದರಾಮಯ್ಯ. ಈ ನಡುವೆ ಮುಖ್ಯಮಂತ್ರಿಗಳಾಗಿದ್ದ ವೀರಪ್ಪಮೊಯ್ಲಿ, ಧರಂಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದರೂ ಎಂಬುದು ಒಂದು ದಾಖಲೆ ಅಷ್ಟೆ.

1999ರಲ್ಲಿ ಎಸ್.ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನಾಯಕ ಎಸ್. ಬಂಗಾರಪ್ಪ ಅವರ ಕೊಡುಗೆಯೂ ಇತ್ತು ಎಂಬುದನ್ನು ಮರೆಮಾಚುವಂತಿಲ್ಲ. ಕರ್ನಾಟಕ ವಿಕಾಸ ಪಾರ್ಟಿ(ಕೆವಿಪಿ)ಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಕಾಂಗ್ರೆಸ್‌ ಗೆ ಹಿಂತಿರುಗಿದ್ದ ಬಂಗಾರಪ್ಪನವರು ಅಹಿಂದ ಮತಗಳನ್ನು ಜೊತೆಗೆ ಕರೆತಂದಿದ್ದರು. ಒಕ್ಕಲಿಗ ಮತ್ತು ದಲಿತ, ಮುಸ್ಲಿಂ-ಅತಿ ಹಿಂದುಳಿದ ವರ್ಗಗಳ ಜಾತಿ ಸಮೀಕರಣ ಇಲ್ಲಿ ಫಲಪ್ರದವಾಗಿ ಕೆಲಸ ಮಾಡಿತ್ತು. ಇದರ ಫಲವನ್ನು ಒಕ್ಕಲಿಗ ಎಸ್.ಎಂ ಕೃಷ್ಣ ಅನುಭವಿಸಿದರು ಕೂಡ. ಕೃಷ್ಣ ಸರ್ಕಾರದ ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬಂಗಾರಪ್ಪ ಬಿಜೆಪಿ ಸೇರಿದ್ದು, ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸರ್ಕಾರ ರಚಿಸಿದ್ದು ಮತ್ತು ಬಿಜೆಪಿ ಹಿಂದುತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದು ಎಲ್ಲವೂ ದಲಿತ, ಹಿಂದುಳಿದ ವರ್ಗಗಳ ಮತಗಳು ಬಿಜೆಪಿ ಕಡೆಗೆ ಹರಿದು ಹೋಗುವಂತಾಯಿತು.

2006ರ ನಂತರದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡೆ ನಡೆದ ಬಿಜೆಪಿಯ ಭ್ರಷ್ಟಾಚಾರ ಮತ್ತು ಮತೀಯ ರಾಜಕಾರಣಕ್ಕೆ 2013ರಲ್ಲಿ ಒಂದು ಹಂತಕ್ಕೆ ಬ್ರೇಕ್ ಹಾಕಿದವರು ಸಿದ್ದರಾಮಯ್ಯ.

2018 ರಲ್ಲಿ ಕಾಂಗ್ರೆಸ್ ಸೋಲಿಗೆ ದಲಿತ, ಹಿಂದುಳಿದ ಮತಗಳು ಮತೀಯವಾದಕ್ಕೆ ಬಲಿಯಾಗಿ ಬಿಜೆಪಿಯನ್ನು ಹಿಂಬಾಲಿಸಿದರೆ, ಲಿಂಗಾಯತ ಮತ್ತು ಒಕ್ಕಲಿಗ ಮತಸಮುದಾಯಗಳು ಸಿದ್ದರಾಮಯ್ಯನವರ ಅಹಿಂದ ವಿಚಾರದಿಂದ ಅಸಹನೆಗೊಂಡು ಎಂದಿನಂತೆ ಬಿಜೆಪಿ ಜೊತೆ ನಿಂತವು. ಇದು ಕಾಂಗ್ರೆಸ್‌ಗೆ ದೊಡ್ಡ ನಷ್ಟವನ್ನೇ ತಂದವು. ಕಳೆದ ನಾಲ್ಕು ವರ್ಷಗಳ ಬಿಜೆಪಿ ಸರ್ಕಾರದ ಯಾವ ಕಲ್ಯಾಣ ಕಾರ್ಯಕ್ರಮಗಳೂ ಇಲ್ಲದ ದುರ್ಬಲ ಆಡಳಿತ, ಬೆಲೆ ಏರಿಕೆ, ಅಭಿವೃದ್ದಿ ಹೀನ ನಡವಳಿಕೆಗಳು ದಲಿತ-ಹಿಂದುಳಿದ ವರ್ಗಗಳಲ್ಲಿ ನಿರಾಸೆ ಮೂಡಿಸಿದ್ದರೆ, ಅಲ್ಪಸಂಖ್ಯಾತರಂತೂ ಉಸಿರುಗಟ್ಟಿ ಬಿಡುಗಡೆಗೆ ಪರಿತಪಿಸುತ್ತಿದ್ದಂತಿತ್ತು.

