- ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಣೆ ಆರೋಪ
- ‘ಹೊಡೆಯಿರಿ’ ಎಂದು ವಿದ್ಯಾರ್ಥಿಗಳಿಗೆ ಪ್ರಚೋದಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
‘ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದ ಊಟ-ತಿಂಡಿ ನೀಡಿದರೆ ಹಾಸ್ಟೆಲ್ ವಾರ್ಡನ್ನನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಚೆನ್ನಾಗಿ ಬಾರಿಸಿ’ ಎಂದು ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಪ್ರಚೋದನೆ ನೀಡಿರುವ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಚಿತ್ರದುರ್ಗದಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಊಟ ಸರಿಯಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ಪರಿಶೀಲನೆ ನಡೆಸಲು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಸ್ಟೆಲ್ಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಊಟ-ತಿಂಡಿಯಲ್ಲಿ ಕೊಳೆತ ತರಕಾರಿ ಬಳಸಲಾಗುತ್ತಿದೆ. ಅನ್ನದಲ್ಲಿ ಹುಳಗಳು ಸಿಗುತ್ತವೆ ಎಂದು ದೂರಿದ್ದರು.
ಇದರಿಂದ ಸಹನೆ ಕಳೆದುಕೊಂಡ ಶಾಸಕರು, ‘ಅನ್ನದಲ್ಲಿರುವ ಹುಳಗಳನ್ನು ಆರಿಸಿ ತಟ್ಟೆಯಲ್ಲಿ ಹಾಕಿ ವಾರ್ಡನ್ಗೆ ಊಟ ಮಾಡಿಸಿ, ಬಳಿಕ ವಾರ್ಡನ್ ಅನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಬಾರಿಸಿ, ಆಮೇಲೆ ಏನಾಗುತ್ತೋ ನೋಡೋಣ, ನಾನಿದ್ದೀನಿ’ ಎಂದು ಪ್ರಚೋದನೆ ನೀಡಿದ್ದಾರೆ.
‘ಈ ರೀತಿ ಮಾಡದೇ ಇದ್ದರೆ ಹಾಸ್ಟೆಲ್ನ ವ್ಯವಸ್ಥೆ ಸರಿ ಹೋಗುವುದಿಲ್ಲ. ಎಷ್ಟು ಸಾರಿ ಹೇಳಿದರೂ ಇವರು ಬುದ್ಧಿ ಕಲಿಯುವುದಿಲ್ಲ’ ಎಂದು ಶಾಸಕರು ಪೊಲೀಸರ ಸಮ್ಮುಖದಲ್ಲೇ ವಿದ್ಯಾರ್ಥಿಗಳು ವಾರ್ಡನ್ಗೆ ಥಳಿಸುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
‘ಜನಪ್ರತಿನಿಯೊಬ್ಬರು ಈ ರೀತಿ ಪ್ರಚೋದನಾತ್ಮಕವಾಗಿ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಒಂದು ವೇಳೆ ವಿದ್ಯಾರ್ಥಿಗಳು ಕಾನೂನು ಕೈಗೆತ್ತಿಕೊಂಡರೆ ಅದರಿಂದಾಗುವ ಅನಾಹುತಕ್ಕೆ ಯಾರು ಹೊಣೆ’ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.