ಖಾಲಿ ಇಲ್ಲದ ಸಿಎಂ ಕುರ್ಚಿಗಾಗಿ ಕ್ಷುಲ್ಲಕ ರಾಜಕಾರಣದಲ್ಲಿ ಮುಳುಗೇಳಿ, ವ್ಯರ್ಥ ಹೇಳಿಕೆ ಕೊಡುವ ನಾಯಕರ ಸಂಖ್ಯೆ ಹೆಚ್ಚುತ್ತಿದೆ. ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕೂಡ ತಾವೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ.
ಕೊಪ್ಪಳ ನಗರದಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ಕೆಲವರು ಆಸೆ ಪಡುತ್ತಿದ್ದಾರೆ. ಆದರೆ ಬೇರೆಯವರಿಗೆ ಸಿಎಂ ಸ್ಥಾನ ಕೊಡುವುದಾದರೆ ನನಗೂ ಕೊಡಿ. ನಾನು ಪಕ್ಷದಲ್ಲಿ ಹಿರಿಯ ಇದ್ದೇನೆ. ಕಲ್ಯಾಣ ಕರ್ನಾಟಕ ಭಾಗ ಪರಿಗಣಿಸಿದರೆ ಸಿಎಂ ಸ್ಥಾನದಲ್ಲಿ ನಾನೇ ಮುಂಚೂಣಿಯಲ್ಲಿರುವೆ” ಎಂದರು.
ಆರ್ ವಿ ದೇಶಪಾಂಡೆ ಮುಖ್ಯಮಂತ್ರಿ ಸ್ಥಾನದ ಕುರಿತು ನೀಡಿದ ಹೇಳಿಕೆಯಲ್ಲಿ ಏನು ತಪ್ಪಿದೆ? ನಾನು ಕೂಡ ಲಿಂಗಾಯತ ನಾಯಕ. ಬಿ ಆರ್ ಪಾಟೀಲ್ ಮತ್ತು ನಾನು ಹಿರಿಯರಿದ್ದೇವೆ. ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ಕೊಡುವುದಾದರೆ ನನಗೆ ಕೊಡಲಿ” ಎಂದು ಹೇಳಿದರು.
ಹೈಕಮಾಂಡ್ ಬಯಸಿದ್ರೆ ನಾನೂ ಸಿಎಂ ಆಗುವೆ: ಸಚಿವ ಶರಣಬಸಪ್ಪ ದರ್ಶನಾಪುರ
ಯಾದಗಿರಿಯಲ್ಲಿ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ, “ಹೈಕಮಾಂಡ್ ಹೇಳಿದದರೆ ನಾನು ಸಿಎಂ ಆಗುತ್ತೇನೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗು ಅಂದರೆ ಸಿಎಂ ಆಗುವೆ. ಮನುಷ್ಯ ಅಂದಮೇಲೆ ಎಲ್ಲರಿಗೂ ಆಸೆಗಳು ಇರುತ್ತದೆ. ಆಸೆ ಇಲ್ಲದೆ ಇರೋರು ಮನುಷ್ಯನೇ ಅಲ್ಲ. ಆದರೆ, ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ” ಎಂದರು.
2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದಾಗ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆದು, ಕೊನೆಗೆ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಸಿಕ್ಕಿತು.
ಕೆಪಿಸಿಸಿ ಅಧ್ಯಕ್ಷರಾಗಿದ್ದು, ಪಕ್ಷ ಬಹುಮತ ಗಳಿಸಿದಾಗಲೂ ಮುಖ್ಯಮಂತ್ರಿ ಪಟ್ಟ ಸಿಗದೆ ಡಿಸಿಎಂ ಸ್ಥಾನಕ್ಕೆ ತಾತ್ಕಾಲಿಕವಾಗಿ ತೃಪ್ತಿಪಟ್ಟುಕೊಂಡಿರುವ ಡಿ ಕೆ ಶಿವಕುಮಾರ್ ಅವರು ಈಗಲೂ ಸಿಎಂ ಆಗುವ ಪ್ರಯತ್ನದ ಹಾದಿಯಲ್ಲೇ ಇದ್ದಾರೆ.
ಆದರೆ ಮುಡಾ ಪ್ರಕರಣ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಮೊದಲ್ಗೊಂಡು ಹಿರಿಯ ನಾಯಕ ಆರ್ ವಿ ದೇಶಪಾಂಡೆ, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ವರೆಗೆ ‘ನಾನೂ ಮುಖ್ಯಮಂತ್ರಿ ಅಭ್ಯರ್ಥಿ’ ಎನ್ನುವುದು ಸಾಮಾನ್ಯವಾಗಿದೆ.