ಇದನ್ನು ಓದಿ ಈ ದಿನ ಸಂಪಾದಕೀಯ | ಬಿಜೆಪಿಗೆ ಮತದಾರರು ಕಲಿಸಿದ ಪಾಠವನ್ನು ಕಾಂಗ್ರೆಸ್ ಮರೆಯದಿರಲಿ

2013-18ರವರೆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ಮತ್ತು ಈ ಹಿಂದಿದ್ದ ಬಿಜೆಪಿ ಆಡಳಿತವನ್ನು ತುಲನೆ ಮಾಡಿದ ಅಹಿಂದ ವರ್ಗಗಳು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಡೆಗೆ ಬೇಷರತ್ತಾಗಿ ಹರಿದು ಬಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಲಿಂಗಾಯತ ಸಮುದಾಯ ಬಿಜೆಪಿಯಿಂದ ಕಳಚಿಕೊಂಡಿಲ್ಲ ಎಂಬುದಕ್ಕೆ ಲಿಂಗಾಯತರೆ ಆದ ಜಗದೀಶ್ ಶೆಟ್ಟರ್ ಅವರ ಸೋಲು ಒಂದು ಉದಾಹರಣೆ. ಒಕ್ಕಲಿಗ ಮತಗಳು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಂತ ಈ ಸಮುದಾಯಗಳನ್ನು ನಿರ್ಲಕ್ಷಿಸುವುದು ನ್ಯಾಯವೂ ಅಲ್ಲ. ಕುರುಬ, ಈಡಿಗ, ದೇವಾಂಗ, ಮಡಿವಾಳ, ಬಲಿಜ ಮತ್ತಿತರ ಅತಿಹಿಂದುಳಿದ ಜಾತಿಗಳು ಕಾಂಗ್ರೆಸ್‌ಗೆ ಬೆಂಬಲಿಸಿವೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಮಟ್ಟದ ನಾಯಕರಾಗಿ ಎಐಸಿಸಿ ಅಧ್ಯಕ್ಷರಾಗಿರುವುದು ದಲಿತರು ಎಡ ಬಲ ಮರೆತು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ನಿಂತಿರುವುದಕ್ಕೆ ಮತಪ್ರಮಾಣವೇ ಸಾಕ್ಷಿ.

ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂಬ ಆಸೆಗಣ್ಣಿನಿಂದ ನೋಡುತ್ತಿರುವುದು ಇಂತಹ ಅನಾಥ ಜಾತಿಗಳು ಮಾತ್ರ. ಬಲಾಢ್ಯ ಜಾತಿಗಳ ರಾಜಕೀಯ ಷಡ್ಯಂತ್ರ, ಏರುದನಿಯ ಕೂಗಿನಲ್ಲಿ ಈ ಅಹಿಂದ ವರ್ಗಗಳ ದನಿ ಕೇಳಿಸುವುದಾದರೂ ಹೇಗೆ?.

ರವಿಕುಮಾರ್
ಎನ್‌ ರವಿಕುಮಾರ್
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎನ್‌ ರವಿಕುಮಾರ್
ಎನ್‌ ರವಿಕುಮಾರ್
ಪತ್ರಕರ್ತ, ಲೇಖಕ

3 COMMENTS

  1. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ನೋಡಿದರೆ ಅಧಿಕಾರಕ್ಕಾಗಿ ಈರೀತಿ ವರ್ತಿಸುವಿಕೆಯಿಂದ ಕಾಂಗ್ರೆಸ್ ಪಕ್ಷ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ
    ಅಧಿಕಾರ ಶಾಶ್ವತವಲ್ಲ.ಕರ್ನಾಟಕದ ಜನತೆಗೆ ಸಾಮಾಜಿಕ ನ್ಯಾಯ ಸಮ್ಮತ ಆಡಳಿತ ಮುಖ್ಯವೇ ಹೊರತು ಪ್ರಭಲ ಜಾತಿಯ ಹೇರಿಕೆ ಅಲ್ಲ

  2. ಕಾಂಗ್ರೆಸ್ ಹಾಗೇ ಭಾವಿಸೋದು ತಪ್ಪು. ಕೆಳ ವರ್ಗದ ಜನರು,ತಳಸಮುದಾಯದ ಬಗ್ಗೆ ವಿಶೇಷ ಗಮನ, ಕಾಳಜಿ ವಹಿಸಿ ಅವರನ್ನು ರಾಜಕೀಯ, ಸಾಮಾಜಿಕ ಸ್ಥಾನಮಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯ ನಿರ್ವಹಿಸಲು ಈಗೀನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಣತೊಡಬೇಕು, ಇಲ್ಲವೆ ಆ ಸಮುದಾಯ ಗಳು ಅಂತಾ ರಾಗಿ ಹರಿದು ಹಂಚಿ ಹೋಗುವ ಸಾಧ್ಯತೆಗಳಿವೆ

  3. ಇವತ್ತು ಹಿಂದುಳಿದ ಜಾತಿಗಳು, ದಲಿತರು ಕೂಡಿ ಒಕ್ಕಲಿಗರು ಲಿಂಗಾಯತರೊಡನೆ ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಆದ ಕಾರಣ, ಮುಖಂಡರ ಜವಾಬ್ದಾರಿಯುತ ಹೆಜ್ಜೆ ಅತಿ ಮುಖ್ಯ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X