ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ಅಟ್ಟಹಾಸ ಬಹಳ ನಡೆಯುತ್ತಿದೆ. ಜಿಲ್ಲೆಯ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಎಲ್ಲದರಲ್ಲೂ ತಮಗೆ ಬೇಕಾದವರನ್ನು ಸಹಚರರನ್ನಾಗಿ ಜೋಡಿಸಿಕೊಂಡು ಎಲ್ಲ ರೀತಿಯ ದಂಧೆಗಳಲ್ಲಿ ತೊಡಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಶನಿವಾರ ಮಾತನಾಡಿದ ಅವರು, “ಮರಳು ದಂಧೆ ಇದೆ. ಟೈಲ್ಸ್, ಸಿಮೆಂಟ್ ಫ್ಯಾಕ್ಟರಿಗಳ ದಂಧೆ ಇದೆ. ಎಲ್ಲ ರೀತಿಯ ದಂಧೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಟ್ರಾಕ್ಟ್ ವಿಚಾರಕ್ಕೂ ಬೇಕಾದವರ ನೇಮಕ ಆಗಿದೆ. ಇದೇ ಕಾರಣಕ್ಕೂ ಸಚಿನ್ ಅವರ ಆತ್ಮಹತ್ಯೆ ಆಗಿದೆ” ಎಂದು ಆರೋಪಿಸಿದರು.
“ಸಚಿನ್ ಆತ್ಮಹತ್ಯೆ ಬಗ್ಗೆ ಉನ್ನತ ತನಿಖೆ ಆಗಬೇಕು. ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೈಬಿಡಬೇಕು. ಅಲ್ಲದೆ ತಕ್ಷಣ ಅವರನ್ನು ಬಂಧಿಸಬೇಕು. ಅವರು ಸಂಪೂರ್ಣವಾಗಿ ತನಿಖೆಗೆ ಸಹಕರಿಸುವಂತೆ ಸರಕಾರ ಮಾಡಬೇಕು. ಇಲ್ಲವಾದರೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಅಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಮೃತ ಸಚಿನ್ ಅವರು 7 ಪುಟಗಳ ಡೆತ್ ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲೂ ಹಾಕಿದ್ದಾರೆ. ಅದರಲ್ಲಿ ಆಂದೋಲ ಸ್ವಾಮೀಜಿ, ಚಂದು ಪಾಟೀಲ, ಬಸವರಾಜ ಮತ್ತಿಮೂಡ ಅವರನ್ನು ಸುಪಾರಿ ಕೊಟ್ಟು ಸಾಯಿಸುವ ವಿಚಾರವೂ ಪ್ರಸ್ತಾಪವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಳೆದುಹೋದ ವರ್ಚಸ್ಸು ಮತ್ತು ಗೇಲಿಯ ಸರಕಾದ ‘ಹೈಡ್ರಾಮಾ’
ರಿಪಬ್ಲಿಕ್ ಆಫ್ ಗುಲ್ಬರ್ಗ ವ್ಯವಸ್ಥೆ
“ಅದು ರಿಪಬ್ಲಿಕ್ ಆಫ್ ಗುಲ್ಬರ್ಗ ಆಗಿದೆ. ಕರ್ನಾಟಕದ ವ್ಯವಸ್ಥೆಯೇ ಬೇರೆ; ಗುಲ್ಬರ್ಗದ ವ್ಯವಸ್ಥೆಯೇ ಬೇರೆಯಾಗಿದೆ. ಪೊಲೀಸರು ಕೂಡ ಅಲ್ಲಿ ಪ್ರಿಯಾಂಕ್ ಖರ್ಗೆಯವರು ಹೇಳಿದ್ದೇ ಆಡಳಿತ ಎಂಬಂತೆ ನಡೆದುಕೊಳ್ಳುತ್ತಾರೆ. ಅಲ್ಲಿ ಖರ್ಗೆ ಮನೆತನದ ದೊಡ್ಡ ಪಾರುಪತ್ಯ ನಡೆದಿದೆ. ಬೇರೆ ಯಾರಿಗೂ ಮಾತನಾಡಲು ಅವಕಾಶ ಇಲ್ಲ.ವಿಶೇಷವಾಗಿ ದಲಿತ ಸಮುದಾಯಗಳು ಅವರ ವಿರುದ್ಧ ಮಾತನಾಡಿದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಯಾರಾದರೂ ಅವರ ವಿರುದ್ಧ ಮಾತನಾಡಿದರೆ, ಪೊಲೀಸಿನವರು ಅಂಥವರ ಮನೆ ಮುಂದೆ ಇರುತ್ತಾರೆ” ಎಂದು ಆರೋಪಿಸಿದರು.