2019ರಲ್ಲಿ ಮೈಸೂರಿನ ನಗರದ ಕೆ.ಆರ್. ಠಾಣೆಯ ರೌಡಿಗಳ ಪಟ್ಟಿಯಲ್ಲಿ ಸ್ನೇಹಮಯಿ ಕೃಷ್ಣ ಹೆಸರು ಸೇರಿಸಲಾಗಿದೆ. ವಂಚನೆ, ಬೆದರಿಕೆ ಮೊದಲಾದ ಆರೋಪಗಳ ಮೇಲೆ ಮೈಸೂರು ನಗರ ವ್ಯಾಪ್ತಿಯಲ್ಲಿ 17 ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಅಕ್ರಮ ಬಯಲಿಗೆಳೆದು, ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ಹಲವು ರಾಜಕಾರಣಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈಗ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿದ್ದಾರೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಮೈಸೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ಆದರೆ, ಶಿಕ್ಷೆಯ ಪ್ರಮಾಣ ಶುಕ್ರವಾರ ಪ್ರಕಟವಾಗುವ ಸಾಧ್ಯತೆ ಇದೆ.
ಪತ್ರಿಕೆ ನಡೆಸಲು ಹಾಗೂ ಗೃಹೋಪಯೋಗಕ್ಕಾಗಿ ಲಲಿತಾದ್ರಿಪುರದ ಕುಮಾರ್ ಎಂಬವರಿಂದ ಸ್ನೇಹಮಯಿ ಕೃಷ್ಣ 2015ರಲ್ಲಿ ಸಾಲ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಮರ್ಚೆಂಟ್ಸ್ ಕೋ–ಆಪರೇಟಿವ್ ಬ್ಯಾಂಕ್ನ ಚೆಕ್ ನೀಡಿದ್ದರು. ಕುಮಾರ್ ಅದನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿದಾಗ ಬೌನ್ಸ್ ಆಗಿತ್ತು. ನಂತರ ಅವರು ಸ್ನೇಮಹಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪ ಸಾಬೀತಾಗಿದ್ದರಿಂದ ಚೆಕ್ ಬೌನ್ಸ್ಗೆ ಸಂಬಂಧಿಸಿದಂತೆ ಹಣ ಪಾವತಿ ಮಾಡಬೇಕು ಅಥವಾ ಆರು ತಿಂಗಳು ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ.
ರೌಡಿ ಪಟ್ಟಿಯಲ್ಲಿ ಸ್ನೇಹಮಯಿ ಕೃಷ್ಣ ಹೆಸರು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗುವಂತೆ ಮಾಡುವ ಮೂಲಕ ಸ್ನೇಹಮಯಿ ಕೃಷ್ಣ ಸದ್ಯ ಸುದ್ದಿಯಲ್ಲಿರುವ ವ್ಯಕ್ತಿ. ತಾವೇ ಹೇಳಿಕೊಳ್ಳುವಂತೆ ‘ನ್ಯಾಯಕ್ಕಾಗಿ ನಿರಂತರ ಹೋರಾಟ’ ಎನ್ನುವ ಸ್ನೇಹಮಯಿ ಕೃಷ್ಣ ಅವರಿಗೆ ಕ್ರಿಮಿನಲ್ ಹಿನ್ನೆಲೆಯೂ ಅಂಟಿಕೊಂಡಿದೆ.
2019ರಲ್ಲಿ ಮೈಸೂರಿನ ನಗರದ ಕೆ.ಆರ್. ಠಾಣೆಯ ರೌಡಿಗಳ ಪಟ್ಟಿಯಲ್ಲಿ ಸ್ನೇಹಮಯಿ ಕೃಷ್ಣ ಹೆಸರು ಸೇರಿಸಲಾಗಿದೆ. ವಂಚನೆ, ಬೆದರಿಕೆ ಮೊದಲಾದ ಆರೋಪಗಳ ಮೇಲೆ ಮೈಸೂರು ನಗರ ವ್ಯಾಪ್ತಿಯಲ್ಲಿ 17 ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗಿದ್ದು, ಇನ್ನೂ ಕೆಲವು ವಿಚಾರಣೆಯ ಹಂತದಲ್ಲಿವೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸ್ನೇಹಮಯಿ ಕೃಷ್ಣ & ಗಂಗರಾಜು ಭಾವಚಿತ್ರಕ್ಕೆ ರಕ್ತಾಭಿಷೇಕ, ಪ್ರಕರಣ ತಡವಾಗಿ ಬೆಳಕಿಗೆ
ಮೈಸೂರು ನಗರದ ಬಂಡಿಪಾಳ್ಯ ನಿವಾಸಿಯಾದ ಸ್ನೇಹಮಯಿ ಕಷ್ಣ ಎರಡು ದಶಕಗಳಿಂದ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಪತ್ರಿಕೋದ್ಯಮ, ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ಕಾನೂನು ಹೋರಾಟ ಕೈಗೊಂಡಿರುವ ಇವರು ಮೈಸೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಆಂಟೊ ಕೊಲೆ ಪ್ರಕರಣದಲ್ಲಿ ಪೊಲೀಸರು ನಿರಪರಾಧಿಗಳನ್ನು ಆರೋಪಿಗಳನ್ನಾಗಿ ಮಾಡಿ ನಿಜವಾದ ಆರೋಪಿಗಳನ್ನು ರಕ್ಷಿಸಿದ್ದ ಪ್ರಕರಣದಲ್ಲಿ ಅಮಾಯಕರ ಪರ ಹೋರಾಟ ನಡೆಸಿ ಗಮನ ಸೆಳೆದಿದ್ದರು. ಹಾಗೆಯೇ ಮೈಸೂರು ತಾಲ್ಲೂಕಿನ ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ಪೊಲೀಸರ ವಿರುದ್ಧವೇ ಕಳ್ಳತನದ ಪ್ರಕರಣ ದಾಖಲಾದಾಗ, ಪೊಲೀಸರ ಪರವಾಗಿ ನಿಂತು ನ್ಯಾಯ ದೊರಕಿಸಿಕೊಟ್ಟ ಉದಾಹರಣೆಯೂ ಇದೆ.

