ಕೇರಳದಲ್ಲಿ ಭಾರೀ ಸುದ್ದಿಯಾಗಿದ್ದ ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸ್ ಕೊಲೆ ಪ್ರಕರಣದಲ್ಲಿ ಒಂದನೆ ಮಾವೆಲಿಕ್ಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಎಲ್ಲ ಹದಿನೈದು ಮಂದಿ ಆರೋಪಿಗಳಿಗೆ ಮರಣ ದಂಡನೆ ವಿಧಿಸಿದೆ. ಇದು ಕೇರಳದ ಇತಿಹಾಸದಲ್ಲೇ ಇಷ್ಟು ಮಂದಿ ಆರೋಪಿಗಳಿಗೆ ಮರಣ ದಂಡನೆ ವಿಧಿಸಲ್ಪಟ್ಟ ಮೊದಲ ಪ್ರಕರಣವಾಗಿದೆ.
ಡಿಸೆಂಬರ್ 19, 2021ರಂದು ಬಿಜೆಪಿ ನಾಯಕ ಹಾಗೂ ವಕೀಲ ರಂಜಿತ್ ಶ್ರೀನಿವಾಸ್ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಿಜಾಮ್, ಅಝ್ಮಲ್, ಅನೂಪ್, ಮಹಮ್ಮದ್ ಅಸ್ಸಾಂ, ಸಲಾಂ ಪೊನ್ನಾದ್, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಮಾದ್, ಜಸೀಬ್ ರಝಾ. ನವಾಜ್, ಶಮೀರ್, ನಜೀರ್, ಝಾಕಿರ್ ಹುಸೈನ್, ಶಾಜಿ ಪೂವತಿಂಕಲ್, ಶೆರ್ನಾಝ್ ಅಶ್ರಫ್ ಎಲ್ಲ ಆರೋಪಿಗಳನ್ನೂ ದೋಷಿಗಳೆಂದು ನ್ಯಾಯಾಲಯವು ಘೋಷಿಸಿದೆ.
ಆರೋಪಿಗಳೆಲ್ಲರೂ ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಹಾಗೂ ಅದರ ರಾಜಕೀಯ ಘಟಕ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ)ಗೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 19, 2021ರಂದು ಬಿಜೆಪಿಯ ಇತರೆ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಅವರ ನಿವಾಸಕ್ಕೆ ನುಗ್ಗಿದ್ದ ದೋಷಿಗಳು, ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ವಿ.ಜಿ.ಶ್ರೀದೇವಿ ಶಿಕ್ಷೆ ಪ್ರಕಟಿಸಿದ್ದಾರೆ. ಜೊತೆಗೆ ದಂಡ ಕೂಡ ವಿಧಿಸಿದ್ದು, ದಂಡದ ಮೊತ್ತವನ್ನು ರಂಜಿತ್ ಶ್ರೀನಿವಾಸ್ ಅವರ ಕುಟುಂಬಕ್ಕೆ ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ಎಲ್ಲ ದೋಷಿಗಳಿಗೆ ಅಲಪ್ಪುಝದಲ್ಲಿರುವ ಮಾನಸಿಕ ಆಸ್ಪತ್ರೆಯಲ್ಲಿ ಮಾನಸಿಕ ಸ್ಥಿರತೆಯ ಪರೀಕ್ಷೆ ನಡೆಸುವಂತೆಯೂ ನ್ಯಾಯಾಲಯ ತಿಳಿಸಿದೆ.
“ನ್ಯಾಯಾಲಯದ ತೀರ್ಪಿನಿಂದ ಸಂತೃಪ್ತರಾಗಿದ್ದು, ಇದೊಂದು ಅಸಾಮಾನ್ಯ ತೀರ್ಪು” ಎಂದು ರಂಜಿತ್ ಶ್ರೀನಿವಾಸನ್ ಕುಟುಂಬ ಪ್ರತಿಕ್ರಿಯಿಸಿದೆ. ಕುಟುಂಬದವರು ಪ್ರಾಸಿಕ್ಯೂಷನನ್ಗೆ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ಬಿಜೆಪಿ ಕೂಡ ಈ ತೀರ್ಪನ್ನು ಸ್ವಾಗತಿಸಿದೆ. ಈ ಶಿಕ್ಷೆಯು ಅಪರೂಪದಲ್ಲಿ ಅಪರೂಪದ ಶಿಕ್ಷೆಯಾಗಿದೆ. ನಾವು ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಪ್ರಾಸಿಕ್ಯೂಟರ್ ಮಾಧ್ಯಮಗಳಿಗೆ ಹೇಳಿದರು.

ಎಲ್ಲ 15 ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. 12 ಆರೋಪಿಗಳು ಪ್ರಕರಣದಲ್ಲಿ ನೇರವಾಗಿ ಭಾಗವಹಿಸಿದ್ದರು. ಈ ಸಂಚಿನಲ್ಲಿ ಮೂವರು ಭಾಗಿಯಾಗಿದ್ದರು. ಒಂದರಿಂದ ಎಂಟು ಆರೋಪಿಗಳ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು. ಉಳಿದ ಏಳು ಆರೋಪಿಗಳು ಕ್ರಿಮಿನಲ್ ಪಿತೂರಿಯಲ್ಲಿ ಭಾಗವಹಿಸಿದ್ದಾರೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಅಫ್ಘಾನಿಸ್ತಾನ | ತಾಲಿಬಾನ್ ಆಯೋಜಿಸಿದ್ದ ಸಮಾವೇಶದಲ್ಲಿ ಭಾರತ ಸಹಿತ 10 ದೇಶಗಳು ಭಾಗಿ
ಅಲಪ್ಪುಝ ನಗರವನ್ನು ಬೆಚ್ಚಿಬೀಳಿಸಿದ ಸರಣಿ ಹತ್ಯೆ ಪ್ರಕರಣವು 2021ರ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು. ಡಿಸೆಂಬರ್ 18ರಂದು ರಾತ್ರಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಎಂಬುವವರು ಹತ್ಯೆಯಾಗಿದ್ದರು. ಈ ಹತ್ಯೆಯಾದ ಮರುದಿನ ಬೆಳಗ್ಗೆಯೇ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ನುಗ್ಗಿ, ಮನೆಯವರ ಎದುರಲ್ಲೇ ಹತ್ಯೆಗೈಯ್ಯಲಾಗಿತ್ತು.
ರಂಜಿತ್ ಶ್ರೀನಿವಾಸನ್ ಅವರ ಪ್ರಕರಣದಲ್ಲಿ ಪೊಲೀಸರು ಹಾಗೂ ಸರ್ಕಾರಿ ವಕೀಲರು ಮುತುವರ್ಜಿ ವಹಿಸಿ ವಾದಿಸಿದ್ದರಿಂದ ಮೂರೇ ವರ್ಷದೊಳಗೆ ನ್ಯಾಯಾಲಯದಿಂದ ತೀರ್ಪು ಪ್ರಕಟಗೊಂಡಿದೆ. ಆದರೆ, ಕೆ.ಎಸ್.ಶಾನ್ ಹತ್ಯೆ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಿಲ್ಲ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿದೆ.