“ಗ್ರಾಮ ಪಂಚಾಯಿತಿಯಿಂದ ಅಸೆಂಬ್ಲಿ ವರೆಗೆ, ಉದ್ಯೋಗ ಬಡ್ತಿಯಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿಗೆ ಬರಲಿದೆ. ನಮಗಿಂತಲೂ ಹಿಂದುಳಿದ ಶೋಷಿತ ಅಲೆಮಾರಿಗಳಿಗೆ ಒಳಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಬದ್ದರಿದ್ದೇವೆ. ನಾವೆಲ್ಲರೂ ಮತ್ತು ಸಿದ್ದರಾಮಯ್ಯ ಸೇರಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ದಾವಣಗೆರೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ ಎಚ್ ಮುನಿಯಪ್ಪ ಸ್ಪಷ್ಟಪಡಿಸಿದರು.
ಶೋಷಿತ ಸಮುದಾಯಗಳಿಗೆ ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಜಾರಿಗೊಳಿಸಿ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿ ಆದೇಶ ನೀಡಿದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾ ನೇತೃತ್ವದಲ್ಲಿ ಒಳಮೀಸಲಾತಿ ವಿಜಯೋತ್ಸವ ಆಚರಿಸಿದರು.

ದಾವಣಗೆರೆಯ ಮಹಾನಗರ ಪಾಲಿಕೆಯ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಒಳಮೀಸಲಾತಿಗಾಗಿ 35 ವರ್ಷ ಹೋರಾಟ ಮಾಡಿದ ಎಲ್ಲಾ ಮಾದಿಗ ಸಮುದಾಯಕ್ಕೆ, ದಲಿತ ಸಂಘಟನೆಗಳ ಕಾರ್ಯಕರ್ತರಿಗೆ ಅಭಿನಂದನೆಗಳು. ಊಟ ನೀರು ನೆರಳಿಲ್ಲದೇ ಹೋರಾಟ ಮಾಡಿದ್ದೀರಿ. ಅದೆಲ್ಲದರ ಫಲವಾಗಿ ನಮ್ಮ ಒಳಮೀಸಲಾತಿ ಪಾಲು ಸಿಕ್ಕಿದೆ ಎಂದು ಅಭಿನಂದಿಸಿದರು.
“ಸುಪ್ರೀಂಕೋರ್ಟ್ ಒಳಮೀಸಲಾತಿ ಐತಿಹಾಸಿಕ ತೀರ್ಪಿನ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಅವರು ಸಕಾರಾತ್ಮಕವಾಗಿ ಇದರ ಪರವಾಗಿ ಜಾರಿಗೊಳಿಸುವ ಆಶಯ ವ್ಯಕ್ತಪಡಿಸಿದರು. ಶಿವರಾಜ್ ತಂಗಡಗಿ, ಮಹದೇವಪ್ಪ, ತಿಮ್ಮಾಪುರ , ಪ್ರಿಯಾಂಕಾ ಖರ್ಗೆ ಸೇರಿದಂತೆ ಎಲ್ಲಾ ಕ್ಯಾಬಿನೆಟ್ ಸಚಿವರು ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಳಮೀಸಲಾತಿ ಜಾರಿಗೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
“ಸದಾಶಿವ ಆಯೋಗ, ಮಾಧುಸ್ವಾಮಿ, ನಾಗಮೋಹನ್ದಾಸ್, ಹಾವನೂರು ಸೇರಿ ಆಯೋಗಗಳು ಮಾದಿಗರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಿದೆ ಎಂದು ವರದಿ ನೀಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಎಸ್ ಸಿ ಕಮಿಷನ್ ಜಾರಿಗೆ ತರಲು ತೀರ್ಮಾನಿಸಿದೆ. ಆಗಾಗ್ಗೆ ಮಾಡಿಫಿಕೇಷನ್ ಆಗಲಿದೆ. ಪರಿಶಿಷ್ಟ ಜಾತಿಯ 101 ಸಮುದಾಯದವರೂ ಮುಂದಿನ ಸಮೀಕ್ಷೆಯಲ್ಲಿ ಅವರವರ ಜಾತಿ ಬರೆಸಬೇಕು.12 ಲಕ್ಷಿ ಜನ ಜಾತಿ ಗಣತಿಯಲ್ಲಿ ಸರಿಯಾಗಿ ಜಾತಿ ಬರೆಸಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

“ಬೊಮ್ಮಾಯಿ, ಕಾರಜೋಳರವರು ಬಿಜೆಪಿ ಸರ್ಕಾರ ಇದ್ದಾಗ ಒಳಮೀಸಲಾತಿಗೆ ಶಿಫಾರಸು ಮಾಡಿದ್ದಾರೆ. ಆದರೆ ಇಂದು ಬಿಜೆಪಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ನೀವು ಸದಾಶಿವ ಆಯೋಗ ವರದಿ ತಿರಸ್ಕರಿಸಿದಿರಿ. ಸಂಘಟನೆಗಳು ಸದಾಶಿವ ಆಯೋಗದ ವರದಿ ಜಾರಿಗೆ ಹೋರಾಟ ಮಾಡಿದ್ದವು. ಆದರೆ ನೀವು ತಿರಸ್ಕರಿಸಿ ಮೂಲೆಗೆ ತಳ್ಳಿದಿರಿ. ಆದರೆ ಅದನ್ನೂ ತೆಗೆದುಕೊಂಡು ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಿದೆ. ಶೋಷಿತರಿಗೆ ಒಳಮೀಸಲಾತಿ ಜಾರಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್ ಬದ್ಧವಾಗಿದೆ” ಎಂದು ಬಿಜೆಪಿಯವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
“ಹೈಕಮಾಂಡ್ ಆದೇಶ ಮೇರೆಗೆ ಜಾರಿ ಮಾಡಲಾಗಿದೆ.
ನಮ್ಮ ಜಾತಿ ಹೆಚ್ಚು ಎನ್ನುವವರು ಸಮೀಕ್ಷೆಯಲ್ಲಿ ಬರೆಸಿ ತೋರಿಸಬೇಕು. ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯವರು ಅರ್ದಕ್ಕರ್ಧ ಸಮೀಕ್ಷೆಯಲ್ಲಿ ಒಳಗೊಂಡಿಲ್ಲ, ಜಾತಿ ಬರೆಸಿಲ್ಲ. ಆದಿ ದ್ರಾವಿಡ , ಆದಿ ಆಂದ್ರ, ಆದಿ ಕರ್ನಾಟಕ ಎಂದು ಸಮೀಕ್ಷೆಯಲ್ಲಿ ಬರೆಸಿದವರು ತಮ್ಮ ಜಾತಿಯನ್ನು ಸರಿಯಾಗಿ ಬರೆಸಿ. ಸರ್ಕಾರ, ಸಮುದಾಯವನ್ನು ಗೊಂದಲಕ್ಕೆ ಈಡು ಮಾಡಬೇಡಿ” ಎಂದು ಕರೆ ನೀಡಿದರು.

“ಎಸ್ಸಿಪಿ ಟಿಎಸ್ಪಿ (SCP TSP) ಕಾಯ್ದೆ ಜಾರಿಗೆ ಹೋರಾಟ ಮಾಡಿ ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಆಂಜನೇಯ ಕಾರಣ. ಇದರಿಂದಾಗಿ ಸಾಕಷ್ಟು ಪ್ರಯೋಜನ ದೊರಕಿದೆ. ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯ ಸಜ್ಜನರಾಗಿ, ಗುಣಮಟ್ಟದ ಶಿಕ್ಷಣ ಪಡೆದು, ಸ್ವಾಭಿಮಾನದ ಬದುಕು ಬದುಕುವ ಮೂಲಕ ಬೇರೆ ಸಮಾಜಗಳ ಜೊತೆ ಅಣ್ಣ ತಮ್ಮಂದಿರಂತೆ ಬದುಕಬೇಕು” ಎಂದು ಆಶಿಸಿದರು.
ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಆಂಜನೇಯ ಮಾತನಾಡಿ “ಸುದೀರ್ಘ ಹೋರಾಟದ ಫಲವಾಗಿ ಒಳಮೀಸಲಾತಿ ಜಾರಿಗೆ ಬಂದಿದೆ. ಬಾಬು ಜಗಜೀವನ್ ರಾಂ ನಂತರ ರಾಷ್ಟ್ರದ ಎಡಗೈ ಸಮುದಾಯದ ನಾಯಕರಾಗಿ ಮುನಿಯಪ್ಪ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅದರಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರ, ಮತ್ತು ಹಿಂದುಳಿದ ವರ್ಗಗಳ ಚಾಂಪಿಯನ್ ಆಗಿದ್ದಾರೆ. ಒಳ ಮೀಸಲಾತಿ ವರ್ಗೀಕರಣ ಜಾರಿಗೊಳಿಸಿದ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಸಮಾಜದ ಪರವಾಗಿ ಅಭಿನಂದನೆಗಳು” ಎಂದು ಶ್ಲಾಘಿಸಿದರು.

