- ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತ: ಉಗ್ರಪ್ಪ
- ‘ಬಿಜೆಪಿಗೂ ಬಸವಣ್ಣನವರ, ದಲಿತರ ವಿಚಾರಧಾರೆಗೂ ಸಂಬಂಧವಿಲ್ಲ’
ದಲಿತರ ಬಗ್ಗೆಯಾಗಲಿ ಅಥವಾ ಸಮಾಜದ ಯಾವುದೇ ವರ್ಗದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಬಿಜೆಪಿ ಕರ್ನಾಟಕದಲ್ಲಿ ಒಡೆದ ಮನೆ, ಚುನಾವಣೆ ನಡೆದು ಮೂರು ತಿಂಗಳಾದರೂ ವಿರೋಧ ಪಕ್ಷದ, ವಿಧಾನಪರಿಷತ್ ನಾಯಕನಿಲ್ಲ. ಇದೆಲ್ಲ ನೋಡಿದರೆ ಬಿಜೆಪಿಯಲ್ಲಿ ಏನೂ ಸರಿಯಿಲ್ಲ” ಎಂದು ತಿಳಿಸಿದರು.
“ಬಸವಣ್ಣ ಅವರು ಶ್ರೇಣಿಕೃತ ವ್ಯವಸ್ಥೆಯ ವಿರುದ್ದ ದನಿ ಎತ್ತಿದವರು. ವರ್ಗರಹಿತ, ಜಾತಿ ರಹಿತ ಸಮಾಜದ ನಿರ್ಮಾಣಕ್ಕೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದವರು. ಆದರೆ ಇಂದು ಭಾರತೀಯ ಜನತಾ ಪಾರ್ಟಿಯವರು ಲಿಂಗಾಯತ ಹಾಗೂ ದಲಿತರ ಬಗ್ಗೆ ಮಾತನಾಡಲು ಪ್ರಾರಂಭ ಮಾಡಿದ್ದಾರೆ. ಆರ್ಎಸ್ಎಸ್ನ ಎರಡನೇ ಸರಸಂಚಾಲಕರಾದ ಗೋಳ್ವಾಲ್ಕರ್ ಅವರ “ಬಂಚ್ ಆಫ್ ಥಾಟ್ಸ್” ಅಲ್ಲಿ ಶ್ರೇಣೀಕೃತ ಸಮಾಜದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಬಿಜೆಪಿಯವರಿಗೂ ಬಸವಣ್ಣನವರ, ದಲಿತರ ವಿಚಾರಧಾರೆಗೂ ಯಾವುದೇ ಸಂಬಂಧವಿಲ್ಲ” ಎಂದರು.
“ಕಾಂಗ್ರೆಸ್ನಲ್ಲಿ ವೀರಶೈವರಿಗೆ ಸ್ಥಾನಮಾನ ಕೊಟ್ಟಿಲ್ಲ ಎಂದು ಹೇಳುತ್ತಾರೆ. ವೀರೇಂದ್ರ ಪಾಟೀಲರು ನಮ್ಮ ರಾಜ್ಯದ ಗೌರವಾನ್ವಿತ ನಾಯಕರು, ಇಂದಿರಾ ಗಾಂಧಿ ಅವರ ವಿರುದ್ದ ಚಿಕ್ಕಮಗಳೂರಿನಲ್ಲಿ ಸೋತ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು, ಕೇಂದ್ರದ ಮಂತ್ರಿ ಮಾಡಲಾಯಿತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ, ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದು ಕಾಂಗ್ರೆಸ್” ಎಂದು ಹೇಳಿದರು.
