- ಥರ್ಮಾಕೋಲ್ ತೆಪ್ಪ ಬಳಸಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು
- ಆಗಸ್ಟ್ 27ರಂದು ವರದಿ ಪ್ರಕಟಿಸಿದ್ದ ಆಂಗ್ಲಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’
ಶಾಲೆಗೆ ತೆರಳುವುದಕ್ಕಾಗಿ ವಿದ್ಯಾರ್ಥಿಗಳು ಹಾವುಗಳೇ ತುಂಬಿರುವ ಅಣೆಕಟ್ಟಿನ ಜಲಾಶಯವನ್ನು ಥರ್ಮಾಕೋಲ್ ತೆಪ್ಪ ಬಳಸಿ ದಾಟುತ್ತಿರುವುದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸ್ವಯಂಪ್ರೇರಿತ(ಸುಮೋಟೋ) ವಿಚಾರಣೆಗೆ ಮುಂದಾಗಿದೆ ಎಂದು ‘ಬಾರ್ & ಬೆಂಚ್’ ವರದಿ ಮಾಡಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಭಿವ್ ಧನೋರಾ ಗ್ರಾಮದ ಮಕ್ಕಳು ಥರ್ಮಾಕೋಲ್ ತೆಪ್ಪ ಬಳಸಿ ದಾಟುತ್ತಿದ್ದ ವಿಡಿಯೋ ಕಳೆದ ವಾರ ದೇಶಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಸ್ವಯಂಪ್ರೇರಿತ ವಿಚಾರಣೆಗೆ ಮುಂದಾಗಿದೆ ಎಂದು ವರದಿಯಾಗಿದೆ.

ಅಲ್ಲದೇ, ಈ ಸಂಬಂಧ ಆಂಗ್ಲಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಕಳೆದ ಆಗಸ್ಟ್ 27ರಂದು ಪ್ರಕಟಿಸಿದ್ದ ಸುದ್ದಿಯನ್ನು ನ್ಯಾಯಮೂರ್ತಿಗಳಾದ ರವೀಂದ್ರ ವಿ ಘುಗೆ ಮತ್ತು ವೈ ಜಿ ಖೋಬ್ರಾಗಡೆ ಅವರಿದ್ದ ವಿಭಾಗೀಯ ಪೀಠ ಗಮನಿಸಿತ್ತು.
ಔರಂಗಾಬಾದ್ ಜಿಲ್ಲೆಯ ಭಿವ್ ಧನೋರಾ ಗ್ರಾಮದ 15 ಮಕ್ಕಳು ಪ್ರತಿದಿನ ಥರ್ಮಾಕೋಲ್ಗಳ ಮೇಲೆ ಕುಳಿತು ಜೈಕ್ವಾಡಿ ಅಣೆಕಟ್ಟು ಜಲಾಶಯ ದಾಟಿ ಶಾಲೆಗೆ ಹೋಗುತ್ತಿರುವ ಬಗ್ಗೆ ವರದಿ ಪ್ರಕಟವಾಗಿತ್ತು.
ನೀರಿನಲ್ಲಿ ವಿಷಪೂರಿತ ಹಾವುಗಳು ಇರುವುದರಿಂದ ಪರಿಸ್ಥಿತಿ ಭಯಾನಕವಾಗಿದೆ ಎಂದು ಇಬ್ಬರು ಮಕ್ಕಳ ತಂದೆ ‘ಟೈಮ್ಸ್ ಆಫ್ ಇಂಡಿಯಾ’ ವರದಿಗಾರರಿಗೆ ಮಾಹಿತಿ ನೀಡಿ, ತಮ್ಮ ಮಕ್ಕಳ ಕಷ್ಟವನ್ನು ತಿಳಿಸಿದ್ದರು.

