ಈ ಬಾರಿಯ ಲೋಕಸಭಾ ಚುನವಣೆಯಲ್ಲಿ ಗುಜರಾತ್ನ ಸೂರತ್ನಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗುವ ಎಲ್ಲ ಲಕ್ಷಣಗಳೂ ಇವೆ. ಅವರ ಪ್ರತಿಸ್ಪರ್ಧಿ, ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ್ದು, ದಲಾಲ್ಗೆ ಸ್ಪರ್ಧೆ ಒಡ್ಡುವವರು ಇಲ್ಲದಂತಾಗಿದೆ. ಅವರು ಅವಿರೋಧವಾಗಿ ಗೆದ್ದರೆ, ಬಹುಶಃ, ಬಿಜೆಪಿಯಿಂದ ಸ್ಪರ್ಧಿಸಿ ವಿರೋಧವಾಗಿ ಆಯ್ಕೆಯಾಗಿರುವ ಬಿಜೆಪಿಯ ಮೊದಲ ಅಭ್ಯರ್ಥಿಯೂ ಅವರೇ ಆಗಲಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 10 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ, ಸೂರತ್ ಲೋಕಸಭಾ ಕ್ಷೇತ್ರದಲ್ಲಿ ದಲಾಲ್ ಅವರ ಅವಿರೋಧ ಗೆಲುವು ಹತ್ತಿರದಲ್ಲಿದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ. ಹೀಗಾಗಿ, ದಲಾಲ್ ಗೆಲುವು ಇನ್ನೂ ಖಾತ್ರಿಯಾಗದೇ ಉಳಿದಿದೆ.
ಒಂದು ವೇಳೆ, ದಲಾಲ್ ಗೆದ್ದರೆ, 1951ರಿಂದ ಈವರೆಗೆ ಸ್ಪರ್ಧೆಯಿಲ್ಲದೆ ಗೆದ್ದವರಲ್ಲಿ 35ನೇ ಸಂಸದರಾಗುತ್ತಾರೆ. ಇದೂವರೆಗೆ 34 ಮಂದಿ ಯಾವುದೇ ಸ್ಪರ್ಧೆ ಇಲ್ಲದೆ ಗೆದ್ದಿದ್ದಾರೆ.
ಕೊನೆಯದಾಗಿ, 2012ರಲ್ಲಿ ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಅವರು ಕನ್ನೌಜ್ ಲೋಕಸಭಾ ಉಪಚುನಾವಣೆಯಲ್ಲಿ ಅವಿರೋಧವಾಗಿ ಗೆದ್ದಿದ್ದರು. ಅವರ ಪತಿ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ, ಸಂಸತ್ತಿಗೆ ರಾಜೀನಾಮೆ ನೀಡಿದ್ದರಿಂದ, ಆಗ ಉಪಚುನಾವಣೆ ನಡೆದಿತ್ತು.
ಸಂಸದೀಯ ಚುನಾವಣೆಯಲ್ಲಿ ಅವಿರೋಧವಾಗಿ ಗೆದ್ದಿರುವರಲ್ಲಿ ವೈ .ಬಿ ಚವಾಣ್, ಫಾರೂಕ್ ಅಬ್ದುಲ್ಲಾ, ಹರೇ ಕೃಷ್ಣ ಮಹತಾಬ್, ಟಿ.ಟಿ ಕೃಷ್ಣಮಾಚಾರಿ, ಪಿ.ಎಂ ಸೈಯದ್ ಮತ್ತು ಎಸ್.ಸಿ ಜಮೀರ್ ಪ್ರಮುಖ ನಾಯಕರು.
ಸ್ಪರ್ಧೆಯಿಲ್ಲದೆ ಲೋಕಸಭೆಗೆ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಕಾಂಗ್ರೆಸ್ನವರೇ ಆಗಿದ್ದಾರೆ. ಸಿಕ್ಕಿಂ ಮತ್ತು ಶ್ರೀನಗರ ಕ್ಷೇತ್ರಗಳು ತಲಾ ಎರಡು ಬಾರಿ ಇಂತಹ ಅವಿರೋಧ ಆಯ್ಕೆಗಳನ್ನು ಕಂಡಿವೆ. ಡಿಂಪಲ್ ಯಾದವ್ ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಉಪಚುನಾವಣೆಗಳಲ್ಲಿ ಅವಿರೋಧವಾಗಿ ಗೆದ್ದಿದ್ದಾರೆ.
1957ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗರಿಷ್ಠ ಏಳು ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದರು. 1951 ಮತ್ತು 1967ರ ಚುನಾವಣೆಯಲ್ಲಿ ತಲಾ ಐವರು ಅವಿರೋಧವಾಗಿ ಆಯ್ಕೆಯಾಗಿದ್ದರು. 1962ರಲ್ಲಿ ಮೂವರು ಮತ್ತು 1977ರಲ್ಲಿ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದರೆ, 1971, 1980 ಮತ್ತು 1989ರಲ್ಲಿ ತಲಾ ಒಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದರು.