“ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧದ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ಏನೂ ನಡೆದಿಲ್ಲ ಎಂದು ಪೊಲೀಸರು ತಿಳಿಸಿ, ಬಿ ರಿಪೋರ್ಟ್ ಹಾಕುವ ಹಂತದಲ್ಲಿರುವಾಗ ಏಕಾಏಕಿ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ, ಕೇಸಿಗೆ ಜೀವ ಕೊಟ್ಟವರು ಯಾರು?” ಎಂದು ವಿಧಾನಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿ ಟಿ ರವಿ ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜಕೀಯ ಕಾರಣಕ್ಕೆ ಈ ಪ್ರಕರಣವನ್ನು ಬಳಸುವ ಅನುಮಾನ ವ್ಯಕ್ತವಾಗಿದೆ. ಹಾಗಿಲ್ಲದೇ ಇದ್ದಿದ್ದರೆ, ಮೂರು ತಿಂಗಳ ಕಾಲ ಪ್ರಕರಣಕ್ಕೆ ಇಲ್ಲದ ಜೀವ ಈಗ ಯಾಕೆ ಬಂತು? ಇದಕ್ಕೆ ಪರಕಾಯ ಪ್ರವೇಶ ಮಾಡಿದವರು ಯಾರು? ದೂರುದಾರೆಯು ಈ ಥರ 50ಕ್ಕೂ ಹೆಚ್ಚು ಗಣ್ಯರ ಮೇಲೆ ದೂರು ನೀಡಿದ್ದರು ಎಂದು ಗೃಹ ಸಚಿವರೇ ಸಾರ್ವಜನಿಕವಾಗಿ ಹೇಳಿದ್ದಾರೆ” ಎಂದರು.
“ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದಾಖಲಾಗಿರುವ ದೂರಿಗೆ ಸಂಬಂಧಿಸಿ ಸರಕಾರದ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮಾರ್ಚ್ 14ರಂದು ಅವರ ಮೇಲೆ ದೂರು ದಾಖಲಾಗಿತ್ತು. ಫೆಬ್ರವರಿ 2ರಂದು ಈ ಪ್ರಕರಣ ನಡೆದಿರುವುದಾಗಿ ಆರೋಪಿಸಲಾಗಿದೆ. ಯಡಿಯೂರಪ್ಪ ಅವರು ಸಿಐಡಿ ಮುಂದೆ ಏಪ್ರಿಲ್ 12ರಂದು ಹಾಜರಾಗಿ ಹೇಳಿಕೆಯನ್ನೂ ನೀಡಿದ್ದಾರೆ. ಯಡಿಯೂರಪ್ಪ ಅವರ ಮೇಲಿನ ಮೊಕದ್ದಮೆಯನ್ನು ರಾಜ್ಯದ ಕಾಂಗ್ರೆಸ್ ಸರಕಾರವು ರಾಜಕೀಯದ ದೃಷ್ಟಿಯಿಂದ ನೋಡುತ್ತಿದೆ” ಎಂದು ಸಿಟಿ ರವಿ ಆರೋಪಿಸಿದರು.
“ಗೃಹ ಸಚಿವರ ಅಂದಿನ ಹೇಳಿಕೆಗೂ, ಇಂದಿನ ಹೇಳಿಕೆಗೂ ಬಹಳಷ್ಟು ವ್ಯತ್ಯಾಸ ಇದೆ. ಅವತ್ತು ಅವರು ದೂರುದಾರರ ವ್ಯಕ್ತಿತ್ವವನ್ನೇ ಅನಾವರಣಗೊಳಿಸಿದ್ದರು. ಇಂದು ಅವರು, ಅಗತ್ಯ ಇದ್ದರೆ ಬಂಧಿಸುತ್ತೇವೆ ಎಂದಿದ್ದಾರೆ. ಸರಕಾರದ ನಿಲುವು ಬದಲಾಗಲು ಕಾರಣ ಏನು? ಲೋಕಸಭಾ ಚುನಾವಣೆಯ ಸೋಲು ಕಾರಣವೇ? ಸಿಎಂ, ಉಪ ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲೇ ಸೋತಿದ್ದು ಒಂದು ಕಾರಣ ಇರಬಹುದೇ? ಉಪ ಮುಖ್ಯಮಂತ್ರಿಯವರ ಸೋದರನ ಸೋಲಿನ ಆಘಾತ ಈ ರೀತಿ ನಿಲುವು ಬದಲಾಗಲು ಕಾರಣವೇ?” ಎಂದು ಸಿ.ಟಿ.ರವಿ ಪ್ರಶ್ನಿಸಿದರು.
“ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಅದರಿಂದ ಆಗಿರುವ ಮುಖಭಂಗ, ಆ ಲೂಟಿಯನ್ನು ಮುಚ್ಚಿ ಹಾಕಲು ಸಂಚು ನಡೆದಿದ್ದು, ಬಿಜೆಪಿ ಅದನ್ನು ಬಯಲಿಗೆ ಎಳೆದುದು, ಅದರಿಂದ ಸಚಿವ ರಾಜೀನಾಮೆ ಕೊಡಲು ಕಾರಣವಾದುದು. ಈ ಹತಾಶೆಯಿಂದ ಹೀಗೆ ಮಾಡುತ್ತಿರಬಹುದೇ? ಅಥವಾ ರಾಹುಲ್ ಗಾಂಧಿ, ಸುರ್ಜೇವಾಲಾ ಅವರ ಒತ್ತಡ ಇದರ ಹಿಂದೆ ಇದೆಯೇ” ಎಂದು ಪರಿಷತ್ ಸದಸ್ಯ ಸಿ ಟಿ ಕೇಳಿದರು.
“ನಮ್ಮ ಮೇಲಿನ ಒಂದು ಸುಳ್ಳು ಆರೋಪ ಸಂಬಂಧಿತ ಪ್ರಕರಣಕ್ಕೆ ಸಿಎಂ, ಡಿಸಿಎಂ, ರಾಹುಲ್ ಗಾಂಧಿಯವರು ನ್ಯಾಯಾಲಯದ ಕಟಕಟೆಗೆ ಬಂದು ನಿಲ್ಲಬೇಕಾಯಿತು. ಶೇ 40 ಆರೋಪ ಸಾಬೀತು ಮಾಡಲು ಅವರಿಂದ ಅಸಾಧ್ಯ. ಅವರಿಗೆ ಶಿಕ್ಷೆ ಆಗುವ ಸಾಧ್ಯತೆಯೂ ಇದೆ. ಬಹುಶಃ ಆ ಕಾರಣಕ್ಕಾಗಿ ಹತಾಶೆಯಿಂದ ಯಡಿಯೂರಪ್ಪನವರ ಮೇಲೆ ರಾಜಕೀಯ ದುರುದ್ದೇಶದಿಂದ ಸೇಡು ತೀರಿಸಿಕೊಳ್ಳಬೇಕು ಅಥವಾ ಮಾನಸಿಕವಾಗಿ ಕುಗ್ಗಿಸಬೇಕೆಂದು ಈ ಸಂಚು ಮಾಡಿದ್ದಾರೆ ಕಾಣಬೇಕು” ಎಂದು ಸಿ ಟಿ ರವಿ ಅನುಮಾನಿಸಿದರು.
ಇದನ್ನು ಓದಿದ್ದೀರಾ? ಪೋಕ್ಸೋ ಪ್ರಕರಣ | ಬಿಎಸ್ವೈ ಬಂಧಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ
“ಒಬ್ಬ ಪ್ರಭಾವಿ ಸಚಿವರು ಈ ಪ್ರಕರಣ ಜೀವ ಪಡೆಯಲು ಕಾರಣರಾಗಿದ್ದಾರೆ ಎಂಬ ಮಾಹಿತಿ ಕೂಡ ಅಧಿಕಾರಿಗಳ ಮೂಲಕ ಬಂದಿದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲು ನಮ್ಮ ಅಡ್ಡಿ ಇಲ್ಲ” ಎಂದ ಸಿ ಟಿ ರವಿ, “ರಾಜಕೀಯ ದುರುದ್ದೇಶದಿಂದ ಹೀಗೆ ಮಾಡಿದರೆ ಅದರ ಪರಿಣಾಮ ಸರ್ಕಾರಕ್ಕೆ ತಿರುಗುಬಾಣವಾಗಲಿದೆ. ರಾಜಕೀಯ ಲಾಭ ಸಿಗದು, ಆದರೆ ನಷ್ಟವಾಗಲಿದೆ. ತಪ್ಪು ಮಾಡಿದಿದ್ದರೆ ಭಯಪಡಬೇಕು. ತಪ್ಪೇ ಇಲ್ಲದಿದ್ದರೆ ಭಯ ಯಾಕಿರಬೇಕು” ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