“ನನ್ನ ಮಕ್ಕಳು ನನ್ನಂತೆ ಅನಕ್ಷರಸ್ಥರಾಗಲು ನಾನು ಬಯಸುವುದಿಲ್ಲ. ಥರ್ಮಾಕೋಲ್ ಶೀಟ್ ಬಳಸಿ ನನ್ನ ಮಗಳು ಮತ್ತು ಮಗ ಶಾಲೆಗೆ ಹೋಗುತ್ತಿದ್ದಾರೆ. ನೀರಿನಲ್ಲಿ ವಿಷಕಾರಿ ಹಾವುಗಳಿರುವುದು ಭಯ ಹುಟ್ಟಿಸುತ್ತದೆ” ಎಂದು ವಿದ್ಯಾರ್ಥಿಯೋರ್ವರ ತಂದೆ ವಿವರಿಸಿದ್ದರು.
ಅಣೆಕಟ್ಟು ನಿರ್ಮಾಣವಾದ 47 ವರ್ಷಗಳಿಂದ ಇದೇ ಪರಿಸ್ಥಿತಿ ಇದೆ ಎಂಬುದನ್ನು ಗಮನಿಸಿರುವ ಬಾಂಬೆ ಹೈಕೋರ್ಟ್, ಪಿಐಎಲ್ ಅರ್ಜಿ ಸಿದ್ಧಪಡಿಸುವ ಸಂಬಂಧ ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲ ಪುಷ್ಕರ್ ಶೆಂಡೂರ್ನಿಕರ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವರದಿ ಪ್ರಕಟಿಸಿದ್ದ ಟೈಮ್ಸ್ ಆಫ್ ಇಂಡಿಯಾದ ವರದಿಗಾರರನ್ನು ಸಂಪರ್ಕಿಸಲು ಅಮಿಕಸ್ ಕ್ಯೂರಿ ಅವರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ.
ಶೆಂಡೂರ್ನಿಕರ್ ಅವರು ಸೆಪ್ಟೆಂಬರ್ 4 ರಂದು (ಇಂದು) ಮನವಿ ಸಲ್ಲಿಸಲಿದ್ದು ನ್ಯಾಯಾಲಯ ಮುಂದಿನ ನಿರ್ದೇಶನಗಳನ್ನು ನೀಡಲಿದೆ ಎಂದು ‘ಬಾರ್ & ಬೆಂಚ್’ ತಿಳಿಸಿದೆ.
ಜನವರಿ 2022 ರಲ್ಲಿ, ಸತಾರಾ ಜಿಲ್ಲೆಯ ಖಿರ್ಖಂಡಿ ಗ್ರಾಮದ ಹೆಣ್ಣುಮಕ್ಕಳು ಶಾಲೆ ತಲುಪಲು ಕೊಯ್ನಾ ಅಣೆಕಟ್ಟು ಜಲಾಶಯದಲ್ಲಿ ತಾವೇ ದೋಣಿ ಹುಟ್ಟು ಹಾಕುತ್ತಿದ್ದಾರೆ ಎಂಬ ವರದಿ ಆಧರಿಸಿ ಹೈಕೋರ್ಟ್ ಪ್ರಧಾನ ಪೀಠ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
ಹೆಣ್ಣು ಮಕ್ಕಳಿಗೆ ಸುರಕ್ಷಿತ ಮತ್ತು ಸೌಹಾರ್ದಯುತ ವಾತಾವರಣ ಕಲ್ಪಿಸಿದರೆ ಮಾತ್ರ ‘ಬೇಟಿ ಬಚಾವೋ, ಬೇಟಿ ಪಡಾವೋ'(ಹೆಣ್ಣು ಮಗುವನ್ನು ರಕ್ಷಿಸಿ, ಶಿಕ್ಷಣ ನೀಡಿ) ಎಂಬ ಘೋಷವಾಕ್ಯದ ಧ್ಯೇಯ ಸಾಕಾರಗೊಳ್ಳಲಿದೆ ಎಂದು ಅದು ಬುದ್ಧಿಮಾತು ಕೂಡ ಹೇಳಿತ್ತು. ಮಕ್ಕಳು ಶಾಲೆಗಳಿಗೆ ಯಾವುದೇ ತೊಂದರೆ ಎದುರಿಸದೆ ಹೋಗುವಂತಾಗಲು ಉತ್ತಮ ರಸ್ತೆಗಳನ್ನು ನಿರ್ಮಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.