ಕಸ್ಟಡಿಗೆ ಪಡೆದು ಜೈಲಿಗೆ ಹಾಕಬೇಕು: ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ
‘ಸ್ನೇಹಮಯಿ ಕೃಷ್ಣ ಅಧಿಕೃತ ರೌಡಿಶೀಟರ್’ ಎಂದು ಬಹಿರಂಗವಾಗಿ ಆರೋಪಿಸುವ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಅವರನ್ನು ಚೆಕ್ ಬೌನ್ಸ್ ಪ್ರಕರಣ ವಿಚಾರವಾಗಿ ಈ ದಿನ.ಕಾಮ್ ಮಾತನಾಡಿಸಿದಾಗ, “ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ 2019ರಿಂದಲೂ ಒಬ್ಬ ರೌಡಿಶೀಟರ್. ಅವರ ವಿರುದ್ಧ 44 ಕ್ರಿಮಿನಲ್ ಕೇಸ್ಗಳಿವೆ. ಬ್ಲ್ಯಾಕ್ಮೇಲ್, ಕೊಲೆ, ಭೂ ಅವ್ಯವಹಾರ ಕೇಸ್ ದಾಖಲಾಗಿವೆ. ಗಡಿಪಾರಾದ ವ್ಯಕ್ತಿ. ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯ 420 ಎಂದು ಹೇಳಿ ಶಿಕ್ಷೆ ಜಾರಿ ಮಾಡಿದೆ. ಈ ತರ ಎಷ್ಟು ಜನಕ್ಕೆ ಇವನಿಂದ ಮೋಸವಾಗಿದೆ. ಇವನ ವೃತ್ತಿಯೇ ಬ್ಲ್ಯಾಕ್ ಮೇಲ್ ಮಾಡಿಕೊಂಡು ಜೀವನ ನಡೆಸುವುದು. ಶಿಕ್ಷೆಯ ಪ್ರಮಾಣ ಪ್ರಕಟವಾದ ಕೂಡಲೇ ಪೊಲೀಸರು ಈತನನ್ನು ಕಸ್ಟಡಿಗೆ ಪಡೆದು ಜೈಲಿಗೆ ಹಾಕಬೇಕು” ಎಂದು ಹೇಳಿದರು.
“ಸ್ನೇಹಮಯಿ ಕೃಷ್ಣ ಅರ್ಜಿ ಇ.ಡಿ ಅರ್ಜಿ ಸಲ್ಲಿಸಿದರೆ ಸಾಕು ಇ.ಡಿ ಅವರು ಕೋರ್ಟ್, ಸಿಬಿಐ ಹಾಗೂ ಕೇಂದ್ರ ಸರ್ಕಾರವೇ ನಿರ್ದೇಶನ ನೀಡಿದೆ ಎನ್ನುವಂತೆ ವಿಚಾರಣೆ ನಡೆಸುತ್ತಾರೆ. ಒಬ್ಬ ಸಾಮಾನ್ಯ ಜನರು ಹೀಗೆ ಜಾರಿ ನಿರ್ದೇಶನಾಲಯಕ್ಕೆ ಹೋಗಿ ದೂರು ಕೊಟ್ಟರೆ ಕೂಡಲೇ ವಿಚಾರಣೆ ನಡೆಸುತ್ತಾರಾ? ಸಾಧ್ಯವೇ ಇಲ್ಲ. ಸ್ನೇಹಮಯಿ ಕೃಷ್ಣ ಹಿಂದೆ ಬಿಜೆಪಿಯ ದೊಡ್ಡ ಪಡೆಯೇ ಬೆಂಬಲವಾಗಿ ನಿಂತಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಒಂದು ವಾದಕ್ಕೆ 22 ಲಕ್ಷ ಹಣ ತೆಗೆದುಕೊಳ್ಳುತ್ತಾರೆ. ಅಂತಹ ನ್ಯಾಯಾಧೀಶರನ್ನು ಇವರು ನೇಮಿಸಿಕೊಳ್ಳುತ್ತಾರೆ ಎಂದರೆ ಇವರ ಹಿಂದಿನ ಆರ್ಥಿಕ ಶಕ್ತಿ ಯಾವುದು ಎಂಬುದು ಅರ್ಥವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಬ್ಲ್ಯಾಕ್ಮೇಲರ್ ವ್ಯಕ್ತಿಗೆ ಕೋರ್ಟ್ ಹೆಚ್ಚು ಪ್ರೋತ್ಸಾಹಿಸಬಾರದು. ಕಠಿಣ ಶಿಕ್ಷೆಗೆ ಗುರಿಪಡಿಸಬೇಕು” ಎಂದು ಆಗ್ರಹಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಮಸಿ ಬಳಿದು, ಅಧಿಕಾರದಿಂದ ಕೆಳಗೆ ಇಳಿಸಬೇಕು ಎಂಬುದು ಬಿಜೆಪಿಯ ಒನ್ ಲೈನ್ ಅಜೆಂಡಾ. ಇದಕ್ಕಾಗಿ ಸ್ನೇಹಮಯಿ ಕೃಷ್ಣನನ್ನು ಬಿಜೆಪಿಯವರು ಬಳಸಿಕೊಳ್ಳುತ್ತಿದ್ದಾರೆ. ಇವನಿಗೆ ಹಣಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ಪ್ರತಿನಿತ್ಯ ಲೋಕಾಯುಕ್ತ ಕಚೇರಿಗೆ ಹೋಗಿ ಅಧಿಕಾರಿಗಳನ್ನು ಹೆದರಿಸುತ್ತಾನೆ. ಕೋರ್ಟ್ ಈಗ ಇವನಿಗೆ ಸರಿಯಾಗಿ ಬುದ್ದಿ ಕಲಿಸಬೇಕು. ನಾವು ಎಷ್ಟೇ ಇವನ ವಿರುದ್ಧ ಆರೋಪ ಮಾಡಿದರೂ ಸರ್ಕಾರವನ್ನು ನಮ್ಮ ಪರವಾಗಿ ಬಳಸಿಕೊಂಡಿಲ್ಲ. ಇವನ ಅನಾಚಾರಗಳನ್ನು ತೆರದಿಡುವ ಪ್ರಯತ್ನ ಮಾಡಿದ್ದೇನೆ. ಇವನಿಂದ ಸಾಕಷ್ಟು ಜನ ನೊಂದಿದ್ದಾರೆ. ಸ್ನೇಹಮಯಿ ಕೃಷ್ಣ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದರೆ ಮುಡಾ ಸೀಲ್ಗಳು, ದಾಖಲೆಗಳು ಸಿಗುತ್ತವೆ. ಆ ಲೇವಲ್ಗೆ ಇವನು ಕ್ರಿಮಿನಲ್ ಇದ್ದಾನೆ” ಎಂದು ದೂರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮಾತನಾಡಿ, “ಸ್ನೇಹಮಯಿ ಕೃಷ್ಣ ಹಿಂದೆ ಬೆಂಬಲಾಗಿ ನಿಂತಿರುವುದೇ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯವರು. ಈಗ ಚೆಕ್ಬೌನ್ಸ್ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ. ಅಷ್ಟು ಹಣ ಕೊಡದ ವ್ಯಕ್ತಿ ಲಕ್ಷಾಂತರ ಹಣ ಕೊಟ್ಟು ಸುಪ್ರೀಂ ಕೋರ್ಟ್ ವಕೀಲರನ್ನು ಹೇಗೆ ನೇಮಿಸಿಕೊಳ್ಳುತ್ತಾನೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ನೇಹಮಯಿ ಕೃಷ್ಣನನ್ನು ಬಳಸಿಕೊಳ್ಳಲಾಗುತ್ತಿದೆ. ಯತ್ನಾಳ್ ಅವರು ಮಾಡಿರುವ ಆರೋಪಗಳು ಇ.ಡಿ, ಸಿಬಿಐ ಕಿವಿಗೆ ಬೀಳುವುದಿಲ್ಲ. ಸ್ನೇಹಮಯಿ ಕೃಷ್ಣ ಹೋದ ತಕ್ಷಣ ಇವನಿಗೆ ದೊಡ್ಡ ಗೌರವಕೊಟ್ಟು ಪ್ರಕರಣ ದಾಖಲಿಸಿಕೊಳ್ಳುತ್ತದೆ. ಇವನೊಬ್ಬ ಮೋಸಗಾರ ಎಂಬುದು ಈಗ ಸಾಬೀತಾಗಿದೆ. ಕಠಿಣ ಶಿಕ್ಷೆಯಾದಾಗಲೇ ಇಂತಹವರಿಗೆ ಜ್ಞಾನೋದಯವಾಗುವುದು” ಎಂದು ಹೇಳಿದರು.