“ಸರ್ಕಾರ ಒಳ ಮೀಸಲಾತಿ ಜಾರಿಗೆ ತಂದು ಹೊಟ್ಟೆ ತುಂಬಾ ಅನ್ನ ಹಾಕಿದೆ. ಆಗಸ್ಟ್ ಒಂದರ ಒಳಮೀಸಲಾತಿ ವರ್ಗೀಕರಣದ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ. ನಮ್ಮ ಸಮುದಾಯ ಸದಾಶಿವ ಆಯೋಗ ವರದಿ ಬರಬೇಕು ಎಂದಾಗ ನಮ್ಮಲ್ಲಿ ಬೇರೆ ಬೇರೆ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದರು. ಅನೇಕ ಸರ್ಕಾರಗಳು ಸದಾಶಿವ ಆಯೋಗದ ವರದಿಯನ್ನು ಮುಟ್ಟಲು ಹೆದರಿದ್ದವು. ನಾಗಮೋಹನ್ ದಾಸ್ ಆಯೋಗ ವೈಜ್ಞಾನಿಕ ಸಮೀಕ್ಷೆ ನಡೆಸಿ ಉದ್ಯೋಗ, ಶಿಕ್ಷಣ ಸಾಮಾಜಿಕ ಸ್ಥಿತಿಯಲ್ಲಿ ಮಾದಿಗರು ಹಿಂದುಳಿದಿದ್ದಾರೆ ಎಂದು ವರದಿ ನೀಡಿದೆ” ಎಂದು ತಿಳಿಸಿದರು.
“ಆದರೆ ಈ ಒಳ ಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯವಾಗಿದೆ. ದಕ್ಕಲಿಗರು ಸೇರಿ ಶೋಷಿತ ಅಲೆಮಾರಿಗಳು ನಮಗಿಂತ ಹಿಂದುಳಿದಿದ್ದಾರೆ. ಅಲೆಮಾರಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಮಾದಿಗರಾದ ನಮಗೆ ಹಂಚಿ ತಿನ್ನುವ ಗುಣದ
ಇತಿಹಾಸವಿದೆ. ಮಾದಾರ ಚನ್ನಯ್ಯ ಶಿವನಿಗೂ ಅವಿನಾಭಾವ ಸಂಬಂಧವಿತ್ತು. ಶಿವನಿಗೆ ಅಂಬಲಿ ಉಣಿಸಿದ ಜನಾಂಗ, ಮಾದಿಗ ಜನಾಂಗ. ಬಸವಣ್ಣ ಮರುಳಸಿದ್ಧರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡ ಶರಣ ಪರಂಪರೆಯ ಸಮಾಜ. ಹಾಗಾಗಿ ಅಲೆಮಾರಿಗಳಿಗೆ ನ್ಯಾಯ ಸಿಗಲು ನಾವು ಕೂಡ ಅವರ ಜೊತೆ ನಿಲ್ಲಬೇಕಿದೆ” ಎಂದು ಅಭಿಪ್ರಾಯಪಟ್ಟರು
“ಒಳಮೀಸಲಾತಿ ಶೇ 6 ಪಾಲು, ಬಡ್ತಿಯಲ್ಲೂ ಮೀಸಲಾತಿ ಸಿಗಲಿದೆ. ನಮಗೆ ಆರ್ಥಿಕ, ಉದ್ಯೋಗ, ಗುತ್ತಿಗೆ, ಇಂಡಸ್ಟ್ರಿ ಸೈಟ್ ಸೇರಿದಂತೆ ಶೇ. 6 ಮೀಸಲಾತಿ ಎಲ್ಲದರಲ್ಲೂ ಸಿಗಲಿದೆ. ಆಂದ್ರ, ತೆಲಂಗಾಣದಲ್ಲಿ ಜಿಲ್ಲೆಯ ಸಂಖ್ಯೆ ಆಧಾರದ ಮೇಲೆ ಮೀಸಲಾತಿ ಇದ್ದು, ಅದರಂತೆ ಇಲ್ಲಿ ಕೂಡ ಜಿಲ್ಲೆಗಳಲ್ಲಿ ಸಮುದಾಯದ ಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಬೇಕು. ಈ ಬಗ್ಗೆ ಅಧ್ಯಯನ ನಡೆಸಬೇಕಿದೆ. ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು ಮಾದಿಗ ಸಮುದಾಯ ಮುಂದೆ ಬರಬೇಕು ಎಂದು ಅನುಕಂಪ ತೋರಿಸಿ ಸಹಾಯ ಮಾಡಿದ್ದಾರೆ” ಎಂಬ ಸ್ಮರಿಸಿದರು.

