- ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರ ವಹಿಸಿಕೊಂಡಂತಾಗಿದೆ
- ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡುವವರು ಯಾರು?: ಯತ್ನಾಳ
ಕೇವಲ ಲೋಕಸಭಾ ಚುನಾವಣೆ ಸಲುವಾಗಿ ಯಾವನೋ ಒಬ್ಬ ಅರೆಹುಚ್ಚನನ್ನು ಪ್ರಧಾನಿ ಮಾಡಬೇಕೆಂದು ಈ ಹುಚ್ಚರು ಕೂಡಿ ದೇಶ ಹಾಳು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಈ ದೇಶದ ಜನರು ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಿಂದೂ, ಸನಾತನ ಧರ್ಮದ ಕುರಿತು ಡೆಂಗ್ಯೂ, ಮಲೇರಿಯಾ ಎನ್ನುವವರು ಕ್ರಾಸ್ಬ್ರೀಡ್ಗಳು. ಕರ್ನಾಟಕದಲ್ಲಿ ಮುಸ್ಲಿಮರನ್ನು ಪ್ರಚೋದನೆ ಮಾಡುವ ಕೆಲಸವನ್ನು ಸಿದ್ದರಾಮಯ್ಯರ ಸರ್ಕಾರ ಇವತ್ತು ಮಾಡುತ್ತಿದೆ” ಎಂದು ದೂರಿದರು.
“ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರ ವಹಿಸಿಕೊಂಡಂತಾಗಿದೆ. ಇವತ್ತು ನಡೆಯುತ್ತಿರುವ ಘಟನೆಗಳಿಂದ ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ” ಎಂದು ಹೇಳಿದರು.
“ರಾಜ್ಯದಲ್ಲಿ 11 ಕಡೆ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ಹಿಂದೂಗಳಿಂದ ಕಲ್ಲೆಸೆತ, ಚಾಕು, ಚೂರಿ ಪ್ರದರ್ಶನ ನಡೆದಿಲ್ಲ. ಪ್ರಚೋದನೆಯ ಘೋಷಣೆ ಕೇಳಿಲ್ಲ. ಆದರೆ, ಶಾಂತಿ ಸಂದೇಶ ಕೊಡುವ ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮೆಲ್ಲರನ್ನು ನಾಶ ಮಾಡುವುದಾಗಿ, ರಕ್ತ ಕುಡಿಯುವುದಾಗಿ ತಿಳಿಸಿದ್ದಾರೆ. ಇದು ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದಲ್ಲಿ ಸ್ವತಂತ್ರ ಮಾಧ್ಯಮದ ಪಾಲಿಗೆ ಇದು ಅತ್ಯಂತ ಕರಾಳ ಕಾಲ
“ಪ್ರಿಯಾಂಕ್ ಖರ್ಗೆಗೆ ನಾಚಿಕೆ ಆಗಬೇಕು. ಖರ್ಗೆಯವರು ಇದಕ್ಕೆ ಉತ್ತರ ಕೊಡಬೇಕು. ಹಿಂದೂಗಳ, ಸನಾತನದ ಬಗ್ಗೆ ಬಂದರೆ ಇವರು ಅಪ್ಪ- ಮಗ ಕೂಡಿ ಹೇಳಿಕೆ ಕೊಡುತ್ತಾರೆ. ಕೋಲಾರದಲ್ಲಿ ತಮ್ಮ ಸಮುದಾಯದ ಸಂಸದರ ವಿರುದ್ಧ ಎಸ್ಪಿ ಉದ್ಧಟತನದಿಂದ ವರ್ತಿಸಿದರೆ, ಕುತ್ತಿಗೆ ಪಟ್ಟಿ ಹಿಡಿದು ಹೊರಹಾಕಿದರೆ ಖರ್ಗೆ ಮಾತನಾಡಿಲ್ಲ. ಇದನ್ನು ತಾಲಿಬಾನಿ ಸರ್ಕಾರ ಎನ್ನದಿರಲು ಸಾಧ್ಯವೇ?” ಎಂದು ಹೇಳಿದರು.
“ಶಿವಮೊಗ್ಗದ ರಾಗಿಗುಡ್ಡದಲ್ಲಿ ಸಂಭಾವ್ಯ ಗಲಭೆಯ ಪೂರ್ಣ ಮಾಹಿತಿ ಪೊಲೀಸ್ ಇಲಾಖೆಗೆ ಇತ್ತು. ಅನುಮತಿ ಇಲ್ಲದೆ ಬೃಹತ್ ಖಡ್ಗ ಪ್ರತಿಷ್ಠಾಪಿಸಿದ್ದಾರೆ. ಅಖಂಡ ಭಾರತದ ನಕ್ಷೆಯಲ್ಲಿ ಹಸಿರು ಬಣ್ಣ ಬಳಿದು ಔರಂಗಜೇಬನನ್ನು ವೈಭವೀಕರಿಸಿದ್ದಾರೆ. ಇಷ್ಟೆಲ್ಲ ಆಗಲು ಪೊಲೀಸ್ ಇಲಾಖೆ ಬಿಟ್ಟಿದ್ಯಾಕೆ” ಎಂದು ಪ್ರಶ್ನಿಸಿದರು.
“ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ದಲಿತ ಶಾಸಕನ ಮನೆ ಮೇಲಿನ ಬೆಂಕಿ ಪ್ರಕರಣವನ್ನೂ ವಾಪಸ್ ಪಡೆಯಲು ಮುಂದಾಗಿದ್ದಾರೆ. ನೀವು ಕೇವಲ ಮುಸ್ಲಿಮರ ಮತದಿಂದಲೇ ಅಧಿಕಾರಕ್ಕೆ ಬಂದಿದ್ದೀರಾ?” ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿ ಟಿ ರವಿ, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಭಾಗಿಯಾಗಿದ್ದರು.