ಸಮಗ್ರ ತೋಟಗಾರಿಕೆ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳಿಗೆ ಆರಂಭಿಕವಾಗಿ ಪ್ರೋತ್ಸಾಹ ನೀಡಲು 2022-23ನೇ ಸಾಲಿನಲ್ಲಿ 2.73 ಕೋಟಿ ರೂ. ಬಿಡುಗಡಿ ಮಾಡಲಾಗಿದೆ ಹಾಗೂ 2023-24ನೇ ಸಾಲಿನಲ್ಲಿ 2 ಕೋಟಿ ರೂ. ಅನುದಾನ ಮೀಸಲು ಇರಿಸಲಾಗಿದೆ ಎಂದು ಉತನ್ನ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಹೇಳಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಸುನೀಲ್ ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪರವಾಗಿ ಉತ್ತರಿಸಿದರು.
“ರೈತರ ಬೆಳೆಗಳನ್ನು ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸಲು ರೈತ ಉತ್ಪಾದಕ ಸಂಸ್ಥೆಗಳು ಸಹಕಾರಿಯಾಗಿವೆ. ರೈತರು ಉತ್ಪಾದಕ ಸಂಸ್ಥೆಗಳನ್ನು ರಚಿಸಿಕೊಳ್ಳಲು ಆರಂಭದಲ್ಲಿ ಸರ್ಕಾರದಿಂದ, ಸಂಗ್ರಹಣೆ, ಸಂಸ್ಕರಣೆ, ಮತ್ತು ಶೇಖರಣೆ ಘಟಕ ನಿರ್ಮಾಣ, ಯಂತ್ರೋಪಕರಣ ಹಾಗೂ ಇತರೆ ಮೂಲ ಸೌಕರ್ಯಗಳಿಗೆ ಆರ್ಥಿಕ ಸಹಾಯಕ ಒದಗಿಸಲಾಗುವುದು. ರಾಜ್ಯದಲ್ಲಿ 1262 ರೈತ ಉತ್ಪಾದಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ” ಎಂದರು.
ಶಾಸಕ ಸುನೀಲ್ ಕುಮಾರ್ ಮಾತನಾಡಿ, “ರೈತ ಉಪಯೋಗಿ ಯೋಜನೆ ಅನುಷ್ಠಾನಗಳು ವಿಳಂಬವಾಗುತ್ತಿವೆ ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು. ರಾಜ್ಯದಲ್ಲಿರುವ 1262 ರೈತ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರ ಮೀಸಲು ಇರಿಸಿದ ಅನುದಾನ ಸಾಲುವುದಿಲ್ಲ. ಸರ್ಕಾರ ಅನುದಾನವನ್ನು ಹೆಚ್ಚಿಸುವಂತೆ” ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, “ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರದಿಂದ ವ್ಯಾಪಾರ ಹಾಗೂ ರಪ್ತು ಪರವಾನಿಗೆಯನ್ನು ನೀಡುವಂತೆ” ಕೋರಿದರು.