ಸದ್ಯ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅದಾನಿ-ಮೋದಿ ಸಂಬಂಧದ ಬಗ್ಗೆ ವಿಪಕ್ಷಗಳು ಚರ್ಚೆಗೆ ಎಳೆಯುತ್ತಿವೆ. ಪ್ರತಿಭಟನೆ ನಡೆಸುತ್ತಿವೆ. ಇದೆಲ್ಲದರ ನಡುವೆ, ಮತ್ತೊಂದು ವಿಚಾರ ಸದನದ ಗಮನ ಸೆಳೆದಿದೆ. ಹೊಸ ಚರ್ಚೆ ಹುಟ್ಟುಹಾಕಿದೆ.
ರಾಜ್ಯಸಭಾ ಸಂಸದರೊಬ್ಬರ ಸೀಟಿನಡಿ ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ಸಭಾಪತಿ ಜಗದೀಪ್ ಧನಕರ್ ಸದನದಲ್ಲಿ ಹೇಳಿದ್ದಾರೆ. “ತೆಲಂಗಾಣದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ಅಭಿಷೇಕ್ ಮನುಸಿಂಘ್ವಿ ಅವರು ಕುಳಿತುಕೊಳ್ಳುವ ಸೀಟಿನಲ್ಲಿ ಹಣದ ನೋಟುಗಳು ಸಿಕ್ಕಿವೆ. ಭದ್ರತಾ ಸಿಬ್ಬಂದಿ ಪ್ರಕಾರ ಅವರು ಕುಳಿತುಕೊಳ್ಳುವ ಸೀಟಿನಡಿ 50 ಸಾವಿರ ರೂಪಾಯಿ ಹಣವಿತ್ತು” ಎಂದಿದ್ದಾರೆ.
ಮುಂದುವರೆದು, “ರಾಜ್ಯಸಭೆಯ ಸೀಟ್ ನಂಬರ್ 222 ರಲ್ಲಿ ನೋಟುಗಳು ಪತ್ತೆಯಾಗಿವೆ. ಸದನವನ್ನು ಮುಂದೂಡಿದ ಬಳಿಕ ದಿನನಿತ್ಯದ ತಪಾಸಣೆ ಸಮಯದಲ್ಲಿ ಭದ್ರತಾ ಅಧಿಕಾರಿಗಳಿಗೆ ನೋಟುಗಳ ಬಂಡಲ್ ಸಿಕ್ಕಿತ್ತು. ಸಂಸತ್ತಿನ ಭದ್ರತಾ ಅಧಿಕಾರಿಗಳು 50,000 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾನೂನು ಪ್ರಕಾರ ತನಿಖೆ ನಡೆಯಲಿದೆ” ಎಂದು ಹೇಳಿದ್ದಾರೆ.
ಸದನದಲ್ಲಿ ಜಗದೀಪ್ ಧನಕರ್ ಅವರ ಹೇಳಿಕೆಯಿಂದಾಗಿ ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಆರಂಭವಾಗಿದೆ. ಅಲ್ಲದೇ, ಸಭಾಪತಿ ಅವರ ಹೇಳಿಕೆಯನ್ನ ಕಾಂಗ್ರೆಸ್ ವಿರೋಧಿಸಿದೆ. ಕಾಂಗ್ರೆಸ್ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದಾರೆ. “ತನಿಖೆಯ ಮೊದಲೇ ಹೆಸರುಗಳನ್ನು ತೆಗೆದುಕೊಳ್ಳಬಾರದು” ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇನ್ನು ಸಭಾಪತಿಗಳು ಮಾಡಿರುವ ಆರೋಪವನ್ನ ಅಭಿಷೇಕ್ ಮನು ಸಿಂಘ್ವಿ ಅವರು ಅಲ್ಲಗಳೆದಿದ್ದಾರೆ. “ರಾಜ್ಯಸಭೆಗೆ ಹೋದಾಗಲೆಲ್ಲಾ 500 ರೂಪಾಯಿ ನೋಟು ಹಿಡಿದು ಬರುತ್ತೇನೆ. ಈ ಬಗ್ಗೆ ಕೇಳಿದ್ದು ಇದೇ ಮೊದಲು. ಮಧ್ಯಾಹ್ನ 12.57ಕ್ಕೆ ಸದನ ತಲುಪಿ 1 ಗಂಟೆಗೆ ಸದನದಿಂದ ಎದ್ದು ಹೋಗಿದ್ದೇ. ಅಯೋಧ್ಯೆ ಸಂಸದ ಅವಧೇಶ ಪ್ರಸಾದ್ ಅವರ ಅವರ ಜೊತೆಗೆ ಸದನದಿಂದ ಹೊರಹೋಗಿದ್ದೆ. 1:30ರವೆರೆಗೆ ಕ್ಯಾಂಟೀನ್ನಲ್ಲಿ ಕುಳಿತಿದ್ದೆ” ಎಂದು ಹೇಳಿದ್ದಾರೆ.
