ಚಿತ್ರ: ಸಪ್ತ ಸಾಗರದಾಚೆ ಎಲ್ಲೋ | ನಿರ್ದೇಶನ: ಹೇಮಂತ್ ರಾವ್ | ತಾರಾಗಣ: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ | ಭಾಷೆ: ಕನ್ನಡ | ಸಂಗೀತ ನಿರ್ದೇಶನ: ಚರಣ್ ರಾಜ್ | ನಿರ್ಮಾಪಕರು: ರಕ್ಷಿತ್ ಶೆಟ್ಟಿ |
ಈ ಹಿಂದೆ ʼಗೋಧಿಬಣ್ಣ ಸಾಧಾರಣ ಮೈಕಟ್ಟುʼ ಸಿನಿಮಾ ಮೂಲಕ ಕನ್ನಡದ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಜೋಡಿ ಇದೀಗ ʼಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಎದುರುಗೊಂಡಿದೆ.
ಅಮಾಯಕ ಕಾರು ಚಾಲಕ ಮನು ಮತ್ತವನ ಮುಗ್ಧ ಪ್ರೀತಿಯ ಸುತ್ತ ಇಡೀ ಚಿತ್ರದ ಕತೆಯನ್ನು ಭಾವನಾತ್ಮಕವಾಗಿ ಹೆಣೆಯಲಾಗಿದೆ. ನಾಯಕನ ಮುಗ್ದತೆಯೇ ಈ ಚಿತ್ರದ ಜೀವಾಳ. ಕಡಲ ತೀರದಲ್ಲೊಂದು ಚೆಂದದ ಮನೆ ಕಟ್ಟಿಕೊಂಡು ತನ್ನ ಪ್ರೇಯಸಿಯ ಜೊತೆ ಸರಳವಾಗಿ ಬದುಕಬೇಕು ಎಂದುಕೊಂಡಿದ್ದ ಹುಡುಗ ಹುಂಬುತನಕ್ಕೆ ಬಿದ್ದು ಜೈಲು ಸೇರಿದಾಗ ಏನಾಗುತ್ತದೆ ಎಂಬುದರ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಚಿತ್ರದ ಮೊದಲಾರ್ಧ ಪ್ರೇಕ್ಷಕರ ತಾಳ್ಮೆಯನ್ನು ಬೇಡುತ್ತದೆ. ಇಂಟರ್ವಲ್ ಬಳಿಕ ಇಡೀ ಚಿತ್ರದ ಕಥೆ ಆಪ್ತವಾಗುತ್ತಾ ಸಾಗುತ್ತದೆ. ಕೊನೆಯ 20 ನಿಮಿಷಗಳಂತೂ ನೋಡುಗರನ್ನು ಭಾವನೆಗಳ ಅಲೆಯಲ್ಲಿ ತೇಲಿಸುತ್ತದೆ.
ಈ ಸಿನಿಮಾದ ಕಥೆ ಬಡ ಮತ್ತು ಮಧ್ಯಮ ವರ್ಗದ ಜನರ ಆಸೆಕಂಗಳ ಬದುಕಿಗೆ ಹಿಡಿದ ವಾಸ್ತವದ ಕನ್ನಡಿ ಎಂದರೆ ತಪ್ಪಾಗಲಾರದು. ಅಸಹಾಯಕ ಮಂದಿಯ ಒಂದೇ ಒಂದು ಎಡವಟ್ಟು ಅವರ ಇಡೀ ಬದುಕಿನ ದಿಕ್ಕನ್ನೇ ಬದಲಿಸಿ ಪ್ರಪಾತಕ್ಕೆ ನೂಕಬಲ್ಲದು ಎಂಬ ಸಂದೇಶವನ್ನು ನಿರ್ದೇಶಕರು ಭಾವುಕತೆಯೊಂದಿಗೆ ತೆರೆಗೆ ಅಳವಡಿಸಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಸಾಹಸ, ಸೆಂಟ್ರಲ್ ಜೈಲುಗಳ ಕರಾಳತೆ ಎಲ್ಲವೂ ಕಣ್ಣಿಗೆ ರಾಚುವಂತಿದೆ.
ನಿಧಾನಗತಿಯ ನಿರೂಪಣೆ ಈ ಚಿತ್ರದ ದೌರ್ಬಲ್ಯ. ತಲೆ ಮೇಲೆ ನಮ್ಮದೇ ಆದ ಸೂರು ಬೇಕು ನಿಜ. ಆದರೆ, ಆ ಸೂರಿಗಾಗಿ ಚೆಂದದ ಬದುಕನ್ನೇ ಬಲಿಕೊಡುವ ಕಲ್ಪನೆ, ಅದಕ್ಕೆ ನಾಯಕನ ಹುಂಬುತನವನ್ನೇ ಹೊಣೆಯಾಗಿಸಿ ಕಟಕಟೆಯಲ್ಲಿ ನಿಲ್ಲಿಸುವ ಪರಿಯನ್ನು ಒಪ್ಪಲಾಗದು. ಮನುಷ್ಯನಿಗೆ ಬದುಕು ಮುಖ್ಯವಾಗಬೇಕು. ಸ್ವಂತದ ಮನೆ, ಮಠಗಳ ಮಾತೆಲ್ಲವೂ ಆನಂತರದ್ದು.
ಈ ಸುದ್ದಿ ಓದಿದ್ದೀರಾ? ನೂರರ ನೆನಪು | ಸ್ಮರಿಸಲೇಬೇಕಾದ ಶೈಲೇಂದ್ರ ಎಂಬ ಜೀವಪರ ದನಿ
ಮನು ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಜೀವಿಸಿದ್ದಾರೆ. ಅವರ ವೃತ್ತಿ ಬದುಕಿನ ಅತ್ಯುತ್ತಮ ಪಾತ್ರ ನಿರ್ವಹಣೆಯಲ್ಲಿ ಇದು ಕೂಡ ಒಂದು. ತನ್ನ ಮುಗ್ದ ಪ್ರೀತಿಯ ಉಳಿವಿಗಾಗಿ ಹೋರಾಡುವ ಅಸಹಾಯಕ ಪ್ರಿಯಾಳ ಪಾತ್ರದಲ್ಲಿ ರುಕ್ಮಿಣಿ ಗಮನ ಸೆಳೆಯುತ್ತಾರೆ. ಅವಿನಾಶ್, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪವಿತ್ರಾ ಲೋಕೇಶ್ ಅವರುಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವೇ ಇಲ್ಲ. ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಅವರ ಪಾತ್ರಗಳು ಹಿಡಿಸುತ್ತವೆ.
ಚಿತ್ರದ ʼಟೈಟಲ್ ಟ್ರ್ಯಾಕ್ʼ ಗುನುಗುವಂತಿದೆ. ಚರಣ್ ರಾಜ್ ಅವರ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಚಿತ್ರಕಥೆಗೆ ಪೂರಕವಾಗಿದೆ. ನಿರೂಪಣೆ ನಿಧಾನ ಎನ್ನುವುದನ್ನು ಬಿಟ್ಟರೆ ʼಸಪ್ತ ಸಾಗರದಾಚೆ ಎಲ್ಲೋʼ ಒಮ್ಮೆ ನೋಡಬಹುದಾದ ಸಿನಿಮಾ.