“ದಲಿತರ ವಿಚಾರವಾಗಿ ಬಿಜೆಪಿಯವರು ಸುಳ್ಳು ಹೇಳುತ್ತಾರೆ. ನಮ್ಮ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ, ಕೇಂದ್ರ ಸಚಿವರನ್ನಾಗಿ, ವಿರೋಧ ಪಕ್ಷದ ನಾಯಕನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಮಹಾರಾಷ್ಟ್ರದಲ್ಲಿ, ಪಂಜಾಬಿನಲ್ಲಿ ದಲಿತರನ್ನು ಮುಖ್ಯಮಂತ್ರಿಗಳಾನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿ ಇರುವ ಪ್ರಮುಖ ದಲಿತ ನಾಯಕರ ಹೆಸರು ಹೇಳುತ್ತಾ ಹೋದರೆ ಅವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಬಂದವರು. ರಾಜ್ಯಪಾಲರನ್ನಾಗಿ, ಲೋಕಸಭಾ ಸ್ಪೀಕರ್ ಗಳನ್ನಾಗಿ ಮಾಡಿ ಕಾಂಗ್ರೆಸ್ ಪಕ್ಷ ದಲಿತರಿಗೆ ಗೌರವ ನೀಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೌರಿ ಲಂಕೇಶ್ ಹಂತಕರಿಗೆ ಶೀಘ್ರವೇ ದೊರೆಯಲಿ ಶಿಕ್ಷೆಯ ಮೋಕ್ಷ!
“ಬಿಜೆಪಿಯುವರು ಬಂಗಾರು ಲಕ್ಷ್ಮಣ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರು. ಅವರು ಯಾರ ಬಳಿಯೋ 5 ಲಕ್ಷ ಹಣ ಪಡೆದರು ಎಂದು ರಾಜಕೀಯವಾಗಿ ಅವರನ್ನು ಮುಗಿಸಲಾಯಿತು. ಗೋವಿಂದ ಕಾರಜೋಳ ಅವರೇ ನಿಮಗೆ ಸಾಮಾಜಿಕ ನ್ಯಾಯದ ಬಗ್ಗೆ ಬದ್ದತೆ ಇಲ್ಲ. ನೀವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಕಾಂತರಾಜು ಆಯೋಗದ ಜಾತಿ ಗಣತಿ ವರದಿಯನ್ನು ಏಕೆ ಜಾರಿಗೆ ತರಲಿಲ್ಲ” ಎಂದು ಪ್ರಶ್ನಿಸಿದರು.
“ಬಿಜೆಪಿಯವರ ನಾಯಕತ್ವ ಕರ್ನಾಟಕದಲ್ಲಿ ವಿಫಲಾಗಿದೆ, ಒಡೆದ ಮನೆಯಾಗಿ ಯಾರು ನಾಯಕರಿಲ್ಲದೇ, ಕಾಂಗ್ರೆಸ್ ಸರ್ಕಾರದ ವಿರುದ್ದ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಜನ ಬುದ್ದಿವಂತರಿದ್ದು ಬಿಜೆಪಿಯವರ ಮಾತನ್ನು ನಂಬುವುದಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿಯನ್ನು ರಾಷ್ಟ- ರಾಜ್ಯದಲ್ಲಿ ಸೋಲಿಸಲಿದ್ದಾರೆ” ಎಂದು ಕಿಡಿಕಾರಿದರು.
“ಅಧಿಕಾರಕ್ಕೆ ಬಂದು 9 ವರ್ಷಗಳಾದರೂ ಮೋದಿಯವರು ಒಂದೇ ಒಂದು ಆಶ್ವಾಸನೆ ಈಡೇರಿಸಿಲ್ಲ. ಅದಕ್ಕೆ ಇಂಡಿಯಾವನ್ನು ಭಾರತ ಎಂದು ಬದಲಾಯಿಸಲು ಹೊರಟಿದ್ದಾರೆ. ಬಿಜೆಪಿಗೆ ಕಾರ್ಯಕ್ರಮಗಳನ್ನು ನೀಡಲು ತಾಕತ್ತಿಲ್ಲ. ಅದಕ್ಕೆ ಹೆಸರು ಬದಲಾವಣೆ ರಾಜಕೀಯ ಮಾಡುತ್ತಿದ್ದಾರೆ. ಬಹಳ ಶಿಸ್ತು ಇರುವ ಪಕ್ಷ ಎಂದು ಹೇಳುತ್ತಾರೆ. ಆದರೆ ಅಶಿಸ್ತಿನಿಂದ ಬಿಜೆಪಿ ಮೂಲೆ ಸೇರುತ್ತಿದೆ” ಎಂದು ಟೀಕಿಸಿದರು.