“ಪ್ರತಿಯೊಬ್ಬ ಸಂಸದರ ಆಸನಗಳನ್ನ ಲಾಕ್ ಮಾಡಬಹುದಾದ ವ್ಯವಸ್ಥೆ ಬೇಕು. ನಾವೇ ನಮ್ಮ ಆಸನವನ್ನ ಲಾಕ್ ಮಾಡಿಕೊಂಡು ಕೀ ಮನೆಗೆ ತೆಗೆದುಕೊಂಡು ಹೋಗಬಹುದು. ಏಕೆಂದರೆ, ಈ ರೀತಿಯ ಕೆಲಸಗಳನ್ನ ಬೇರೆಯವರು ಮಾಡಿ ಆರೋಪ ಹೊಡಿಸುವುದು ತಪ್ಪಬಹುದು” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ನಬಾರ್ಡ್ ಸಾಲ ನಿರಾಕರಣೆ | ರೈತರನ್ನು ಸಾಲವೆಂಬ ಶೂಲಕ್ಕೇರಿಸಿದ್ದು ಸರ್ಕಾರಗಳಲ್ಲವೇ?
ಸಭಾಪತಿಗಳು ಹೆಸರನ್ನು ಉಲ್ಲೇಖ ಮಾಡಿ ಆರೋಪ ಮಾಡಿದ ತಕ್ಷಣ ಸಿಟ್ಟಿಗೆದ್ದ ಮಲ್ಲಿಕಾರ್ಜುನ ಖರ್ಗೆ ಅವರು ಎದ್ದು ನಿಂತು, “ ಈ ವಿಚಾರ ಇನ್ನೂ ತನಿಖೆಯಲ್ಲಿದೆ ಎಂದು ನೀವು ಹೇಳಿದ್ದೀರಿ ಹೀಗಿರವಾಗ ತಪ್ಪು ನಡೆದಿದೆ ಎಂದು ಖಚಿತವಾಗುವವರೆಗೆ ಸಿಂಘ್ವಿ ಅವರ ಹೆಸರನ್ನು ಹೇಗೆ ಉಲ್ಲೇಖಿಸುತ್ತೀರಿ” ಎಂದು ಪ್ರಶ್ನಿಸುತ್ತೀರಿ
ಆದರೆ, ಕೇಂದ್ರ ಸಚಿವ ಕಿರಣ್ ರಿಜಿಜು ಮಾತನಾಡಿ, “ಆಸನ ಸಂಖ್ಯೆ ಮತ್ತು ಸಂಸದರ ಹೆಸರನ್ನು ಸೂಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಅದರಲ್ಲಿ ತಪ್ಪೇನಿದೆ, ಸಂಸತ್ತಿನಲ್ಲಿ ನೋಟುಗಳ ಬಂಡಲ್ ಒಯ್ಯುವುದು ಸೂಕ್ತವೇ? ಸೂಕ್ತ ತನಿಖೆಯಾಗಬೇಕು,” ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಜೆ.ಪಿ.ನಡ್ಡಾ, “ಈ ಘಟನೆ ಅತ್ಯಂತ ಗಂಭೀರವಾದದ್ದು, ಸದನದ ಘನತೆಗೆ ಧಕ್ಕೆಯಾಗಿದೆ. ಯಾವುದೇ ವಿಚಾರದಲ್ಲಿ ಸಿಟ್ಟು ತೋರಿಸುವುದು, ಯಾವುದೇ ವಿಷಯದ ಮೇಲೆ ಕೆಸರೆರಚಾಟ ಸರಿಯಲ್ಲ” ಎಂದು ಹೇಳಿದ್ದಾರೆ.