“ಬಸವರಾಜು ಬೊಮ್ಮಾಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಒಳ ಮೀಸಲು ಜಾರಿಗೆ ಶಿಫಾರಸು ಮಾಡಿದೆ. ಆದರೆ ಒಳಮೀಸಲಾತಿ ಜಾರಿಗೆ ಅಧಿಕಾರ ಇರಲಿಲ್ಲ. ಅದು ಸಿದ್ದರಾಮಯ್ಯನವರಿಗೆ ಸಿಕ್ಕಿತು” ಎಂದು ಹರ್ಷ ವ್ಯಕ್ತಪಡಿಸಿದರು
“ಮಾದಿಗ ಮಹಾಸಭಾ ಬೇರೆಯವರ ಸಮುದಾಯದ ಮಾದರಿಯಲ್ಲಿ ಮಾದಿಗ ಮಹಾಸಭಾ ಚುನಾವಣೆಯಲ್ಲಿ ಪದಾಧಿಕಾರಿಗಳು ಆರಿಸಿ ಬರಬೇಕು. ಇದು ಯಾರೊಬ್ಬರ ಸ್ವತ್ತಾಗಬಾರದು. ಸಮುದಾಯ ಕುಡಿತ ಬಿಟ್ಟು ಸ್ವಾಭಿಮಾನದಿಂದ ದುಡಿದು ಉಳಿತಾಯ, ಮಕ್ಕಳ ಶಿಕ್ಷಣ ಕೊಡಿಸಬೇಕು. ಇನ್ನು ಮುಂದೆ ಹಳ್ಳಿಗಳಲ್ಲಿ ಸರ್ವೇ ನಡೆಸಿ, ಸಮುದಾಯದ ಮಕ್ಕಳನ್ನು ಶಾಲೆಗೆ ಸೇರಿಸಲು ಹೋರಾಟ ಮಾಡಬೇಕು. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ಮಾಡಬೇಕು. ಆದರೆ ನಾವು ಬರೀ ಹೋರಾಟ ಮಾಡಿ ಶಿಕ್ಷಣ ಸಂಘಟನೆಯಲ್ಲಿ ಹಿಂದುಳಿದಿದ್ದೇವೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ ? ರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹ
ದಲಿತ ಕಲಾ ಮಂಡಳಿಯ ಹೆಗ್ಗೆರೆ ರಂಗಪ್ಪ, ದೊಡ್ಡಪ್ಪ,, , ಐರಣಿ ಚಂದ್ರು ಸೇರಿದಂತೆ ಇತರ ಕಲಾವಿದರು ಅಂಬೇಡ್ಕರ್, ಒಳಮೀಸಲಾತಿ ಕುರಿತು ಕ್ರಾಂತಿ ಗೀತೆ ಹಾಡಿದರು.

ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ, ಶಾಸಕ ಶಾಂತನಗೌಡ, ಶಾಸಕ ಕೆ ಎಸ್ ಬಸವಂತಪ್ಪ, ಮಾಜಿ ಸಂಸದ ಚಂದ್ರಪ್ಪ, ಮೈಸೂರು ವಿ ವಿ ಪರೀಕ್ಷಾಂಗ ಕುಲಪತಿ ಡಾ. ಎಸ್ ವಿಶ್ವನಾಥ್, ಬಿ ಎಚ್ ವೀರಭದ್ರಪ್ಪ, ದಸಂಸ ಮುಖಂಡ ಕುಂದುವಾಡ ಮಂಜುನಾಥ್, ದುಗ್ಗಪ್ಪ , ನಿವೃತ್ತ ಡಿವೈಎಸ್ಪಿ ರವಿ ನಾರಾಯಣ್, ಹರಿಹರ ಮಲ್ಲೇಶ್, ಹನುಮಂತಪ್ಪ, ಕಾಂಗ್ರೆಸ್ ಮುಖಂಡ ನಗರಸಭೆ ಸದಸ್ಯ ಎಸ್ ಮಲ್ಲಿಕಾರ್ಜುನ್, ಗೋಣೆಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ, ಶಾಂತಿನಗರ ಮಂಜುನಾಥ್, ಲಿಂಗರಾಜು ಗಾಂಧಿನಗರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಮಾದಿಗ ಸಮುದಾಯದ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.